00947. ಈ ಹೊತ್ತಿನ ತಲ್ಲಣ


00947. ಈ ಹೊತ್ತಿನ ತಲ್ಲಣ
__________________________


ಬೆಕ್ಕಸಬೆರಗಾಗುವ ಸರದಿ ಬದುಕಿಗೆ
ಕೊನೆ ಮೊದಲಿಲ್ಲದ ಯಾವತ್ತಿನ ತಲ್ಲಣ
ಮೊಬೈಲುಗಳು ಸ್ಮಾರ್ಟಾಗಿ ಬದಲು
ನಾವಾಗದಿದ್ದರೆ ನಮದೂ ಕಂದನ ತೊದಲಾಟ..

ಸುಮ್ಮನೆ ಬಟ್ಟೆ ತೊಟ್ಟಂತಲ್ಲ ಠಾಕುಠೀಕಾಗಿ
ಕಿತ್ತೆಸೆಯಬೇಕಂತೆ ಒಳಗಿನ ನೋಕಿಯಾ !
ನಿನ್ನೆ ಮೊನ್ನೆ ಅದರಾಚೆ ಕಲಿತಿದ್ದೆಲ್ಲ ಶಿಸ್ತು ಶೂನ್ಯ
ಗೊತ್ತಿರದ ಹೊಸ ತಲ್ಲಣ ಅಶಿಸ್ತಿಗೀಯುತ ಜಾಗ …

ಪ್ರಗತಿ ವಿಕಾಸ ಬಂಡವಾಳಶಾಹಿ ಸಮಾನತೆ
ಅವರವರ ಬಾವುಟ ಹಿಡಿದು ನಡಿಗೆ ಓಟ ಕೂಟ
ಯಾರು ನಾಯಕ ? ಯಾರ ಹಿಂಬಾಲಕ ಯಾರು ?
ನಂಬುವುದಾರನು ಬಿಡುವುದಾರನು ಗೊಂದಲ ಶುದ್ಧ..

ಕಾಲು ಚಾಚಿದ್ದು ಮೊದಲು ನಮ್ಮ ಮನೆಯೊಳಗಷ್ಟೆ
ಊರಾಯ್ತು ಗಡಿ ದಾಟಿ ದೇಶಾತೀತ ಜಾಗತಿಕವೀಗ
ವ್ಯಾಪ್ತಿ ದಾಟಿ ಎಲ್ಲೆ ಮೀರಿ ನಿಸ್ತಂತುವಿನ ಜತೆಗೆ ಲಲ್ಲೆ
ದವಸ ಧಾನ್ಯ ತಿನ್ನುವನ್ನಕು ಪೇಟೆಂಟಿಗೆ ಸಹಯೋಗ ..

ತಲ್ಲಣಗಳ ತಲ್ಲಣ ವಯಸು ಅನುಭವ ಶೂನ್ಯ
ಬದಲಾಗುವ ವೇಗ ಅಪ್ರಸ್ತುತವಾಗಿಸುವ ಸಕಲ
ವೃದ್ಧಾಪ್ಯ ಓಡಬೇಕು ಪ್ರಾಯದ ಜತೆಗೆ ಸ್ಪರ್ಧೆಯಲಿ
ಯೌವ್ವನ ಬಾಲ್ಯದ ಜತೆ ಹೆಣಗಾಡಬೇಕು ಉಳಿವಿಗೆ..

ತಲ್ಲಣಗಳೇನೆಂದೆ ಅರಿವಾಗದ ತಲ್ಲಣ ವಾಸ್ತವ
ತಲ್ಲಣವಿಲ್ಲದ ದಿನವಿಲ್ಲ ಬದುಕಿಲ್ಲ ಭವಿತದ ಸತ್ಯ
ತಲ್ಲಣವೆ ಬದುಕಾದರೆ ತಲ್ಲಣಕಷ್ಟೆ ಬಾಳುವೆ ಸುಲಭ
ಆ ಕಾಲದ ಶಾಂತಿ ನೆಮ್ಮದಿ – ಪಳೆಯುಳಿಕೆ ಹುಡುಕೆ ..

ತಲ್ಲಣಿಸದಿರು ಕಂಡ್ಯಾ ತಾಳು ಮನವೆ ಎಂದರೂ
ತಲ್ಲಣಿಸದಿರಲಾಗದ ಕಾಲ ನಿಯಮ ಬಂದಂತಿದೆ
ತಲ್ಲಣಿಸದೆ ದಿನ ದೂಡಲು ರಾಮಾ ಕೃಷ್ಣ ಶಿವಧ್ಯಾನಕು
ಬಿಡದೆ ದುಡಿತಕೆ ಹಚ್ಚಲಿದೆ ತಲ್ಲಣ ಕೊನೆಯುಸಿರತನಕ..

– ನಾಗೇಶ ಮೈಸೂರು
20.10.2016
(Send to competition of same title)
This work is licensed under a Creative Commons Attribution-NonCommercial-ShareAlike 3.0 Unported License

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮ ಟಿಪ್ಪಣಿ ಬರೆಯಿರಿ