01601. ಬರೆದು ಮುಗಿಯದ ಕಾವ್ಯ..
__________________________________
ಏನೊ ಕಕ್ಕುತೈತೆ, ಕಣ್ಣಾಳದ ನೋಟ
ಬಿಕ್ಕಿ ಬಿಕ್ಕೀ ಅತ್ತಂಗೆ, ಕನ್ನೆ ಮುಖ ಪುಟ
ಕಪ್ಪು ಚುಕ್ಕಿ ಹಣೆಮ್ಯಾಗೆ, ಪೂರ್ಣಚಂದ್ರ
ಚುಕ್ಕಿಚುಕ್ಕಿ ವೇದನೆ, ಚುಚ್ಚಿಕೊಂಡ ಲಾಂದ್ರ ||
ಕಳುವಾಗೈತೇನೊ ಪಾಪ, ಕಕ್ಕುಲತೆ ಬೇನೆ
ಕಾಡೈತೆ ಬಿಡದೆ, ಹೇಳಲಾಗದ ಶೋಧನೆ
ಏನದವ್ವಾ ಬಾಯ್ಬಿಡದ, ಅನಿವಾರ್ಯ ಮೌನ ?
ಯಾಕೆ ನುಂಗಿ ಗರಳ, ನೀಲಕಂಠನ ಸದನ ? ||
ಮರೆಮಾಚಲ್ಯಾಕವ್ವ, ಹೇರಿಕೊಂಡ ಲೋಲಾಕು?
ತುಟಿಗ್ಹಚ್ಚಿ ತಂಬಾಕು, ಮೋರೆಗೆ ಬಳಿದ ಸರಕು
ಕೆಂಪು ಗಿಣಿಮೂತಿ, ಮಾವಂಥ ಚಂದದ ಮಲ್ಲಿ
ಯಾಕೀ ಸಪೂರ ದೇಹ, ಅಳುಕೈತೆ ಸಂಕಟ ಚೆಲ್ಲಿ ? ||
ಪದವೊಂದರ ಖರ್ಚಿಲ್ಲದೆ, ಕಟ್ಟಿದ್ದೀಯೆಲ್ಲ ಕಥೆಯ
ಮಾತೊಂದರ ಹಂಗಿಲ್ಲದೆ, ಬರೆದಿದ್ದೀ ಮಹಾಕಾವ್ಯ
ನೀನೇನೇನೊ ಹೇಳಿದ್ದಿ, ಇನಿತಿಷ್ಟೂ ಬಿಡಿಸಿಲ್ಲ ಒಗಟ
ಒಡಪೊಡೆದಷ್ಟು ನಿಗೂಢ, ಮತ್ತೆ ಕಾಡೊ ನಿನ್ನೀ ನೋಟ! ||
– ನಾಗೇಶ ಮೈಸೂರು
೧೩.೦೨.೨೦೧೮
(Picture source : Internet / social media – received via Madhu Smitha – thank you very much 😊👍🙏👌)