ಪ್ರಾಜೆಕ್ಟ್ ‘ಕಸಂ!’(ಗುಬ್ಬಣ್ಣ ಎಗೈನ್! )


ಲಘು ಪ್ರಹಸನ / ಹರಟೆ: (ಗುಬ್ಬಣ್ಣ ಎಗೈನ್! )

ಪ್ರಾಜೆಕ್ಟ್ ‘ಕಸಂ!’


‘ಏನ್ ಸಾರ್.. ಅಷ್ಟೊಂದು ಬರೀತಿರಲ್ಲ.. ಎಷ್ಟು ಬುಕ್ ಬಂದಿದೆ..?’ ಎನ್ನುವ ಪ್ರಶ್ನೆಯನ್ನು ಕೇಳಿ ಕೇಳಿ ತಲೆ ಚಿಟ್ಟು ಹಿಡಿದುಹೋಗಿತ್ತು.. ಬುಕ್ಕಾಗಿಸದವ ಬರಹಗಾರನೆ ಅಲ್ಲ ಎಂಬ ಅಲಿಖಿತ ನಿಯಮವೆ ಇದೆಯೇನೊ ಅಂದುಕೊಂಡೆ ಪರಮ ಪಾಪಿ ಸನ್ಮಿತ್ರ ಗುಬ್ಬಣ್ಣನನ್ನು ಕೇಳಿದ್ದೆ..

‘ಈಗ ಏನ್ ಮಾಡೋದೊ ಗುಬ್ಬಣ್ಣ?’

‘ಮಾಡೋದೇನು ಅಂತ ಕೇಳ್ತಿರಲ್ಲ ಸಾರ್? ಒಂದಷ್ಟು ಖರ್ಚು ಮಾಡಿ ಪುಸ್ತಕ ಮಾಡಿಸಿಬಿಡಿ.. ನಿಮ್ದು ಒಂದು ಹೆಸರು ನೇತಾಡ್ಲಿ ಗುಂಪಲ್ ಗೋವಿಂದ ಅಂತ..’ ಡಿಸಿಶನ್ ಕೊಟ್ಟೆಬಿಟ್ಟ ಗುಬ್ಬಣ್ಣ..

‘ಈಗ ಕವಿತೆಗಳನ್ನ ಯಾರು ಕೊಂಡುಕೊಂಡು ಓದ್ತಾರೊ ಗುಬ್ಬಣ್ಣ? ಪಬ್ಲಿಷರ್ಸ್ ಅಂತು ನಮ್ಕಡೆ ತಲೇನೆ ಹಾಕ್ಬೇಡಿ ಅಂತಾರೆ.. ನಾವೆ ಪಬ್ಲಿಷ್ ಮಾಡೊದಂದ್ರೆ ಅದಕ್ಕೆ ಬೇಕಾದ ನೆಟ್ವರ್ಕ್ ಇಲ್ವೊ.. ಸುಮ್ನೆ ಕಾಸು ಹಾಕಿ ಕೈ ಸುಟ್ಕೊಳೊ ವ್ಯವಹಾರ ಆಗುತ್ತೇನೊ ಅಂತ..?’

‘ಸಾರ್ ಈ ಅಂತೆ ಕಂತೆಗಳ ರಾಗ ಎಳೆಯೋದು ಬಿಟ್ಟು, ‘ಒಂದಷ್ಟು ಕಾಸು ಕೈ ಬಿಡ್ತು’ ಅಂತ ಮನಸು ಗಟ್ಟಿ ಮಾಡ್ಕೊಂಡು ಪ್ರಾಜೆಕ್ಟಿಗೆ ಕೈ ಹಾಕಿ.. ಚೀಪ್ ಅಂಡ್ ಬೆಸ್ಟ್ ಆಗಿ ಮಾಡಿ ಕೈ ತೊಳ್ಕೊಳಿ..’ ಎಂದು ಮತ್ತಷ್ಟು ಪುಕ್ಕಟೆ ಸಲಹೆ ಕೊಟ್ಟ.. ಅವನು ಪ್ರಾಜೆಕ್ಟ್ ಅನ್ನುತ್ತಿದ್ದ ಹಾಗೆ, ಯಾಕೆ ಇದನ್ನೊಂದು ಪ್ರಾಜೆಕ್ಟ್ ಹಾಗೆ ಮ್ಯಾನೇಜು ಮಾಡಿ ಪ್ರಯತ್ನಿಸಬಾರದು ಅನಿಸಿತು..

‘ಹೌದೊ ಗುಬ್ಬಣ್ಣ.. ಇದೊಂದು ಪ್ರಾಜೆಕ್ಟ್ ಅಂತ್ಲೆ ಟ್ರೈ ಮಾಡ್ಬೇಕು, ಪ್ರೊಫೆಶನಲ್ಲಾಗಿ ಹ್ಯಾಂಡಲ್ ಮಾಡಿ ನೋಡ್ಬೇಕು.. ನಿನಗೆ ಹೆಂಗಿದ್ರು ಅದರ ಅನುಭವನು ಇದೆ.. ಸ್ವಲ್ಪ ಐಡಿಯಾಸ್ ಕೊಡು..’

‘ಸರಿ ಹಾಗಾದ್ರೆ ಎಲ್ಲಾದಕ್ಕು ಮೊದಲು ನಿಮ್ಮ ಪ್ರಾಜೆಕ್ಟಿಗೊಂದು ಹೆಸರು ಕೊಡಿ ಸಾರ್.. ತೊಗೊಳಿ ಅದನ್ನ ನಾನೆ ಸಜೆಸ್ಟ್ ಮಾಡ್ತೀನಿ.. ‘ಪ್ರಾಜೆಕ್ಟ್ ಕಸಂ’ ಅಂತಿಡಿ..’

‘ಲೋ.. ಲೋ.. ಏನು ಹೆಸರೊ ಇದು? ಮೊದಲನೆ ಪುಸ್ತಕದ ಪ್ರಾಜೆಕ್ಟು .. ಅದಕ್ಕೆ ಕಸ ಕಡ್ಡಿ ಅಂತ ಅಶುಭಗಳನ್ನೆ ಸೇರಿಸ್ತಾ ಇದ್ದಿಯಲ್ಲೊ?’

‘ಛೇ.. ಛೇ ಹಾಗಲ್ಲ ಸಾರ್.. ನೀವು ಸ್ವಲ್ಪ ಅರ್ಜೆಂಟೇಶ್ವರರು.. ಮೊದಲು ಕಸಂ ಅಂದ್ರೆ ಏನು ಅಂತ ಕೇಳಿದ್ರಾ? ಇಲ್ಲ! ಎಲ್ಲಕ್ಕು ಮೊದಲೆ ಜಡ್ಜ್ ಮಾಡಿಬಿಡ್ತೀರಲ್ಲ?’

‘ಸರಿ.. ಕಸಂ ಅಂದ್ರೆ ಏನು?’

‘ಸಿಂಪಲ್ಲಾಗಿ ಕನ್ನಡದಲ್ಲಿ ‘ಕವನ ಸಂಕಲನ’ದ ಶಾರ್ಟ್ ಫಾರ್ಮ್ – ಕ.ಸಂ …! ಹಿಂದಿಯಲ್ಲು ‘ಕಸಂ’ ಅಂತ ಪದ ಇದೆ ಗೊತ್ತಲ್ಲ? ‘ಸನಂ ತೇರಿ ಕಸಂ’, ‘ಕಸಂ ತೇರಾ ವಾದ’, ‘ಮೇರಾ ಮಾಕಿ ಕಸಂ’ ಅಂತೆಲ್ಲ ಪ್ರಾಮೀಸ್ ಮಾಡೋದನ್ನ ಕೇಳಿದ್ದಿರಲ್ಲ? ಇದು ನೀವು ನಿಮ್ಮ ಓದುಗ ಅಭಿಮಾನಿಗಳಿಗೆ ಮಾಡ್ತಿರೊ , ನೀಡ್ತಿರೊ ಮೊದಲನೆ ‘ಕಸಂ’ ಅರ್ಥಾತ್ ‘ಕವನ ಸಂಕಲನ’ ದ ಪ್ರಾಮೀಸ್ ಅಂತಲು ಆಗುತ್ತೆ.. ಶಾರ್ಟ್ ಅಂಡ್ ಸ್ವೀಟಾಗಿ ‘ಪ್ರಾಜೆಕ್ಟ್ ಕಸಂ’ ಅನ್ನೊ ಹೆಸರು ಕ್ಯಾಚೀ ನೇಮ್ ಕೂಡ ಆಗುತ್ತೆ..’ ತನ್ನ ಲಾಜಿಕ್ ಮುಂದಿಟ್ಟ ಗುಬ್ಬಣ್ಣ.. ಯಕಃಶ್ಚಿತ್ ಒಂದು ಕವನ ಸಂಕಲನದ ಯತ್ನವನ್ನೆ, ಇವನು ಪ್ರಾಮೀಸಿನಿಂದ ಪ್ರಾಮೀಸರಿ ನೋಟ್ ನ ಮಟ್ಟಕ್ಕೇರಿಸುತ್ತಿರುವುದನ್ನು ಕಂಡು ತುಸು ಭಯವೆ ಆಯ್ತು..

‘ಹಾಳಾದವನೆ.. ಮೊದಲೆ ಹಿಂದಿ ಹೇರಿಕೆ, ಅದೂ ಇದೂ ಅಂತ ಚರ್ಚೆ ನಡೀತಾ ಇರುತ್ತೆ, ಸೋಶಿಯಲ್ ಮೀಡಿಯಾಲಿ. ನೀನು ಪ್ರಾಜೆಕ್ಟಿಗೆ ಹಿಂದಿ ಹೆಸರು ಇಡುಂತಿಯಲ್ಲ ? ಸಾಲದ್ದಕ್ಕೆ ಕನ್ನಡದಲ್ಲಿ ಕಸಂ ಅಂಥ ಓದಿದಾಗ ಗುಡಿಸಿ ಎಸೆಯೊ ಕಸವನ್ನ ನೆನಪಿಸಿದ ಹಾಗೆ ಆಗಲಿಲ್ವಾ? ಕಸದ ಬುಟ್ಟಿಯನ್ನ ನೆನೆಸಿಕೊಳ್ಳೊ ಹಾಗೆ ಆಗಲ್ವಾ..? ಬುಕ್ ಬಗ್ಗೆ ಮಾತಾಡ್ದೆ ಹೆಸರಿನ ಬಗ್ಗೆ ಟೀಕಿಸ್ತಾರೊ..!’ ನಾನು ಕಷ್ಟದಿಂದ ಕೋಪ ತಡೆದುಕೊಳ್ಳುತ್ತ ಹೇಳಿದೆ..

ಇಷ್ಟಕ್ಕೆಲ್ಲ ಹೆದರುವ ಅಸಾಮಿಯೆ ಗುಬ್ಬಣ್ಣ? ಹೇಳಿ, ಕೇಳಿ ‘ಕನ್ಸಲ್ಟೆಂಟು’ .. ‘ಕನಸಲ್ಲು ಬಿಡದೆ ಟೆಂಟು’ ಹಾಕಿಕೊಂಡು ಕಾಡುವ ದೆವ್ವದಂಥ ಕನ್ಸಲ್ಟೆಂಟು ನಾನು – ಅಂತ ಅವನೇ ಹೇಳಿಕೊಳ್ತಾ ಇರ್ತಾನೆ…

‘ಏನು ಮಾತಾಡ್ತೀರಿ ಸಾರ್ ನೀವು? ಇವತ್ತು ಏನೇ ಸೇಲ್ ಆಗ್ಬೇಕಿದ್ರು ಮೊದ್ಲು ಸುದ್ಧಿ ವೈರಲ್ ಆಗ್ಬೇಕು ಸಾರ್ ವೈರಲ್..! ನೆಟ್ಟಗಿದ್ರೆ ನೆಟ್ಟಿನಲ್ಲಿ ಯಾವ ಸುದ್ಧಿ ವೈರಲ್ ಆಗುತ್ತೆ ಹೇಳಿ? ಹೀಗೆ ಸ್ವಲ್ಪ ಸೊಟ್ಟಂಬಟ್ಟ ಇದ್ರೇನೆ ಜನರ ಗಮನ ಸೆಳೆಯೋದು.. ಆ ಕ್ಯೂರಿಯಾಸಿಟಿ ಬಂದ್ರೆ ಆಮೇಲೆ ಡೀಟೈಲ್ಸ್ ನೋಡ್ತಾರೆ.. ಇಲ್ಲಿ ಹಿಂದಿ – ಕನ್ನಡ ಆಂಗಲ್ ಬಂದ್ರೆ ಇನ್ನೂ ವಾಸಿ! ಜಾಸ್ತಿ ಧೂಳೆದ್ದಷ್ಟು ಜಾಸ್ತಿ ಪಬ್ಲಿಸಿಟಿ..! ಇಲ್ದಿದ್ರೆ ಯಾರೂನು ಮೂಸೂ ಕೂಡ ನೋಡಲ್ಲ ಗೊತ್ತ? ಗುಂಪಲ್ಲಿ ಗೋವಿಂದ ಆಗೋಗುತ್ತೆ.. ಇಷ್ಟಕ್ಕು ನಾನೇನು ಬುಕ್ ನೇಮ್ ‘ಕಸಂ’ ಅಂತಿಡಿ ಅಂದ್ನಾ? ಬರಿ ಪ್ರಾಜೆಕ್ಟ್ ನೇಮ್ ಅಷ್ಟೆ ತಾನೆ? ಪ್ರಾಜೆಕ್ಟ್ ಹೆಸರೇನು ನೀವು ಊರಿಗೆಲ್ಲ ಢಂಗೂರ ಸಾರಿಸಬೇಕಾಗಿಲ್ಲವಲ್ಲ? ನಿಮಗೆ, ನನಗೆ ಗೊತ್ತಿದ್ರೆ ಸಾಕು..’ ಎಂದು ಮತ್ತೊಂದು ಪುಟ್ಟ ಭಾಷಣವನ್ನೆ ಬಿಗಿದ.. ಹಾಳಾಗಿ ಹೋಗಲಿ ಎಂದು ನಾನು ಮೌನವಾಗಿ ತಲೆಯಾಡಿಸಿದೆ – ಹಾಗಾದರು ಬುಕ್ಕಿಗೆ ಪಬ್ಲಿಸಿಟಿ ಸಿಗುವುದಾದರೆ ಯಾಕೆ ಬೇಡ ಎನ್ನಬೇಕು ? ಎಂದು ಲಾಜಿಕ್ಕಿಸುತ್ತ..

ಅನಂತರ ಸುಮಾರು ಹೊತ್ತು ‘ಬಿಸಿಬಿಸಿ’ ಚರ್ಚೆ ನಡೆಯಿತು ‘ಕಸಂ’ ನ ಮುಂದಿನ ಹೆಜ್ಜೆಗಳನ್ನು ಕುರಿತು.. ಕೊನೆಗೆ ತಕ್ಷಣದಲ್ಲಿ ಮಾಡಬೇಕಾದ ಒಂದೆರಡು ಅವಸರದ ಕಾರ್ಯಗಳನ್ನು ಗುರುತಿಸಿಕೊಟ್ಟ ಗುಬ್ಬಣ್ಣ..

‘ಸಾರ್.. ನಿಮಗೇ ಗೊತ್ತು.. ಪ್ರಿಂಟಿಂಗ್ ಅಂತ ಹೋದರೆ, ಮಿನಿಮಮ್ ಕ್ವಾಂಟಿಟಿ ಮಾಡಿಸಬೇಕಾಗುತ್ತೆ.. ರೇಟು ಎಲ್ಲಾ ಅದರ ಮೇಲೆ ಅವಲಂಬಿಸಿರುತ್ತೆ.. ನೀವು ಜಾಸ್ತಿ ಮಾಡಿಸಿದಷ್ಟು ‘ಚೀಪ್’ ಆಗಿ ವರ್ಕೌಟ್ ಆಗುತ್ತೆ.. ಆಗ ನೀವು ಮಾರೋ ದರನು ಕಡಿಮೆ ಇಡಬಹುದು – ಜನ ರೇಟು ನೋಡಾದ್ರು ತೊಗೊಬಹುದು.. ಕಡಿಮೆ ವಾಲ್ಯೂಂ ಅಂದ್ರೆ ಬುಕ್ ರೇಟು ಜಾಸ್ತಿಯಾಗುತ್ತೆ , ಆದರೆ ಕೊಳ್ಳೊ ಜನ ಕಮ್ಮಿ ಆಗ್ತಾರೆ..’

‘ಹಾಗಾದ್ರೆ ಇಷ್ಟು ಕಾಪಿ ಅಂತ ಹೇಗೆ ಡಿಸೈಡ್ ಮಾಡೋದೊ ಗುಬ್ಬಣ್ಣ..?’

‘ಸಿಂಪಲ್ ಸಾರ್.. ಒಂದು ಮಾರ್ಕೆಟ್ ಸರ್ವೆ ಮಾಡಿಬಿಡೋಣ.. ನಿಮ್ಮ ಸೋಶಿಯಲ್ ಮೀಡಿಯಾಲೆ ಒಂದು ಸರ್ವೆ ಮಾಡಿ ಕೇಳೋಣ – ಬುಕ್ ಮಾಡಿದ್ರೆ ತೊಗೋತಾರ? ಎಷ್ಟು ರೇಟು ಒಳಗಿದ್ರೆ ತೊಗೋತಾರೆ? ಇತ್ಯಾದಿ.. ಅದು ಗೊತ್ತಾದ ಮೇಲೆ ಅಷ್ಟು ವಾಲ್ಯೂಮಿಗೆ ಒಳ್ಳೆ ರೇಟಲ್ಲಿ ಪ್ರಿಂಟು ಮಾಡೊ ಮುದ್ರಕರು, ಪ್ರಕಾಶಕರು ಸಿಗ್ತಾರ ನೋಡ್ಬೇಕು – ಅದು ಸೆಕೆಂಡ್ ಸ್ಟೆಪ್. ಅಲ್ಲಿಂದಾಚೆಗೆ ಎಲ್ಲಾ ತಂತಾನೆ ಆಗುತ್ತೆ..’

ಅವೆರಡನ್ನು ಮೊದಲು ಮಾಡೋದು ಅನ್ನೊ ನಿರ್ಧಾರದೊಂದಿಗೆ, ‘ಪ್ರಾಜೆಕ್ಟ್ ಕಸಂ’ ನ ಮೊದಲ ದುಂಡು ಮೇಜಿನ ಕಾನ್ಫರೆನ್ಸ್ , ಮುಂದಿನ ಮೀಟಿಂಗಲ್ಲಿ ‘ಗುಂಡಿರಬೇಕೆಂಬ’ ಕಂಡಿಶನ್ನಿನೊಂದಿಗೆ ಮುಕ್ತಾಯವಾಯ್ತು..

ಅದಾದ ಒಂದೆರಡು ವಾರದ ನಂತರ ಮತ್ತೆ ಮುಂದಿನ ದುಂಡು ಮೇಜಿನ ಪರಿಷತ್ತಿನಲ್ಲಿ ಭೇಟಿಯಾದ ಗುಬ್ಬಣ್ಣ – ಪ್ರಾಮೀಸ್ ಮಾಡಿದ್ದಂತೆ – ಬೀರಿನ ಸೇವಾರ್ಥದೊಡನೆ.. ಅಂದ ಹಾಗೆ, ದುಂಡು ಮೇಜೆಂದರೆ ನಮ್ಮ ಹಾಕರ್ ಸೆಂಟರುಗಳಲ್ಲಿ ಇರುವ ರೌಂಡ್ ಟೇಬಲ್ ಅಷ್ಟೆ.. ಓಫನ್ ಏರಲ್ಲಿ ಕೂತು ಬೀರಬಲ್ಲರು ಬೀರೇಳಿಸುವ ಜಾಗವೇ ಹೊರತು, ಬೀರಮ್ಮಂದಿರು ತಮ್ಮ ಮೈಮಾಟ, ಮಾದಕ ಭಂಗಿಗಳಿಂದ ನವಿರೇಳಿಸುವ ತಾಣಗಳಲ್ಲ.. ಹೀಗಾಗಿ ಯಾವುದೆ ‘ಸೀರಿಯಸ್’ ಡಿಸ್ಕಶನ್ನಿಗೆ ಅದು ಸೂಕ್ತ ಜಾಗ.. ಬೀರನ್ನು ಮೀರಿಸಿದ ಕಿಕ್ಕ್ ಬೇಕೆಂದವರಿಗು ಅವರ ಶಕ್ತಾನುಸಾರ ‘ಹಾಟ್ ಡ್ರಿಂಕ್ಸ್’ ಲಭ್ಯ.. ಬೀರಾಗದವರಿಗು ನೀರೊ, ಮತ್ತೊಂದೊ ಸಿಗುವುದರಿಂದ ಅದೊಂದು ಸರ್ವ ಸಮ್ಮತ ತೀರ್ಥ ಕ್ಷೇತ್ರವೆಂದೆ ಹೇಳಬಹುದು.. ಅಲ್ಕೋಹಾಲೊ, ಬರಿ ಹಾಲೊ – ಬೇಕಾದ ಆಯ್ಕೆಯ ಸಾಧ್ಯತೆಯಿರುವುದರಿಂದ ಅಲ್ಲಿ ಜನ ಜಂಗುಳಿಯು ಹೆಚ್ಚು.. ಕುಡಿಯುತ್ತ ತಿನ್ನುತ್ತ ಮಾತಾಡಲು ಅನುಕೂಲವಾಗುವ ಹಾಗೆ ಬರಿಯ ದುಂಡು ಮೇಜುಗಳೆ ಇರುವುದರಿಂದ ಆ ಹೆಸರು..

‘ಎಲ್ಲಿಗೆ ಬಂತು ಸಾರ್ ನಿಮ್ಮ ‘ಕಸಂ’?’ ಬೀರನ್ನು ಸಿಪ್ಪಿಸುತ್ತ ಕೇಳಿದ ಗುಬ್ಬಣ್ಣ.. ಕಸಂ ಎಂದಿದ್ದಕ್ಕೆ ಕೋಪ ಬಂದರು ಜಗಳವಾಡುವ ಮೂಡಿಲ್ಲದೆ, ನುಂಗಿಕೊಂಡು ಹೇಳಿದೆ..

‘ಗುಬ್ಬಣ್ಣ.. ಸರ್ವೆನಲ್ಲಿ ಸುಮಾರು ೫೦೦ ಜನ ರೆಸ್ಪಾಂಡ್ ಮಾಡಿದಾರೊ.. ಇನ್ನೂರು ರೂಪಾಯಿ ಒಳಗಿದ್ರೆ ಅವ್ರಲ್ಲಿ ಶೇಕಡ ತೊಂಬತ್ತರಷ್ಟು ಜನ ಬುಕ್ ತೊಗೋತಾರಂತೊ..!’

‘ಗ್ರೇಟ್ ಸಾರ್..! ಹಾಗಾದ್ರೆ ಮೊದಲೆ ಯಾಕೆ ದುಡ್ಡು ತೊಗೊಂಡು ಅಡ್ವಾನ್ಸ್ ಬುಕಿಂಗ್ ಮಾಡಿಬಿಡಬಾರದು? ಆಗ ನಿಮ್ಮ ಕೈಯಿಂದ ಖರ್ಚಿಲ್ಲದೆ ಬುಕ್ ಮಾಡಿಸಿ, ಅವರಿಗೆ ದಾಟಿಸಿ ನೀವು ಪ್ರಾಫಿಟ್ ಜೋಬಿಗಿಳಿಸಬಹುದು..’ ಎಂದ ಗುಬ್ಬಣ್ಣ ‘ಗ್ರೇಟ್ ಡಿಸ್ಕವರಿ’ ಮಾಡಿದವನಂತೆ..

‘ಗುಬ್ಬಣ್ಣ.. ದಟ್ ಇಸ್ ಗ್ರೇಟ್ ಬಿಜಿನೆಸ್ ಮಾಡೆಲ್.. ಬಟ್ ಇಟ್ ನೆವರ್ ಫ್ಲೈ..! ನಮ್ಮಲ್ಯಾರೊ ಮೊದಲೆ ದುಡ್ಡು ಕೊಟ್ಟು ಬುಕ್ಕನ್ನ ಬುಕ್ ಮಾಡ್ತಾರೆ – ಅದು ಹಿಂದು ಮುಂದು ಗೊತ್ತಿಲದ ಲೇಖಕನ ಮೊದಲನೆ ಪುಸ್ತಕವನ್ನ? ಸದ್ಯ ತೊಗೊತಿವಿ ಅಂಥ ಹೇಳ್ತಿರೋದೆ ದೊಡ್ಡದು..!’ ನಾನು ಉವಾಚಿಸಿದೆ.

‘ಹೋಗ್ಲಿ ಬಿಡಿ ಸಾರ್ .. ಅಲ್ಲಿಗೆ ಒಂದು ನಾನೂರು – ಐನೂರು ಬುಕ್ಸ್ ಮಾಡಿಸಿದರೆ ಸಾಕಲ್ವ? ಅದನ್ನ ಚೀಪಾಗಿ ಮಾಡೋ ಪ್ರಕಾಶಕರು ಯಾರಾದ್ರು ಗೊತ್ತಾದ್ರ?’

‘ಒಬ್ಬರು ಲೋ ವಾಲ್ಯೂಂ ಪಬ್ಲಿಷರ್ ಸಿಕ್ಕಿದಾರೊ.. ಮಾರ್ಕೆಟಿಂಗ್ ಕೂಡ ಮಾಡ್ತಾರಂತೆ.. ಕಡಿಮೆ ವಾಲ್ಯೂಮ್ ಆದ್ರೆ ಪರ್ ಪೀಸ್ ರೇಟು ಜಾಸ್ತಿ ಆಗುತ್ತೆ ಅಂದ್ರು..’

‘ಐನೂರಕ್ಕೆ ಕೇಳಿದ್ರ ಸಾರ್..?’

‘ಹೂಂ ಕೇಳಿದೆ.. ಆದ್ರೆ ಆ ರೇಟಲ್ಲಿ ಮಾಡಿಸಿದ್ರೆ ಮಾರೊ ರೇಟು ಮುನ್ನುರರ ಹತ್ರ ಬರುತ್ತೆ.. ನಮಗೆ ಇನ್ನೂರರ ಒಳಗೆ ಇರಬೇಕು..’

‘ಓಹೋ..!’

‘ಆದರೆ ಅದೇ ಸಾವಿರ ಪ್ರತಿ ಮಾಡಿಸಿದ್ರೆ ಪ್ರತಿ ಪುಸ್ತಕನು ನೂರು ರೂಪಾಯಿ ಆಸುಪಾಸಲ್ಲಿ ಮಾರ್ಬೋದಂತೆ..! ಆ ವಾಲ್ಯೂಮಲ್ಲಿ ತುಂಬಾ ಚೀಪ್ ಆಗಿ ವರ್ಕೌಟ್ ಆಗುತ್ತೆ ಅಂದ್ರು..’

‘ಅದಕ್ಕೆ..?’

‘ನೂರು ರೂಪಾಯಿ ರೆಂಜಲ್ಲಿ ಮಾರೋದಾದ್ರೆ ಇನ್ನು ಜಾಸ್ತಿ ಜನ ತೊಗೊಬೋದು ಅಲ್ವಾ? ಅದಕ್ಕೆ ಸಾವಿರ ಪ್ರತಿಗೆ ಆರ್ಡರ್ ಕೊಟ್ಟುಬಿಟ್ಟೆ ಗುಬ್ಬಣ್ಣಾ..!!’

‘ಆಹ್..! ಆರ್ಡರ್ ಕೊಟ್ಟಾಗೋಯ್ತ..?’ ನನ್ನ ಮಾತಿಗೆ ಬೆಚ್ಚಿ ಬಿದ್ದವನಂತೆ ಕೇಳಿದ ಗುಬ್ಬಣ್ಣ..

‘ಹೂಂ ಕಣೊ.. ಈಗ ಪ್ರಮೋಶನ್ ಟೈಮ್ ಅಂತೊ.. ನಾನು ಸೆಲೆಕ್ಟ್ ಮಾಡಿರೊ ಕವನಗಳು ಒಂದು ಬುಕ್ಕಲ್ಲಿ ಸಾಲೋದಿಲ್ವಂತೆ.. ಅದಕ್ಕೆ ಎರಡು ಬುಕ್ ಮಾಡಿಸಿಬಿಡಿ ಅಂದ್ರು .. ಆಗ ಒಂತರ ಇನ್ನೂರರ ರೇಂಜಲ್ಲೆ ಮಾರಿದ ಹಾಗಾಗುತ್ತೆ.. ನಿಮಗೂ ಲಾಸಾಗಲ್ಲ ಅಂತ ಸಜೆಸ್ಟ್ ಮಾಡಿದ್ರು..’

‘ಆಮೇಲೆ..?’ ತುಸು ಗಾಬರಿ, ಕೋಪ ಮಿಶ್ರವಾದ ದನಿಯಲ್ಲೆ ಕೇಳಿದ ಗುಬ್ಬಣ್ಣ.. ಅವನ ಕನ್ಸಲ್ಟಿಂಗ್ ಸಹಾಯವಿಲ್ಲದೆ ಎಲ್ಲಾ ನಾನೇ ಡೀಲ್ ಮಾಡಿಬಿಟ್ಟೆನೆಂಬ, ಅವನ ಅಹಮ್ಮಿಗೆ ಪೆಟ್ಟು ಬಿದ್ದ ರೋಷಕ್ಕಿರಬಹುದು.. ನಾನು ಅದನ್ನು ನಿರ್ಲಕ್ಷಿಸಿ ಮುಂದುವರೆಸಿದೆ..

‘ಆಯ್ತು ಅಂತ ಜೋಡಿ ಸಂಕಲನ, ‘ಥೌಸೆಂಡ್ ಕಾಫಿಸ್ ಈಚ್’ – ಆರ್ಡರು ಕೊಟ್ಟುಬಿಟ್ಟೆ.. ನಮ್ಮ ಲೆಕ್ಕದಂತೆ ಐನೂರೆ ಸೆಟ್ ಸೇಲ್ ಆದರು ಸಾಕು , ನಮ್ಮ ಬಂಡವಾಳದ ಮೇಲೆ ಇಪ್ಪತ್ತು ಪರ್ಸೆಂಟ್ ಲಾಭ.. ಅದರಾಚೆಗೆ ಮಾರಿದ್ದೆಲ್ಲವು ಲಾಭದ ಲೆಕ್ಕಕ್ಕೇನೆ..!‘ ಎಂದು ಕಣ್ಣಲ್ಲೆ ನಕ್ಷತ್ರ ಲೋಕ ಅರಳಿಸುತ್ತ ಹೇಳಿದೆ.. ಗುಬ್ಬಣ್ಣನಿಗೆ ಅದೇನನಿಸಿತೊ ಏನೊ?

‘ಸರಿ ಸಾರ್.. ಇನ್ನು ನಿಮ್ಮ ಪ್ರಾಜೆಕ್ಟಿಗೆ ಕನ್ಸಲ್ಟೆಂಟು ಅವಶ್ಯಕತೆ ಏನೂ ಬೇಡ.. ನೀವು ಪಬ್ಲಿಷರ್ ಜೊತೆ ಮಿಕ್ಕಿದ ಕೆಲಸ ಮುಂದುವರೆಸಿಕೊಂಡು ಹೋಗಿ.. ‘ಅಲ್ ದಿ ಬೆಸ್ಟ್’‘ ಎಂದವನೆ, ದುರ್ದಾನ ತೆಗೆದುಕಂಡವನಂತೆ ಎದ್ದು ಹೋಗಿಬಿಟ್ಟ..! ನಾನು ‘ಈ ಗುಬ್ಬಣ್ಣನಿಗೆ ಎಲ್ಲಾ ನಾನೆ ಮ್ಯಾನೇಜ್ ಮಾಡಿಕೊಂಡೆ ಅಂಥ ಹೊಟ್ಟೆಕಿಚ್ಚು ಜಾಸ್ತಿ..’ ಎಂದು ಗೊಣಗುತ್ತ ಮೇಲೆದ್ದೆ – ಪೆಂಡಿಂಗ್ ಇದ್ದ ಬುಕ್ಕಿನ ಕಂಟೆಂಟ್ ಸೆಲೆಕ್ಷನ್, ಎಡಿಟಿಂಗ್, ಟೈಪಿಂಗ್ ಇತ್ಯಾದಿ ಕೆಲಸಗಳತ್ತ ಗಮನ ಹರಿಸಲೆಂದು..


ಸುಮಾರು ತಿಂಗಳುಗಳೆ ಕಳೆದಿತ್ತು ಗುಬ್ಬಣ್ಣ ಸಿಕ್ಕಿ..

ಇವತ್ತೆ ಮತ್ತೆ ಭೇಟಿಯಾಗಿದ್ದು – ‘ಗುಂಡಿನ ಸಮೇತ‘ ದುಂಡು ಮೇಜಿನಲ್ಲಿ.. ಮತ್ತೆ ಗುಂಡಿನ ಆಸೆ ತೋರಿಸದಿದ್ದರೆ ಅವನು ಬರುತ್ತಿದ್ದುದ್ದೆ ಅನುಮಾನವಿತ್ತು! ಮಹಾನುಭಾವ ಬುಕ್ ರಿಲೀಸಿಗು ಬರದೆ ತನ್ನ ಕೋಪ ತೋರಿಸಿದ್ದ..

‘ಆಗಿದ್ದಾಯ್ತೊ ಗುಬ್ಬಣ್ಣ.. ಸಮಾಧಾನ ಮಾಡ್ಕೊಂಡು ಏನಾದ್ರು ಐಡಿಯಾ ಹೇಳೊ..’ ಎಂದೆ ಬೀರಿನ ಮೊದಲ ಗ್ಲಾಸು ಖಾಲಿಯಾದ ಮೇಲೆ..

‘ಏನು ಐಡಿಯಾ ಹೇಳಬೇಕು ಸಾರ್.. ಎಲ್ಲಾ ನೀವೆ ಮಾಡಿಕೊಂಡ್ರಲ್ಲ..?’ ಎಂದ ವ್ಯಂಗ್ಯದ ದನಿಯಲ್ಲೆ..

‘ಗುಬ್ಬಣ್ಣ.. ನೋವನ್ ಇಸ್ ಪರ್ಫೆಕ್ಟ್..! ನನಗು ಹೊಸದು .. ಅನುಭವ ಸಾಲದು.. ತಪ್ಪು ಹೆಜ್ಜೆ ಇಟ್ಟೆ.. ಈಗ ಸ್ನೇಹಿತ ಅಂತ ಬಂದಿದೀನಿ.. ಹೆಲ್ಪ್ ಮಾಡ್ತಿಯೊ ಇಲ್ವೊ ಅಷ್ಟು ಹೇಳು ..’ ಅಂದಾಗ ಸ್ವಲ್ಪ ಮೆತ್ತಗಾದ..

‘ಸರಿ ಏನಾಯ್ತು ಅಂತ ಹೇಳಿ..’

‘ಸುಮಾರು ಒಂಭೈನೂರೈವತ್ತು ಜೊತೆ ಪುಸ್ತಕಗಳು ಕೈಲಿ ಬಂದು ಕೂತಿವೆ ಕಣೊ.. ಏನಾದರು ದಾರಿ ತೋರಿಸಬೇಕು ಅವಕ್ಕೆ..’

‘ಮಾಡಿಸಿದ್ದೆ ಸಾವಿರ ಸಾವಿರ ಅಲ್ವಾ? ಐನೂರು ಖಾಲಿಯಾಗಬೇಕಿತ್ತಲ್ಲ, ಸರ್ವೆ ಪ್ರಕಾರ..?’ ಕೂತಲ್ಲೆ ಎಗರಿ ಬಿದ್ದವನಂತೆ ಭುಜ ಅದುರಿಸಿ ಕೇಳಿದ ಗುಬ್ಬಣ್ಣ..

ನಾನು ಅವನು ಅದುರಿಬಿದ್ದಿದ್ದು ಬೀರಿನ ಕಿಕ್ಕಿಗೆ ಅಂತ ನನ್ನನ್ನು ನಾನೆ ಸಂತೈಸಿಕೊಂಡು ಮುಂದುವರೆಸಿದೆ..‘ಗುಬ್ಬಣ್ಣ, ಸರ್ವೇನೆ ಬೇರೆ, ಜೀವನಾನೆ ಬೇರೆ..’

‘ಅಂದ್ರೆ..?’

‘ಆಗ ತೊಗೋತೀನಿ ಅಂದವ್ರಲ್ಲಿ ತೊಗೊಂಡೋರು ಐವತ್ತು ಜನ ಮಾತ್ರ..! ಅದೂ ಫಾಲೋ ಅಪ್ ಮಾಡಿ ಮಾಡಿ ಬಲವಂತ ಮಾಡಿದ್ದಕ್ಕೆ..’

‘ಭಗವಂತ..! ಹತ್ತೆ ಪರ್ಸೆಂಟ್ ಅಕ್ಯುರೆಸಿ…!’

‘ಮಿಕ್ಕಿದ್ದು ಮನೇಲಿ ಇಡೋಕು ಜಾಗವಿಲ್ದೆ ಕಾರಿನ ಡಿಕ್ಕಿಲಿ ತುಂಬಿಸಿಟ್ಟುಕೊಂಡಿದ್ದೇನೆ..’

‘ದೇವ್ರೆ..! ಆ ಗೌರ್ಮೆಂಟ್ ಲೈಬ್ರರಿಗೆ ೩೦೦ ಜೊತೆ ಕೊಡ್ಬೋದು ಅಂದಿದ್ರಲ್ಲ ಅದೇನಾಯ್ತು..?’

‘ಆಯ್ಯೊ ಈ ಗೌರ್ಮೆಂಟ್ ಬಿದ್ದು ಹೋದ ಗಲಾಟೇಲಿ ಆ ಕಡೆ ಯಾರು ಗಮನಾನೆ ಕೊಡಲಿಲ್ಲ.. ಆಮೇಲೆ ಲಿಸ್ಟಿಂಗ್ ಮಾಡೋಕೆ ಟೈಮ್ ಬಾರ್ ಆಗೋಯ್ತು, ಮರೆತುಬಿಟ್ಟೆ ಅಂದ್ರು ಪಬ್ಲಿಷರ್..’

ಕಣ್ಣಲ್ಲೆ ನನ್ನನ್ನೆ ನುಂಗುವಂತೆ ನೋಡಿದ ಗುಬ್ಬಣ್ಣ.. ವೆಂಡರ್ ಇವ್ಯಾಲ್ಯೂಯೇಶನ್ ಮಾಡದೆ ಸಪ್ಲೈಯರ್ ಆರಿಸಿಕೊಂಡೆನೆಂದು ಈಗಾಗಲೆ ಟೀಕಿಸಿದ್ದ ಬೇರೆ..

‘ಸರಿ.. ಈಗೇನು ಮಾಡ್ತೀರ ಹಾಗಾದ್ರೆ..’

‘ಅದೆ.. ಅದರ ಐಡಿಯಾಸ್ ಕೇಳೋಕೆ ನಿನ್ನ ಹತ್ರ ಬಂದಿದ್ದು..’

‘ನಾನೇನು ಸುಡುಗಾಡು ಐಡಿಯಾಸ್ ಕೊಡಲಿ ಈಗ? ಒಂದೊ ತೂಕಕ್ಕೆ ಹಾಕಿ ಮಾರಿಬಿಡಿ.. ಅದ್ರಲ್ಲು ಜಾಸ್ತಿಯೇನು ಗಿಟ್ಟೋಲ್ಲ.. ಪೊಟ್ಟಣ ಕಟ್ಟೋಕು ಆಗಲ್ಲ ಈ ಸೈಜಲ್ಲಿ.. ಇಲ್ಲಾಂದ್ರೆ ಲೈಫ್ ಲಾಂಗ್ ಸಿಕ್ಕಿದೊರ್ಗೆಲ್ಲ ಒಂದೊಂದೆ ಕಾಪಿ ಮಾರ್ತಾ ಹೋಗಿ ಡಿಸ್ಕೌಂಟಲ್ಲಿ.. ಒಂದಲ್ಲ ಒಂದಿನ ಖಾಲಿಯಾಗುತ್ತೆ.. ಫ್ರೀ ಕೊಟ್ರೆ ಬೇಗ ಖಾಲಿಯಾಗ್ಬೋದು.. ಇಲ್ಲಾಂದ್ರೆ ಯಾವ್ದಾದ್ರು ಗ್ರೂಪಲ್ಲಿ ಸ್ಪರ್ಧೆ ಗಿರ್ಧೆ ಅಂತ ಮಾಡಿ ಪ್ರೈಜಾಗಿ ಈ ಬುಕ್ಸನ್ನೆ ಕೊಡಿ.. ಜೊತೆಗೆ ಸ್ವಲ್ಪ ಕ್ಯಾಶ್ ವೋಚರ್ ತರ ಏನಾದ್ರು ಸೇರಿಸಿ ಕೊಟ್ರೆ ತೊಗೋತಾರೆ ಜನಾ.. ಓದಲುಬಹುದು..’ ಎಂದು ಪುಂಖಾನುಪುಂಖ ಐಡಿಯಾಗಳನ್ನ ವಾಂತಿಸಿದ ಗುಬ್ಬಣ್ಣ..

‘ಏನೊ ಗುಬ್ಬಣ್ಣ ಇದರಲ್ಲಿ ಒಂದಾದರು ಹಾಕಿದ ಕಾಸು ವಾಪಸ್ಸು ತರಿಸೊ ಐಡಿಯಾನೆ ಇಲ್ವಲ್ಲೊ..? ಸಾಲದ್ದಕ್ಕೆ ನಾನೇ ಕ್ಯಾಶ್ ಓಚರ್ ಲಂಚಾ ಕೊಟ್ಟು ಓದಿ ಅಂತ ಹೇಳ್ಬೇಕಾ? ಕನಿಷ್ಠ ಬಂಡವಾಳನಾದ್ರು ಬರ್ಬೇಕಲ್ವೇನೊ?’ ಎಂದೆ ಅಳುವ ದನಿಯಲ್ಲಿ..

‘ಬಿಲ್ಕುಲ್ ಬರಲ್ಲ ಸಾರ್.. ಬರ್ಕೊಡ್ತಿನಿ.. ಹಾಗೇನಾದ್ರು ಬರ್ಬೇಕಾದ್ರೆ ಒಂದೇ ಒಂದು ದಾರಿ ಇದೆ .. ಆದ್ರೆ ಅದು ಬುಕ್ ಮಾರೋದ್ರಿಂದ ಅಲ್ಲಾ..!’

‘ಮತ್ತೆ..?’

‘ಹೇಗಿದ್ರು ಕೈ ಸುಟ್ಕೊಂಡು ಅನುಭವ ಆಗಿದೆ ನಿಮಗೆ.. ನಿಮ್ತರಾನೆ ಬುಕ್ ಮಾಡ್ಸೊ ಮಹಾನುಭಾವರು ಸುಮಾರು ಜನ ಇರ್ತಾರೆ.. ಅವರಿಗೆ ಕನ್ಸಲ್ಟಿಂಗ್ ಸರ್ವಿಸ್ ಕೊಟ್ಟು ಕಮೀಷನ್ ತೊಗೊಳ್ಳಿ.. ಅಷ್ಟೊ ಇಷ್ಟೊ ಬರುತ್ತೆ ಅದ್ರಲ್ಲಿ..’

ಗುಬ್ಬಣ್ಣ ಖಾರವಾದ ವ್ಯಂಗದಲ್ಲಿ ಹೇಳಿದರು, ನಾನದನ್ನ ಸೀರಿಯಸ್ಸಾಗಿಯೆ ತೆಗೆದುಕೊಂಡೆ..

‘ಬೇರೆ ಇನ್ನಾವ ದಾರಿಯೂ ಇಲ್ಲಾಂತಿಯಾ?’

‘ಬಿಲ್ಕುಲ್ ಇಲ್ಲಾ.. ಸರಿ ಸಾರ್ ನಾನು ಬರ್ತಿನಿ.. ಕ್ಲೈಂಟ್ ಮೀಟಿಂಗ್ ಇದೆ’ ಎಂದವನೆ ಗ್ಲಾಸಿನಲ್ಲಿದ್ದ ಮಿಕ್ಕ ಬೀರನ್ನು ಒಂದೆ ಗುಕ್ಕಿನಲ್ಲಿ ಖಾಲಿ ಮಾಡಿ ಎದ್ದು ಹೊರಟು ಹೋದ..!

ಅಂದಹಾಗೆ, ಅವನು ಕೊಟ್ಟ ಐಡಿಯಾ ವ್ಯರ್ಥವಾಗಬಾರದೆಂದು ನಾನಂತು ಕನ್ಸಲ್ಟಿಂಗ್ ಆರಂಭಿಸಿದ್ದೇನೆ.. ನಿಮಗೇನಾದರು ನಿಮ್ಮ ಸಾಹಿತ್ಯವನ್ನ ಬುಕ್ ಮಾಡಿಸುವ ಆಲೋಚನೆ ಇದ್ದರೆ ನನ್ನನ್ನು ಸಂಪರ್ಕಿಸಿ.. ನೇರ ಕೈ ಸುಟ್ಟುಕೊಂಡ ಅನುಭವ ಇರುವುದರಿಂದ, ನಿಮ್ಮನ್ನು ಸುಡದಂತೆ ಕಾಪಾಡಬಲ್ಲೆನೆನ್ನುವ ವಿಶ್ವಾಸವಿದೆ.. ಸೋಲು ತಾನೆ ಗೆಲುವಿನ ಮೆಟ್ಟಿಲು..? ಕನ್ಸಲ್ಟಿಂಗಿಗೆ ಸಿದ್ದನಾಗಿ ‘ ಕನಸಲ್ಲು-ಟೆಂಟು’ ಹಾಕಿಕೊಂಡು ಕಾಯುತ್ತಿದ್ದೇನೆ – ನಿಮ್ಮ ಪ್ರಾಜೆಕ್ಟನ್ನು ಯಶಸ್ವಿಯಾಗಿಸಲು..

ಅಂದ ಹಾಗೆ ಈ ನನ್ನ ಹೊಸ ಪ್ರಾಜೆಕ್ಟಿಗು ಹೊಸದೊಂದು ಹೆಸರು ಕೊಟ್ಟಿದ್ದೇನೆ.. ಪ್ರಾಜೆಕ್ಟ್ ‘ಯಾಯಾ’ ಅಂತ.. ‘ಯಾಯಾ’ ಅಂದರೆ – ‘ಯಾರಿಗುಂಟು? ಯಾರಿಗಿಲ್ಲ?‘ (ಇಂಥಾ ಅದೃಷ್ಟ?) ಅನ್ನುವುದರ ಸಂಕ್ಷಿಪ್ತ ರೂಪ.. ಕೊನೆಯಲ್ಲಿ ನೀವು ಸಕ್ಸಸ್ ಆಗದಿದ್ದರು, ಈ ಹೆಸರು ನೋಡಿಯಾದರು ಸಮಾಧಾನವಾಗುತ್ತೆ – ನಿಮಗು ಇಲ್ಲ ನನಗು ಇಲ್ಲ ಅಂಥ.. ಸಕ್ಸಸ್ ಆದರೆ ಆ ಮಾತೇ ಬೇರೆ ಬಿಡಿ – ‘ಯಾರಿಗುಂಟು, ಯಾರಿಗಿಲ್ಲ ಇಂಥಾ ಭಾಗ್ಯ?‘ ಅಂಥ ಇಬ್ಬರೂ ಡ್ಯುಯೆಟ್ ಆಡಬಹುದು..! ನೋಡಿ ‘ಕಸಂ’ ದಿಂದ ‘ರಸಂ’ ಅನ್ನುವುದಕ್ಕೆ ಎಷ್ಟು ಒಳ್ಳೆಯ ಉದಾಹರಣೆ ನನ್ನ ಪ್ರಾಜೆಕ್ಟ್!

ಬರ್ತೀರಾ ತಾನೆ ಕನ್ಸಲ್ಟಿಂಗಿಗೆ..? ಸ್ಟಾರ್ಟಿಂಗಲ್ಲಿ ಪ್ರಮೋಷನಲ್ ಆಫರ್ ಕೂಡಾ ಇದೆ – ನಿಮಗೆ ನನ್ನ ಐದು ಜೊತೆ ಪುಸ್ತಕಗಳು ‘ಫ್ರೀ ಗಿಫ್ಟ್..!’ ಅದು ಮೊದಲ ಐದು ಕಸ್ಟಮರ್ಸಿಗೆ ಮಾತ್ರ.. ಜೊತೆಗೆ ನನ್ನ ಪುಸ್ತಕಗಳನ್ನು ಹೆಚ್ಚುವರಿಯಾಗಿ ಅರ್ಧ ಬೆಲೆಗೆ ಖರೀದಿಸಿ, ನೀವು ಪೂರ್ತಿ ಬೆಲೆಗೆ ಮಾರಿಕೊಳ್ಳಬಹುದು.. ನಿಮ್ಮ ಪುಸ್ತಕ ಮಾರುವ ಅನುಭವಕ್ಕೆ ಇದರಿಂದಲೆ ತರಬೇತಿಯ ಆರಂಭವಾಗುತ್ತೆ..!

ಬಂದರೆ ಈ ಅಡ್ರೆಸ್ಸಿಗೆ ಬರುವುದನ್ನ ಮರೆಯಬೇಡಿ – ‘ಯಾಯಾ ಎಂಟರ್ಪ್ರೈಸಸ್’ ಕೇರಾಫ್ ‘ಕಸಂ ಸೇ ರಸಂ ತಕ್’, ನಂಬರ್ ೪೨೦, ಬರ್ನ್ಟ್ ಹ್ಯಾಂಡ್ ಎಕ್ಸ್ಪರ್ಟ್ ಕನ್ಸಲ್ಟಿಂಗ್ ಸರ್ವೀಸಸ್, ಕಾಣದ ದಾರಿ ಮಾರ್ಗ, ದೇವರೆ ಗತಿ – ೯೯೯೯೯೯, ಮೊಬೈಲ್ ಸಂಖ್ಯೆ : ೯೮೭೬೫೪೩೨೧೦

ಏನಂತೀರಾ..? ಬರ್ತೀರಾ ತಾನೆ?

(ಮುಕ್ತಾಯ)

  • ನಾಗೇಶ ಮೈಸೂರು
    ೧೮.೦೯.೨೦೨೧

Published by

ನಾಗೇಶ ಮೈಸೂರು

ಜೀವನದ ಸುತ್ತಾಟ ಎಲ್ಲೆಲ್ಲಿಗೊ ದಾಟಿಸಿ, ಅರಿವಿನೆಲ್ಲೆ ಮೀರಿಸಿ ಅಲೆದಾಡಿಸತೊಡಗಿ ಇದ್ದಕ್ಕಿದ್ದಂತೆ ಮೂಲದ ಬೇರಿನ ತುಡಿತಗಳೆಲ್ಲ ಏನೆಲ್ಲಾ ತರದ ಸ್ವಗತಗಳಾಗಿ ಕಂಗಾಲಾಗಿಸತೊಡಗಿದಾಗ, ಅದರ ಹೊರ ಹರಿವಿಗೆ ಇದ್ದಕ್ಕಿದ್ದಂತೆ ತೆರೆದುಕೊಂಡ ಹಠಾತ್ ದ್ವಾರವೆ - ಈ 'ಮನದಿಂಗಿತಗಳ ಸ್ವಗತ' ಬ್ಲಾಗ್. ಹುಟ್ಟಿಕೊಂಡ ಹೊತ್ತಿನಿಂದ ಇನ್ನಿಲ್ಲದ ಕಕ್ಕುಲತೆಯಿಂದ ಅಪ್ಪಿಕೊಂಡ ಈ ಮನ ವೈಖರಿಯ ಪ್ರಕಟ ರೂಪ, 'ನನ್ನ ಪಾಡಿಗೆ ನಾನು' ಎಂದು ಹಾಡಿಕೊಂಡು ಹೋಗುವಾಗಲೆ ಅಲ್ಲಿಲ್ಲಿ ಸಿಕ್ಕ ಅವರಿವರನ್ನು ತಟ್ಟಿ, ಕೈ ಕುಲುಕಿ ಸಲಾಮು ಹೊಡೆದು ಮುಂದಕ್ಕೆ ನಡೆಯುತ್ತಲಿದೆ, ಇಲ್ಲಿಯವರೆಗೆ. ಬಾಲಿಶವಾಗಿ ಆರಂಭವಾದ ತುಡಿತ, ಸ್ವಗತಗಳು ತುಸು ಶಿಸ್ತಿನ ದಿರುಸುಟ್ಟು ಠಾಕುಠೀಕಾಗಿದ್ದಲ್ಲದೆ ನಡಿಗೆಯುದ್ದಕ್ಕು ಕಲಿಕೆಯ ವಿಸ್ಮಯವನ್ನು ಉಣಬಡಿಸುತ್ತ ಸಾಗಿವೆ. ಇದು 'ನನ್ನ ಮೈದಾನ, ನನ್ನ ಕುದುರೆ' ಎನ್ನುವ ಧೈರ್ಯಕ್ಕೊ ಏನೊ - ಬರೆಯಬೇಕೆನಿಸಿದ್ದೆಲ್ಲವನ್ನು ಬರೆದಿಟ್ಟು ನಿರಾಳವಾಗುವ ಪರಿ, ಇನ್ನು ಕೈ ಹಿಡಿದು ಮುನ್ನಡೆಸುತ್ತಲೆ ಇದೆ, ವಿವಿಧ ಪ್ರಯೋಗಗಳೊಡನೆ. ಮಂಕುತಿಮ್ಮನ ಪದ್ಯಗಳ ಮೇಲೆ ಟಿಪ್ಪಣಿ ಬರೆದುಕೊಳ್ಳುವಷ್ಟು ಹುಮ್ಮಸ್ಸು ಬರಲು ಬಹುಶ ಈ ಬ್ಲಾಗಿತ್ತ ಧೈರ್ಯವೆ ಕಾರಣವೇನೊ.. ಕೊನೆಯವರೆಗು ಜತೆಗುಳಿಯುವುದೂ ಕೂಡ ಬಹುಶಃ ಇದೇ ಏನೊ.. ಅಕಸ್ಮಾತಾಗಿ ಇಲ್ಲಿ ಇಣಿಕಿದರೆ - ಒಪ್ಪುಗಳ ಬಗೆ ಹೇಳದಿದ್ದರೂ ಸರಿಯೆ, ತಪ್ಪೇನಾದರು ಕಂಡರೆ ಒಂದು ಸಣ್ಣ ಸುಳಿವಿತ್ತು ಹೋಗಿ, ತಿದ್ದಿಕೊಂಡು ಕಲಿತು ಮುನ್ನಡೆಯಲು ಸಹಾಯಕವಾದೀತು, ಈ ನಿರಂತರ ಕಲಿಕೆಯ ಜೀವನ ಯಾತ್ರೆಯಲಿ 😊 ಪ್ರೀತಿಯಿಂದ, - ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s