00970. ನವೆಂಬರ 1 – ರಾಜ್ಯೋತ್ಸವ


00970. ನವೆಂಬರ 1 – ರಾಜ್ಯೋತ್ಸವ
_________________________________

ಕಳೆದ ಒಂದು ತಿಂಗಳಿನಿಂದ ರಾಜ್ಯೋತ್ಸವಕ್ಕೆ ದಿನಕ್ಕೊಂದರಂತೆ ಪ್ರತಿದಿನ ಒಂದೊಂದು ಚೌಪದಿ ಬರೆಯುತ್ತಾ ಬಂದಿದ್ದೆ. ಅದನ್ನೆಲ್ಲ ಸಂಗ್ರಹಿಸಿ ಒಂದು ಕಡೆ ಹಾಕುತ್ತಿದ್ದೇನೆ ಈ ಪೋಸ್ಟಿನಲ್ಲಿ. ಎಲ್ಲರಿಗು ರಾಜ್ಯೋತ್ಸವದ ಮುಂಗಡ ಶುಭಾಶಯಗಳನ್ನು ಕೋರುತ್ತಾ


(00) ರಾಜ್ಯೋತ್ಸವ – ಮಂಗಳಾರತಿ (01.11.2016)

ಆರತಿ ಎತ್ತಿರೆ ನಾರಿಯರೆಲ್ಲ, ಸಿರಿಮಾತೆ ಶ್ರೀ ಭುವನೇಶ್ವರಿಗೆ
ಕೊಂಡಾಡಿ ನಲಿದು, ಸುಂದರ ಪದಸೀರೆ ಉಡಿಸಿ ಕೊಡುಗೆ
ಜತೆಗರಿಶಿನ ಕುಂಕುಮ ಧೂಪ, ಹಾಕಿ ಕನ್ನಡಮ್ಮನ ಗುಡಿಗೆ
ಮಲ್ಲೆ ಜಾಜಿ ಸಂಪಿಗೆ ಸೇವಂತಿಗೆ, ಬಗೆ ಹೂವೇರಿಸಿ ಮುಡಿಗೆ ||

(30) ರಾಜ್ಯೋತ್ಸವ – ಒಂದು ದಿನ ಬಾಕಿ (31.10.2016)

ಬಲಿಯುದ್ದದ ಕಲಿ, ವಾಮನ ಗಿಡ್ಡನೆ ಪುತ್ಥಳಿ
ಅಳೆದುಬಿಟ್ಟನಲ್ಲ ಜಗ ಬ್ರಹ್ಮಾಂಡವನೇ ಕಾಲಲಿ !
ಕೀಳರಿಮೆಯೇಕೆ ಬೇಕು? ಬಾಹ್ಯದವತಾರ ನಿಮಿತ್ತ
ಕನ್ನಡತನ ಕನ್ನಡಮನ ಹೆಮ್ಮೆಯಿರೆ ವಿಶ್ವಮಾನವ ಖಚಿತ ||

(29) ರಾಜ್ಯೋತ್ಸವ – ಎರಡು ದಿನ ಬಾಕಿ (30.10.2016)

ನರಕಾಸುರನ ಕೊಂದು ಗೆದ್ದ ಹದಿನಾರು ಸಾವಿರ
ಯಾರಿಗುಂಟು ಯಾರಿಗಿಲ್ಲ ಕೃಷ್ಣನಾಮವೆ ಅಮರ
ನರಕಚತುರ್ದಶಿ ದಿನ ನಮಿಸುತಲೇ ಗೋವಿಂದನ
ಕನ್ನಡ ನರಕಾಸುರ ಮತಿಗಳಿಗೆ ಸನ್ಮತಿ ಬೇಡೋಣ ||

(28) ರಾಜ್ಯೋತ್ಸವ – ಮೂರು ದಿನ ಬಾಕಿ (29.10.2016)

ದೀಪಾವಳಿ ಹೊತ್ತಲಿ ಮಗಳು ಅಳಿಯ ಭೇಟಿ
ಆಗುತ್ತೆ ಹೇಗೂ ಬಟ್ಟೆ ಬರೆ ಒಡವೆ ಹಣ ಲೂಟಿ
ಮೃಷ್ಟಾನ್ನ ಭೋಜನ ಗಟ್ಟಿ ಹಬ್ಬಕಿರಲಿ ಪಾಯಸ
ಮಾಡಿಬಿಡಿ ರಾಜ್ಯೋತ್ಸವ ಹಬ್ಬದ ಕೊನೆ ದಿವಸ! ||

(27) ರಾಜ್ಯೋತ್ಸವ – ನಾಲ್ಕು ದಿನ ಬಾಕಿ (28.10.2016)

ಸದ್ದುಗದ್ದಲವೆಲ್ಲ ದೀಪಾವಳಿ ಮಧ್ಯೆ ಕರಗಿ
ಮರೆಯಾಗದಿರಲಿ ರಾಜ್ಯೋತ್ಸವದ ಬೆಡಗಿ
ಹೋಳಿಗೆಯೂಟ ಮೆಲ್ಲುತ ಮಾತಿನಲೇ ಚಟಾಕಿ
ಅರಿಶಿನ ಕುಂಕುಮ ರಂಗಿನ ದಿರುಸುಟ್ಟು ಪಟಾಕಿ ||

(26) ರಾಜ್ಯೋತ್ಸವ – ಐದು ದಿನ ಬಾಕಿ (27.10.2016)

ಹೈದರೆಲ್ಲ ಬನ್ನಿ, ಐದೆ ದಿನದಲ್ಲಿ ಸಂಭ್ರಮ
ಕನ್ನಡಮ್ಮನ ತೇರ ಮೆರವಣಿಗೆ, ಕಾರಣ ಜನ್ಮ
ಕೊಡುವಾ ಹೆಗಲು, ಚಕ್ರವಾಗಬಾರದು ಚೌಕ
ತೊಲಗಿಸಿ ದಿಗಿಲು, ಮುಗಿಲಿಗೆ ಕನ್ನಡ ಪುಳಕ !

(25) ರಾಜ್ಯೋತ್ಸವ – ಆರು ದಿನ ಬಾಕಿ (26.10.2016)

ಆರು ಅರಿಷಡ್ವರ್ಗ ಆರು ಮುಖ ಸುಬ್ರಮಣ್ಯ
ಒಂದಾರು ಗೆದ್ದರೆ ಬಲ ಮತ್ತೊಂದಾರು ಒಲಿಯೆ
ಆರಕ್ಕೇರದೆ ಮೂರಕ್ಕಿಳಿಯದೆ ಸುಖಿಯೆನಬೇಡ
ಆರಬಿಡದೆ ಅಭಿಮಾನವ ಕನ್ನಡ ಜೀವಂತವಾಗಿಡ ||

(24) ರಾಜ್ಯೋತ್ಸವ – ಏಳು ದಿನ ಬಾಕಿ (25.10.2016)

ಏಳು, ಎದ್ದೇಳು, ಏಳೇ ದಿನಗಳಷ್ಟೇ ಬಾಕಿ !
ಸರಸರನೆ ಹುಡುಕು ಕನ್ನಡ ತುತ್ತೂರಿ ಗಿಲಕಿ
ಕಟ್ಟು ತಲೆಗೆ ಕೆಂಪು ಹಳದಿ ಬಣ್ಣದ ರುಮಾಲು
ನೋಡಿಕೊ ಆಗದಂತದ ಬರಿ ವಾರ್ಷಿಕ ತೆವಲು !

(23) ರಾಜ್ಯೋತ್ಸವ – ಎಂಟು ದಿನ ಬಾಕಿ (24.10.2016)

ತನು ಕನ್ನಡ ಮನ ಕನ್ನಡ ಮಾತಾಗಲಿ ಘನ ಜನನಿಭಿಡ
ಎಲ್ಲಿದ್ದರೆ ತಾನೇ ಏನು? ಆಲೋಚನೆ ಕನ್ನಡದಲಿ ಮಾಡ
ಮಾಡು ಕಟ್ಟುವ ಮೊದಲು ಮನಸನಿಡು ಮಹಲೊಳಗೆ
ಸಿಂಗರಿಸಲದ ನಾಡುನುಡಿ ಸಂಸ್ಕೃತಿ ಸುಖ ಸಂತಸ ನಗೆ ||

(22) ರಾಜ್ಯೋತ್ಸವ – ಒಂಭತ್ತು ದಿನ ಬಾಕಿ (23.10.2016)

ಸೀಮೋಲ್ಲಂಘನವಾಗಲಿ ಮನ ಮನಗಳ ಕದ ತೆರೆದು
ಪ್ರವಹಿಸಲಿ ಅಮೃತವಾಹಿನಿ ಹೃದಯಗಳಾಗಿ ಖುದ್ಧು
ಬೇಲಿ ಹರಿಯಲಿ ಬೀಸಲಿ ಮಾರುತ ತೊಳೆದೆಲ್ಲ ಕಶ್ಮಲ
ಧಾಳಿಯಿಕ್ಕಲಿ ಕನ್ನಡದ ಸುಸ್ವರ ತುಂಬಲಿ ಶುದ್ಧ ಅಮಲ ||

(21) ರಾಜ್ಯೋತ್ಸವ – ಹತ್ತು ದಿನ ಬಾಕಿ (22.10.2016)

ಹಾಸಲುಂಟು ಹೊದೆಯಲುಂಟು ನಿತ್ಯ ನಮ್ಮದೇ ನಮಗೆ
ದಿನವೂ ಉಂಡುಣ್ಣುವ ಚಿಂತೆ ಸಮಯವೆಲ್ಲಿ ನಾಡುನುಡಿಗೆ
ಮಾಡದಿದ್ದರೆ ಬೇಡ ವ್ರತ ಉಪವಾಸ ಹಬ್ಬದಡಿಗೆ ಅಬ್ಬರ
ರಾಜ್ಯೋತ್ಸವದ ಹೊತ್ತಲಾದರೂ ನಮಿಸಲೆತ್ತಿ ಕನ್ನಡ ಸ್ವರ ||

(20) ರಾಜ್ಯೋತ್ಸವ – ಹನ್ನೊಂದು ದಿನ ಬಾಕಿ (21.10.2016)

ಹೆತ್ತು ಹೊತ್ತು ಸಾಕಿದ ಹೆತ್ತಮ್ಮಗಳ ಪೋಷಣೆ
ಒಡಹುಟ್ಟಿದವರೊಡನೆ ವಿಕಸನ ವ್ಯಕ್ತಿತ್ವ ತಾನೆ
ಬೀಜ ಸಸಿಯದಕೆ ನೀರೆರೆದು ಬೆಳೆಸಿ ಹೆಮ್ಮರ
ಕಾಲ ಮೇಲೆ ನಿಲ್ಲಿಸಿದ ಕನ್ನಡಮ್ಮಗೆ ನಮಸ್ಕಾರ ||

(19) ರಾಜ್ಯೋತ್ಸವ – ಹನ್ನೆರಡು ದಿನ ಬಾಕಿ (20.10.2016)

ತುಟಿಯ ಮೇಲೆ ತುಂಟ ಕಿರುನಗೆ ಸೊಗ
ನಕ್ಕಾಗ ಹಾಲು ಬೆಳದಿಂಗಳಿಗೆ ಜಾಗ
ಹೊರಡಿಸಲದೆ ಸ್ವರ ಸಂಗೀತ ಕೊರಳೆ
ಕನ್ನಡ ಮಾತಾಗೆ ಹಾಲುಜೇನಿನ ಹೊಳೆ

(18) ರಾಜ್ಯೋತ್ಸವ – ಹದಿಮೂರು ದಿನ ಬಾಕಿ (19.10.2016)

ಅಕ್ಷರಕೆ ಲಕ್ಷವದು, ಕವಿ ಕಾಳಿದಾಸನ ಸ್ಪರ್ಶ
ಇರದಿದ್ದರೇನಂತೆ ಭೋಜರಾಜನ ಸಾಂಗತ್ಯ
ಕನ್ನಡದ ಮೇಲಕ್ಕರೆ ಇದ್ದರದೆ ಕೋಟಿ ಕೋಟಿ
ಮಾತು ಬರಹಗಳಾಗಿ ವಿಜೃಂಬಿಸಲದೆ ಸ್ಫೂರ್ತಿ !

(17) ರಾಜ್ಯೋತ್ಸವ – ಹದಿನಾಲ್ಕು ದಿನ ಬಾಕಿ (18.10.2016)

ವ್ಯಾಧಿಗಳು ನೂರಾರು, ಪರಿಹಾರಗಳು ಹಲವು
ಶಮನವಾಗಿಸೆ ವೈದ್ಯ, ಔಷಧಿಗಳ ಸಾಲು ಸಾಲು
ಕನ್ನಡ ಅಭಿಮಾನ ಶೂನ್ಯತೆಗೆಲ್ಲಿದೆ ಮದ್ದು ತಿಳಿಯೆ
ನೀಡಬಹುದು ಜನಕೆ ಜ್ವರ ನೆಗಡಿಯಂತೆ ಸುಧಾರಿಸೆ ||

(16) ರಾಜ್ಯೋತ್ಸವ – ಹದಿನೈದು ದಿನ ಬಾಕಿ (17.10.2016)

ಬಂಧು ಬಾಂಧವ ಸಜ್ಜನ ಸಂಗ, ಮಿಲನಗಳ ಸಮ್ಮೇಳನ
ಮದುವೆ ಮುಂಜಿ ನಾಮಕರಣ, ಏನಾದರೊಂದು ಕಾರಣ
ಆಡಂಬರ ವೈಭವ ಪ್ರದರ್ಶನ, ಬೆಳ್ಳಿ ಬಂಗಾರ ರೇಷ್ಮೆಸೀರೆ
ಮಾತಲೆಲ್ಲಿ ಸಂಸ್ಕೃತಿ ದರ್ಶನ, ಕನ್ನಡವನೆ ಬಿಟ್ಟು ಬಿಡುವರೆ ||

(15) ರಾಜ್ಯೋತ್ಸವ – ಹದಿನಾರು ದಿನ ಬಾಕಿ (16.10.2016)

ಮುದ್ದಣ್ಣ ಮುನಿದು ಕೂತ, ಅಪರೂಪದ ರಾತ್ರಿ ಹೊತ್ತು
ತಾಂಬೂಲ ಸಹಿತ ಮನೋರಮೆ, ರಮಿಸುತ್ತಾ ತುರ್ತು
ಯಾಕೆ ಕಳವಳ ಕೋಪ ಹೇಳಬಾರದೆ ರಮಣ? ಎನ್ನಲು
ನೊಂದ ದನಿ ನುಡಿದಿತ್ತ – ಕೇಳರಲ್ಲ ಕನ್ನಡವ ತವರಲ್ಲೂ ||

(14) ರಾಜ್ಯೋತ್ಸವ – ಹದಿನೇಳು ದಿನ ಬಾಕಿ (15.10.2016)

ನವೆಂಬರಿನ ಚಳಿಗಾಲ ಬೆಚ್ಚಗಾಗಿಸಲು ಕಂಬಳಿ
ಹೊದ್ದು ಮಲಗಿದವರ ಬಡಿದೆಬ್ಬಿಸಲೆಂದೆ ಧಾಳಿ
ಕನ್ನಡ ರಾಜ್ಯೋತ್ಸವ ನೆನಪಾಗೆದ್ದುಬಿಡುವ ಕನ್ನಡಿಗ
ಧುತ್ತೆಂದು ಜಾಗೃತ ಘೋಷವಾಕ್ಯಗಳೊಡನೆ ಕರಗ !

(13) ರಾಜ್ಯೋತ್ಸವ – ಹದಿನೆಂಟು ದಿನ ಬಾಕಿ (14.10.2016)

ಕನ್ನಡದಲಾಡೇ ಮಾತು ಹಾಕುವರಂತೆ ದಂಡ
ಹೇಳ-ಕೇಳುವರಿಲ್ಲದೆ ಆಗಿದೆ ಶಾಲೆಗಳದೀ ಕರ್ಮಕಾಂಡ
ಯಾಕಪ್ಪ ಕನ್ನಡಿಗ ಇಷ್ಟೊಂದು ಸಹನೆ ಒಳ್ಳೆತನ
ಪೋಷಕ ಪೋಷಾಕಲಾದರೂ ಇರಬೇಡವೆ ಅಭಿಮಾನ ? ||

(12) ರಾಜ್ಯೋತ್ಸವ – ಹತ್ತೊಂಭತ್ತು ದಿನ ಬಾಕಿ (13.10.2016)

ನಿತ್ಯ ಮಾತುಗಳಾಡುತ, ಆಂಗ್ಲದ ನಡುವೆ ಕನ್ನಡ
ಆಡುವಂತಾಗಿ ಹೋಗಿದೆ, ಜಾಡೇ ಸಿಗದು ನೋಡ
ಮರಳಲಿ ಕನ್ನಡ ಮತ್ತೆ, ಪದಗಳ ನಡುವೆ ಇತರೆ
ಹುಡುಕಿ ತಡುಕಿ ಬಳಸೆ, ಕಸ್ತೂರಿ ಕನ್ನಡಕೆ ದಸರೆ ||

(11) ರಾಜ್ಯೋತ್ಸವ – ಇಪ್ಪತ್ತು ದಿನ ಬಾಕಿ (12.10.2016)

ಕನ್ನಡಕ್ಕೊಬ್ಬನೆ ರಾಜಕುಮಾರ ಪ್ರತಿಮೆ ತಾನೆ
ಕನ್ನಡಕ್ಕವನೆ ನಿಜ ಪರ್ಯಾಯ ಪದವಾದನೆ
ಅಂತೆ ಅದೆಷ್ಟೊ ಮಹನೀಯರುಗಳ ಸಾಧನೆ
ಹೆಸರಿನುದ್ದ ಪಟ್ಟಿಗೆಲ್ಲಿದೆ – ಮೊದಲು ಕೊನೆ !?

(11) ರಾಜ್ಯೋತ್ಸವ – ಇಪ್ಪತ್ತೊಂದು ದಿನ ಬಾಕಿ (11.10.2016)

ನಿರಭಿಮಾನ ಕಳಂಕ, ದುರಭಿಮಾನ ಕೆಸರು
ನಡುವಿನ ಅಭಿಮಾನ, ಪಚ್ಚೆ ತೋರಣ ತಳಿರು
ಯಾರಿದ್ದರೂ ಇಲ್ಲಿ, ಬರಲಿ ಕನಿಷ್ಠ ನಾಡಿನ ಭಕ್ತಿ
ಎಲ್ಲಿದ್ದರೂ ಸರಿ ಕನ್ನಡಿಗ, ನೀನಾಗು ಕನ್ನಡದ ಶಕ್ತಿ ||

(10) ರಾಜ್ಯೋತ್ಸವ – ಇಪ್ಪತ್ತೆರಡು ದಿನ ಬಾಕಿ (10.10.2016)

ಗೊಂದಲದಲಿ ಚಿತ್ತ, ನಿಜ ಜಾಗತಿಕ ಗೋಮಾಳ
ಸಂದೇಹ ಸಹಜವೇ, ನಾಡು ನುಡಿಗೆಲ್ಲಿದೆ ಕಾಲ ?
ಅರೆ! ತಂತ್ರಜ್ಞಾನವದೆ ಪ್ರಗತಿಯ ಹಾಡಿಗೆ ಮೆಟ್ಟಿಲು
ಏಣಿಯಾಗಲೊಲ್ಲದೆ ಕನ್ನಡ ಜೊತೆಜೊತೆಗೆ ಹತ್ತಲು !

(09) ರಾಜ್ಯೋತ್ಸವ – ಇಪ್ಪತ್ಮೂರು ದಿನ ಬಾಕಿ (09.10.2016)

ಮಲ್ಲಿಗೆ ದಂಡೆ ಪೋಣಿಸಿ ಜಡೆಗೆ ಮುಡಿಸಿದಂತೆ ಕನ್ನಡದಕ್ಷರ
ಹರಳು ಮಲ್ಲಿಗೆ ಮೊಗ್ಗು ಸಾಲಾಗಿಟ್ಟಂತೆ ಬಿಡಿ ಬಿಡಿಯಕ್ಷರ
ಅಂದ ಚೆಂದದ ಬರಹ ಲಾವಣ್ಯ ಕ್ರಮಬದ್ಧ ಶಿಸ್ತು ವ್ಯಾಕರಣ
ಲಿಪಿಗಳ ರಾಜ ಕನ್ನಡ ಗರ್ವದೆ ಎದೆಯುಬ್ಬಿಸಿ ನುಡಿಯೋಣ !

(08) ರಾಜ್ಯೋತ್ಸವ – ಇಪ್ಪತ್ನಾಲ್ಕು ದಿನ ಬಾಕಿ (08.10.2016)

ಅತಲ ವಿತಲ ಸುತಲ ರಸಾತಳ ಪಾತಾಳ
ಸಪ್ತಲೋಕಾದಿ ಚರಾಚರ ಬ್ರಹ್ಮಾಂಡದಾಳ
ಅಮೃತವಾಹಿನಿಯಾಗಿ ಹರಿಯುತಿದೆ ಸತತ
ಕನ್ನಡ ಮಾತೆಯ ಸ್ತುತಿಘೋಷ ರಥ ಅವಿರತ !

(07) ರಾಜ್ಯೋತ್ಸವ – ಇಪ್ಪತ್ತೈದು ದಿನ ಬಾಕಿ (07.10.201)

ತಲ್ಲಣಿಸದಿರು ಕಂಡ್ಯಾ ತಾಳು ಮನವೆ
ಕನ್ನಡವನು ಸಲಹುವನು ಇದಕೆ ಸಂಶಯವಿಲ್ಲ
ನೋಡೀಗ ಸಾಕ್ಷ್ಯ, ಅಂತರ್ಜಾಲದೆ ಸುಭೀಕ್ಷಾ
ಹರಿದಾಮೃತವಾಣಿ ಅಂತರ್ಜಲದಂತೆ ಪ್ರಸರಿತ ||

(06) ರಾಜ್ಯೋತ್ಸವ – ಇಪ್ಪತ್ತಾರು ದಿನ ಬಾಕಿ (06.10.2016)

ಯಾರ್ಯಾರೋ ಹಾಡುವರು, ಕನ್ನಡದ ಹಾಡು
ಕನ್ನಡ ಬರದವರ, ಬಾಯಲ್ಲೂ ಮಾತಿನ ಜಾಡು
ಏನಾಗಿದೆಯಪ್ಪಾ ನಿನಗೆ, ಅಚ್ಚ ಕನ್ನಡತಿ ಹೆತ್ತಾ ಮಗ
ಹೋರಾಡದಿದ್ದರೆ ಬೇಡ, ಬರಿ ಮಾತಾಡಲೇನು ರೋಗ ? ||

(05) ರಾಜ್ಯೋತ್ಸವ – ಇಪ್ಪತ್ತೇಳು ದಿನ ಬಾಕಿ (05.10.2016)

ಹಳದಿ ಕೆಂಪು ಕನ್ನಡ ಬಾವುಟದೆರಡು ಬಣ್ಣ
ಅರಿಶಿನ ಕುಂಕುಮ ಸಾಂಕೇತಿಸುವ ಕಾರಣ
ತಾಯಿ ಭುವನೇಶ್ವರಿ ಪೂಜಾರ್ಚನೆ ಸರಕದೆ
ನಾಡು ನುಡಿಯಲ್ಲವಳ ಕಾಣುವ ಬಗೆ ಇದೇ ! ||

(04) ರಾಜ್ಯೋತ್ಸವ – ಇಪ್ಪತೆಂಟು ದಿನ ಬಾಕಿ (04.10.2016)

ಕವಿ ಪುಂಗವ ದಾಸರೆಲ್ಲ, ಎತ್ತಿ ಆಡಿಸಿದ ಕೂಸು
ಕಟ್ಟಿದರು ಲಕ್ಷ ಲಕ್ಷ, ಪದಗಳಲೆ ಕನ್ನಡ ಕನಸು
ಕಾಲಮಾನಗಳ ಕಸುವಲ್ಲಿಯದು, ಘನ ಬಿತ್ತನೆ ಬೆರಗೆ
ಎಂಟೇನು? ಎಪ್ಪತ್ತೆಂಟು, ಜ್ಞಾನಪೀಠ ಕನ್ನಡದ ಮಡಿಲಿಗೆ ||

(03) ರಾಜ್ಯೋತ್ಸವ – ಇಪ್ಪತ್ತೊಂಭತ್ತು ದಿನ ಬಾಕಿ (03.10.2016)

ಏನು ರಾಜ್ಯೋತ್ಸವವೋ, ಸುಡುಗಾಡು ಮೌನ
ಕಾವೇರಮ್ಮ ಅಳುತಿರೆ, ಕನ್ನಡಮ್ಮನಿಗೆ ತಲ್ಲಣ
ಆಚರಣೆ ಹೊತ್ತಿಗೆ ಬಿಡಿ, ಅಲ್ಲಿ ಇರದಲ್ಲಾ ಕಣ್ಣೀರು
ಬಿಕ್ಕಿದ ಸದ್ದಷ್ಟೆ, ಬತ್ತಿ ಹೋಗಷ್ಟೊತ್ತಿಗೆ ಪೂರ್ತಿ ನೀರು ||

(02) ರಾಜ್ಯೋತ್ಸವ – 30 ದಿನ ಬಾಕಿ ! (02.10.2016)

ದೇಶ ವಿದೇಶಗಳಲಿಹರು ನಮ್ಮ ಕನ್ನಡ ಜನರು
ಬಿಡದೆ ಆಚರಿಸುವರು ಹಬ್ಬ ಹರಿದಿನ ನವೆಂಬರು
ಹಾಕಿದ್ದೇನೋ ಸರಿ ಕನ್ನಡ ಮಾತೆಗೆ ಜಯಜಯಕಾರ
ಮಕ್ಕಳ ಜೊತೆಗಾಡಬೇಕು ಮರೆಯದೆ ಮನೆಭಾಷೆ ತವರ ||

(01) ರಾಜ್ಯೋತ್ಸವ – 31 ದಿನ ಬಾಕಿ ! (01.10.2016)

ಒಂದೇ ತಿಂಗಳ ದೂರ ಕನ್ನಡ ಮಾಸ ನವೆಂಬರ
ಕೆಂಪು ಹಳದಿ ಬಾವುಟ ತೆಗೆಯಿರಿ ಅವಸರವಸರ
ಘೋಷಣೆ ಶೋಷಣೆ ಭಾಷಣ ಬರಿ ಬಾಗಿಲಿನಲಂಕರಣ
ದಿನನಿತ್ಯದಲ್ಲಾಗಲಿ ಕನ್ನಡ ಮಾತೆ ಗರ್ಭಗುಡಿಯಾಭರಣ ||


– ನಾಗೇಶ ಮೈಸೂರು
#ನವೆಂಬರ 1
#ರಾಜ್ಯೋತ್ಸವ
(Picture from internet)

00934. ಕನ್ನಡ ರಾಜ್ಯೋತ್ಸವ – 31 ದಿನ ಬಾಕಿ !


00934. ಕನ್ನಡ ರಾಜ್ಯೋತ್ಸವ – 31 ದಿನ ಬಾಕಿ !
______________________________


ನವೆಂಬರ ಒಂದು –
ಮುವ್ವತ್ತೊಂದೆ ದಿನ ಬಾಕಿ
ಏಳಿ ಎದ್ದೇಳಿ ಮೈ ಕೊಡವಿ
ಹಳದಿ ಕೆಂಪು ಕೈಗೆತ್ತಿಕೊಂಡು
ಬಣ್ಣ ಬಾವುಟ ಘೋಷಣೆ ಸದ್ದು.. ||

ಅರಿಶಿನ ಕುಂಕುಮ
ಹಳದಿ ಕೆಂಪು ಅಮಿತ
ದೇವಿ ಪೂಜೆಗವೆರಡೇ ಸಾಕು
ಅರ್ಚನೆ ಪ್ರಸಾದ ತೀರ್ಥ
ಪೂಜನೀಯ ಭಕ್ತಿಯ ಸರಕು ||

ಅರಿಶಿನ ದಿನಕರನಂತೆ
ಉದಯ ನಾಡಾಗಿ ಚೆಲುವು
ಮುತ್ತೈದೆಯ ಭಾಗ್ಯಕು ನೆಲೆ
ಹಚ್ಚಿದ ಹೆಣ್ಣು ಪೂಜನೀಯ
ಅದೆ ಗೌರವ ನೆಲೆ ಮನನೀಯ||

ನೆತ್ತರಂತೆ ಕುಂಕುಮ
ದುಷ್ಟ ದಮನ ದೇವಿ ಘನ
ನೊಸಲಿಗದೆ ಸುರಕ್ಷೆ ತಿಲಕ
ಭಾವಕೂ ಭಕ್ತಿಗೂ ಪುಳಕ
ಸಂಬಂಧಗಳ ಮನೋಧರ್ಮ ||

ಪೂಜನೀಯ ಸಂಕರ
ಪವಿತ್ರ ಮಿಲನ ದ್ವೈತ
ಕನ್ನಡ ಬಾವುಟ ಅದ್ವೈತ
ಭುವನೇಶ್ವರಿ ಪರಕಾಯ
ಕನ್ನಡ ನಾಡು ನುಡಿ ಧ್ಯೇಯ ||

– ನಾಗೇಶ ಮೈಸೂರು
01.10.2016
http://mba.ind.in/forum/karnataka-rajyotsava-images-21683.html

00406. ಲಘುಹರಟೆ: ಗಡಿಯಾಚೆಯ ರಾಜ್ಯೋತ್ಸವ…! (0009)


00406. ಲಘುಹರಟೆ: ಗಡಿಯಾಚೆಯ ರಾಜ್ಯೋತ್ಸವ…!
______________________________

(2015, ನವೆಂಬರ ತಿಂಗಳ ಸಿಂಗಪುರ ಕನ್ನಡ ಸಂಘದ ಮಾಸಪತ್ರಿಕೆ ಸಿಂಚನದಲ್ಲಿ ಪ್ರಕಟಿತ)

ನಿಧಾನವಾಗಿ ನಡೆದು ಬಂದು ಆ ಕಾಲು ಹಾದಿಯ ತುದಿಯಲ್ಲಿದ್ದ ಬಾಗಿಲು ತೆಗೆದು ಒಳಗೆ ಕಾಲಿಟ್ಟು ಅತ್ತಿತ್ತ ನೋಡಿದೆ, ಇದಾವ ಜಾಗವೆಂದು. ತೆರೆದ ಬಾಗಿಲು ನೇರ ವಿಶಾಲವಾದ ಅಂಗಣವೊಂದಕ್ಕೆ ಕರೆ ತಂದು ಅಲ್ಲಿ ನಡುವಲಿದ್ದ ಧ್ವಜ ಸ್ತಂಭವೊಂದರ ಹತ್ತಿರ ತಂದು ನಿಲ್ಲಿಸಿಬಿಟ್ಟಿತ್ತು. ಇದಾವುದಪ್ಪಾ ಈ ಧ್ವಜ ಸ್ತಂಭ ಎಂದು ತಲೆಯೆತ್ತಿ ಮೇಲೆ ನೋಡಿದರೆ ಅರೆ! ವಿಶಾಲ ಕರ್ನಾಟಕದ ಹೆಮ್ಮೆಯ ಹಳದಿ ಕೆಂಪಿನ ಬಣ್ಣದ ಕನ್ನಡ ಬಾವುಟ..! ಗಾಳಿಯಲ್ಲಿ ಬಿಚ್ಚಿಕೊಂಡು ಪಟಪಟನೆ ಹಾರಾಡುತ್ತ ಲಯಬದ್ದವಾಗಿ ನಲಿಯುತ್ತಿದ್ದ ರೀತಿಗೆ ಸಾಕ್ಷಾತ್ ಕನ್ನಡ ರಾಜರಾಜೇಶ್ವರಿಯೆ ಖುಷಿಯಿಂದ ನಲಿದಿರುವಂತೆ ಭಾಸವಾಯ್ತು. ಆ ಖುಷಿ ತಂದ ಹೆಮ್ಮೆಯ ಎದೆ ತುಂಬಿದ ಭಾವಕ್ಕೆ ಉಕ್ಕಿ ಜಾಗೃತವಾದ ಕನ್ನಡಾಭಿಮಾನ ನನಗರಿವಿಲ್ಲದ ಹಾಗೆ ಒಂದು ‘ಸೆಲ್ಯೂಟ್’ ಆಗಿ ಬದಲಾಗುತ್ತಿದ್ದಂತೆ ದೂರದಿಂದ ಕೇಳಿಸಿತ್ತು ಪರಿಚಿತ ದನಿಯೊಂದು..

” ಏನ್ ಸಾರ್.. ಕನ್ನಡಾಂಬೆಗೆ ಸಾಫ್ ಸೀದಾ ಸಲಾಮ್ ಮಾಡ್ತಾ ಇದೀರಾ ? ಕನ್ನಡ ರಾಜ್ಯೋತ್ಸವ ಅಂತ ನಿಮಗೂ ನೆನಪಿಗೆ ಬಂದು ಬಿಟ್ಟಿತಾ? ” ಎಂದ ಅರ್ಧ ಕನ್ನಡ ಮಿಕ್ಕರ್ಧ ನಾನ್-ಕನ್ನಡ ಬೆರೆತ ದನಿ ಕೇಳಿಸಿತು. ಬೆಂಗಳೂರಿನಲ್ಲಿ ತುಂಬಿಕೊಂಡಿರುವ ಕನ್ನಡಾ-ನಾನ್ ಕನ್ನಡ ಜನರ ಹಾಗೆ, ಎಲ್ಲಾ ಅರ್ಧಂಬರ್ಧ ಭಾಷೆ ಬೆರೆಸಿ ಕಲಸು ಮೇಲೋಗರ ಮಾಡಿ, ಕಾಕ್ ಟೈಲ್ ಮಾಡಿ ಹೇಳಬೇಕೆಂದರೆ ಅದು ಗುಬ್ಬಣ್ಣನೆ ಇರಬೇಕು ಅನಿಸಿತು. ಯಾಕೆಂದರೆ ನಾನು ಹಿಂದೊಮ್ಮೆ ಮಾತನಾಡುತ್ತ ‘ನನ್ನ ಮಗ ಸಿಂಗಪುರದಲ್ಲೆ ಬಟ್ಲರು ಕನ್ನಡ ಕಲಿಯುತ್ತಿದ್ದಾನೆ’ ಎಂದಿದ್ದಕ್ಕೆ, ನನ್ನ ಮಾತನ್ನು ತಿದ್ದಿದ ಗುಬ್ಬಣ್ಣ ‘ಅದು ಬಟ್ಲರು ಕನ್ನಡ ಅಲ್ಲಾ ಸಾರ್.. ಬೆಂಗಳೂರು ಕನ್ನಡಾ ಅನ್ನಿ..’ ಎಂದು ಜ್ಞಾನೋದಯ ಮಾಡಿಸಿದ್ದ. ನಾನು ಏನೂ ಅರ್ಥವಾಗದೆ ಮಿಕಮಿಕ ಕಣ್ಣಾಡಿಸಿದ್ದನ್ನು ನೋಡಿ,

“ಯಾಕ್ ಸಾರ್.. ಕಣ್ಕಣ್ಣು ಬಿಡ್ತೀರಾ ? ನಾನ್ ಮಾತಾಡೋ ಕನ್ನಡಾ ನೋಡಿದ್ರೆ ಗೊತ್ತಾಗಲ್ವಾ? ಬಟ್ಲರು ಕನ್ನಡಕ್ಕು ಬೆಂಗಳೂರು ಕನ್ನಡಕ್ಕೂ ಇರೊ ವ್ಯತ್ಯಾಸ? ಹೋಗ್ಲಿ ಬೆಂಗಳೂರು ವಿಷಯ ಬಿಡಿ ಸಾರು.. ಪರದೇಶದಲ್ಲಾಡೊ ಕನ್ನಡ ತಾನೆ ಏನು ಕಮ್ಮಿ ಅಂತಿರ ? ಅದಕ್ಕೆ ತಾನೆ ಅದನ್ನ ‘ಪರದೇಶಿ ಕನ್ನಡ’ ಅನ್ನೋದು…?” ಎನ್ನುತ್ತ ಹತ್ತಿರಕ್ಕೆ ಬಂದಾ ಗುಬ್ಬಣ್ಣ.

” ಸಾಕ್ ಸುಮ್ನಿರೊ ಗುಬ್ಬಣ್ಣ.. ಹಾಗೆಲ್ಲ ಹೊರನಾಡು, ಹೊರದೇಶದ ಕನ್ನಡಿಗರ ಬಗ್ಗೆ ಕಳಪೆ ಮಾತಾಡಬೇಡ.. ಹಾಗೆ ಉದಾಹರಣೆಗೆ ನೋಡೊದಾದ್ರೆ ನಮ್ಮ ಸಿಂಗಪುರದ ಕನ್ನಡಿಗರ ಕನ್ನಡಾಭಿಮಾನನೆ ನಾಡಿನ ಅಚ್ಚಗನ್ನಡಿಗರ ಅಭಿಮಾನಕ್ಕಿಂತ ಒಂದು ತೂಕ ಜಾಸ್ತಿ, ಗೊತ್ತಾ? ಊರು ದೇಶ ಬಿಟ್ಟು ಹೊರಗೆ ಬಂದಿದ್ರೂ ನಮ್ಮ, ನಾಡು, ನಮ್ಮ ಭಾಷೆ, ನಮ್ಮೂರು, ನಮ್ಮ ಜನ ಅಂತಾ ಒದ್ದಾಡ್ತಾ ರಾಜ್ಯೋತ್ಸವ, ದೀಪಾವಳಿ ಅಂತೆಲ್ಲ ಹಬ್ಬ ಮಾಡ್ಕೊಂಡು ಕನ್ನಡಾಭಿಮಾನ ತೋರಿಸ್ತಾರೆ ಗೊತ್ತಾ? ಅಷ್ಟೇ ಯಾಕೆ ಸಿಂಗನ್ನಡಿಗ ಎಂದ್ರೆ ‘ಸಿಂಹ – ಕನ್ನಡಿಗ’ ಅರ್ಥಾತ್ ಸಿಂಹದೆದೆಯ ಕನ್ನಡಿಗರು ಅಂತರ್ಥ ಗೊತ್ತಾ? ” ಎಂದೆ, ಅವನನ್ನೆ ಲೇವಡಿ ಮಾಡುತ್ತ.

” ಏನ್ ಸಿಂಗವೊ, ಏನೊ ಬಿಡಿ ಸಾರ್.. ನೀವು ಹೇಳಿದ ಹಾಗೆ ‘ಕನ್ನಡ ಕಲಿ’, ‘ಬನ್ನಿ ಮಾತಾಡೋಣ’ ಅಂತೆಲ್ಲ ಕನ್ನಡದ ಬಗ್ಗೆ ಏನಾದ್ರೂ ಮಾಡ್ತಾನೆ ಇರ್ತಾರೆ ಅನ್ನೋದು ನಿಜವೆ.. ಆದ್ರೆ ನಾನು ಈ ಮಾತು ಹೇಳೋಕ್ ಒಂದು ಕಾರಣ ಇದೆ ಸಾರ್..” ಬಡಪೆಟ್ಟಿಗೆ ಬಗ್ಗದವನಂತೆ ತನ್ನ ಪಟ್ಟು ಹಿಡಿದೆ ನುಡಿದ ಗುಬ್ಬಣ್ಣ.

” ಏನಪ್ಪಾ ಅಂತಾ ಮಹಾನ್ ಕಾರಣ…? ಈ ತರ ಪ್ರೋಗ್ರಾಮ್ಸ್ ಇನ್ಯಾವ್ ದೇಶದ ಕನ್ನಡ ಸಂಘದವರು ಅರೆಂಜ್ ಮಾಡ್ತಾರೆ ತೋರ್ಸು ನೋಡೋಣ..? ದುನಿಯಾದಲ್ಲೆ ಯುನಿಕ್ಕೂ ಗೊತ್ತಾ ಈ ಪ್ರೋಗ್ರಾಮು..?” ”

” ಅದು ಮಾತ್ರ ‘ಏಕ್ ಮಾರ್.. ದೋ ತುಕಡಾ’ ತರ ಮಾತು ಬಿಲ್ಕುಲ್ ನಿಜ ಬಿಡಿ ಸಾರ್.. ಆದರೆ ನಾನು ಹೇಳೋಕೆ ಹೊರಟಿದ್ದು ಮತ್ತೊಂದು ವಿಷಯ..”

” ಅದೇನಪ್ಪಾ ಅಂಥಾ ವಿಷಯ ?”

” ಸಾರ್ ಹೀಗೆ ಮೊನ್ನೆ ನಮ್ ಏರಿಯಾದಲ್ಲಿದ್ದ ಕನ್ನಡ ಮಾತಾಡೊ ಫ್ಯಾಮಿಲಿಗಳ್ದೆಲ್ಲ ಒಂದು ‘ಗೆಟ್ ಟುಗೆದರ್’ ಪ್ರೋಗ್ರಾಮ್ ಅಟೆಂಡ್ ಮಾಡೋಕೆ ಹೋಗಿದ್ದೆ ಸಾರ್..”

“ಸರೀ..? ಹೋಗಿ ಕನ್ನಡ ಪ್ರಾಕ್ಟೀಸ್ ಮಾಡ್ಕೊಳಕ್ ಅದು ಪರ್ಫೆಕ್ಟ್ ಛಾನ್ಸ್ ಅಲ್ವಾ..? ”

” ನಾನು ಹಾಗೇ ಅನ್ಕೊಂಡು ಪ್ರೋಗ್ರಾಮ್ಗೇನೊ ಹೋದೆ ಸಾರ.. ಹೋದದ್ದಕ್ಕೆ ಸರಿಯಾಗಿ ಒಳ್ಳೆ ತಿಂಡಿ, ಕಾಫಿ, ಸ್ವೀಟು ಎಲ್ಲಾನು ಬೊಂಬೊಟಾಗೆ ಅರೇಂಜ್ ಮಾಡಿದ್ರೂನ್ನಿ..” ಆ ತಿಂಡಿ ತೀರ್ಥಗಳಲ್ಲೆ ಅರ್ಧ ಹೋದ ಕೆಲಸ ಆದಂತೆ ಎನ್ನುವವನಂತೆ ರಾಗವೆಳೆದ ಗುಬ್ಬಣ್ಣ.

” ಅಯ್ಯೊ..ಇನ್ನೇನ್ ಮತ್ತೆ ? ತಿಂಡೀನು ಅರೆಂಜ್ ಮಾಡಿದ್ರೂ ಅಂದ್ಮೇಲೆ ನಿನ್ನದಿನ್ನೇನಪ್ಪ ಕಂಪ್ಲೈಂಟೂ..?”

” ಅದೇ ಸಾರ್.. ಬೇಜಾರು ಆಗಿದ್ದು..ತಿಂದು ಮುಗಿಸಿ ಎಲ್ಲಾ ಸ್ವಲ್ಪ ಕನ್ನಡದಲ್ಲಿ ಮಾತಾಡ್ತಾರೆ, ಆನಂದವಾಗಿ ಕೇಳೋಣ ಅಂದ್ರೆ – ಶುರುಲೇನೊ ಎಲ್ಲಾ ‘ನಮಸ್ಕಾರಾ, ಚೆನ್ನಾಗಿದೀರಾ? ‘ ಅಂತ್ಲೆ ಶುರು ಹಚ್ಕೊಂಡ್ರು..”

“ಮತ್ತೆ?”

” ಮತ್ತಿನ್ನೇನು ? ಒಂದೆರಡು ವಾಕ್ಯ ಆಡೋಕಿಲ್ಲ… ಇರೋ ಬರೊ ಕನ್ನಡವೆಲ್ಲ ಡ್ರೈ ಆದವರಂಗೆ ಎಲ್ಲಾ ಇಂಗ್ಲಿಷು, ಹಿಂದಿ, ಗಿಂದಿ ಅಂತ ‘ವಾಟ್ ಯಾರ್ ? ಯೂ ನೋ ವಾಟ್?’ ಅಂತೆಲ್ಲಾ ಏನೇನೊ ವರ್ಶನ್ ಶುರು ಮಾಡಿಬಿಡೋದಾ? ನನಗೆ ಅದನ್ನು ನೋಡಿ ಯಾವ ಕನ್ನಡ ಅಂತ ಹೇಳ್ಬೇಕೂಂತ್ಲೆ ಗೊತ್ತಾಗ್ಲಿಲ್ಲ.. ಅದಕ್ಕೇನು ಬಟ್ಲರ ಕನ್ನಡಾ ಅನ್ಬೇಕೊ, ಬೆಂಗ್ಳೂರು ಕನ್ನಡ ಅನ್ಬೇಕೊ, ಪರದೇಶಿ ಕನ್ನಡ ಅನ್ಬೇಕೊ ಗೊತ್ತಾಗದೆ ಕನ್ಫ್ಯೂಸ್ ಆಗಿ ಪುಲ್ ಡೌಟಾಗೋಯ್ತು ಸಾರ್..” ಎನ್ನುತ್ತಲೆ ತನ್ನ ಕನ್ನಡಾಂಗ್ಲ ಭಾಷಾ ಸಾಮರ್ಥ್ಯವನ್ನು ತನ್ನರಿವಿಲ್ಲದವನಂತೆ ಬಿಚ್ಚಿಕೊಂಡ ಗುಬ್ಬಣ್ಣ..

ನಾನು ಒಂದು ನಿಮಿಷ ಮಾತಾಡಲಿಲ್ಲ. ಗುಬ್ಬಣ್ಣ ಹೇಳೊದರಲ್ಲೂ ಸ್ವಲ್ಪ ಸತ್ಯವೇನೊ ಇದೆ ಅನಿಸಿದರು, ಅದು ಬರಿ ‘ಅರ್ಧಸತ್ಯ’ ಮಾತ್ರ ಅನಿಸಿತು..

“ಗುಬ್ಬಣ್ಣ.. ಈ ವಿಷಯದಲ್ಲಿ ಮಾತ್ರ ನೀನು ಹೇಳೋದು ಪೂರ್ತೀ ನಿಜವಲ್ಲಾ ಬಿಡೋ.. ವಿದೇಶಗಳಲ್ಲಿರೊ ಜನರೆಲ್ಲಾ ವರ್ಷಾನುಗಟ್ಲೆಯಿಂದ ಊರು, ಕೇರಿ, ದೇಶ ಬಿಟ್ಟು ಬಂದು ಸೇರ್ಕೊಂಡಿರೋರು ತಾನೆ?”

” ಹೌದು..?”

” ಅಂದ್ಮೇಲೆ.. ಅವರ ಮಕ್ಕಳು ಮರಿಯೆಲ್ಲ ಇಲ್ಲೆ ಹುಟ್ಟಿ, ಇಲ್ಲೆ ಬೆಳೆದು, ಇಲ್ಲೆ ಸ್ಕೂಲಿಗೆ ಹೋಗ್ತಾ ಇರ್ತಾರೆ ತಾನೆ ?”

” ನಾನು ಇಲ್ಲಾಂದ್ನಾ ಸಾರ್..?”

” ಅಂದ್ಮೇಲೆ ಅವರೆಲ್ಲ ಊರಲ್ಲಿರೋರ ತರ ಕನ್ನಡ ಕಲಿಯೋಕಾಗ್ಲಿ, ಮಾತಾಡೋಕಾಗ್ಲಿ ಆಗುತ್ತಾ ಗುಬ್ಬಣ್ಣಾ..?”

” ಇಲ್ಲಾ ಅನ್ನೋದೇನೊ ನಿಜಾ ಸಾರ್.. ಆದ್ರೆ ಊರಲ್ಲಿರೋರು ಏನು ಕಮ್ಮಿಯಿಲ್ಲಾ ಬಿಡಿ, ಟುಸುಪುಸ್ ಇಂಗ್ಲೀಷ್ ಬರ್ಲಿ ಅಂತ ಕಾನ್ವೆಂಟಿಗೆ ತಗೊಂಡು ಹೋಗಿ ಹಾಕ್ತಾರೆ.. ಅಲ್ ಕಲಿಯೊ ಕನ್ನಡಾನೂ ಅಷ್ಟರಲ್ಲೆ ಇದೆ..”

” ಅಲ್ಲಿ ಮಾತಿರ್ಲಿ..ಇಲ್ಲಿದನ್ನ ಕೇಳೊ ಗುಬ್ಬಣ್ಣಾ.. ಆ ಮಕ್ಕಳ ಜತೆ ಮಾತಾಡ್ಬೇಕಂದ್ರೆ ಇಂಗ್ಲೀಷಲ್ ತಾನೆ ಮಾತಾಡ್ಬೇಕು ? ಅವುಕ್ಕು ಎಲ್ಲಾ ಚೆನ್ನಾಗಿ ಅರ್ಥ ಆಗ್ಲೀ ಅಂತ ಗಂಡ ಹೆಂಡ್ತೀನು ಇಂಗ್ಲಿಷಲ್ಲೆ ಮಾತಾಡ್ಕೋಬೇಕು ಅಲ್ವಾ ?..”

“ಹೌದು ಸಾರ್..ಅದೇನೊ ನಿಜಾ..” ತನ್ನ ಮನೆಯ ಸ್ವಂತ ಅನುಭವವನ್ನೆ ನೆನೆಸಿಕೊಳ್ಳುತ್ತ ಅದನ್ನೆ ಮೆಲುಕು ಹಾಕುವವನಂತೆ ಕಣ್ಣು ಮಾಡಿ ನುಡಿದ ಗುಬ್ಬಣ್ಣಾ.

” ಅಂದ್ಮೇಲೆ..ದಿನಾ ಆಡಿ ಆಡಿ ಪ್ರಾಕ್ಟೀಸ್ ಇರದ ಭಾಷೇನಾ ಯಾವಾಗಲೊ ಪ್ರೋಗ್ರಾಮ್, ಮೀಟಿಂಗಲ್ಲಿ ಹುಣ್ಣಿಮೆ ಅಮಾವಾಸೆಗೊಂದ್ಸಲ ಸೇರ್ಕೊಂಡಾಗ ಫ್ಲೂಯೆಂಟಾಗಿ ಆಡೋಕ್ ಆಗ್ಬಿಡುತ್ತಾ? ಬೀ ರೀಸನಬಲ್ ಗುಬ್ಬಣ್ಣಾ.. ಈ ತರ ಫಂಕ್ಷನ್ ಗೆ ಬಂದು ಹೋಗಿ ಮಾಡಿ ಅಭ್ಯಾಸ ಆದ್ರೆ ತಾನೆ ಸ್ವಲ್ಪ ಭಾಷೆ ಬಳಸೋಕ್ ಛಾನ್ಸ್ ಸಿಗೋದು..?” ಎಂದೆ ಅಂತಹ ಕನ್ನಡಿಗರ ಬಗೆ ಕಾಳಜಿಯುತ ‘ಸಿಂಪಥಿ’ ತೋರಿಸುತ್ತಾ..

” ನೀವು ಹೇಳಿದ್ದೆ ನಿಜವಾಗಿದ್ರೆ ಅಡ್ಡಿಯಿಲ್ಲ ಸಾರ್.. ಆದ್ರೆ ಸುಮಾರು ಜನಕ್ಕೆ ಕನ್ನಡ ಕಲಿಯೊ ಇಂಟ್ರೆಸ್ಟೆ ಇಲ್ಲಾ ಸಾರ್..ಕೆಲವರಿಗಂತೂ ಕಲಿಯೋದು ಅಂದ್ರೆ ಕೇವಲ… ಕಲ್ತೇನುಪಯೋಗ ? ಇಂಗ್ಲೀಷಾದ್ರೆ ಎಲ್ಲಾ ಕಡೆ ಕೆಲಸಕ್ಕೆ ಬರುತ್ತೆ ಅಂತಾರೆ..”

” ಇಲ್ಲಾ ಗುಬ್ಬಣ್ಣ ಅಂತಾ ಫೀಲಿಂಗ್ ಇರೋರು ಬೆಂಗಳೂರಂಥಾ ಕಡೆ ಇರ್ಬೋದೇನೊ.. ಆದ್ರೆ ಇಲ್ಲಿ ಕಲೀಬೇಕೂಂತ, ಕಲಿಸಬೇಕೂಂತ ಜಿನೈನ್ ಇಂಟ್ರೆಸ್ಟ್ ಇರೋರೆ ಜಾಸ್ತಿ.. ಅವರ ಪ್ರಯತ್ನನೂ ಫಲ ಕೊಡಕೆ ಟೈಮ್ ಹಿಡಿಯುತ್ತೆ ಗುಬ್ಬಣ್ಣ, ಇಂಥ ವಾತಾವರಣದಲ್ಲೂ ಹೆಣಗಾಡ್ಕೊಂಡು ಅಷ್ಟಿಷ್ಟು ಉಳಿಸಿ ಬೆಳೆಸೋಕ್ ನೋಡ್ತಾರಲ್ಲ, ಅದು ದೊಡ್ಡದು ಅಲ್ವಾ ?.”

ಯಾಕೊ ಗುಬ್ಬಣ್ಣನಿಗೆ ನಾನು ಹೇಳಿದ್ದು ನಂಬಿಕೆ ಬಂದಂತೆ ಕಾಣಲಿಲ್ಲ..

” ನೀವೇನೊ ಹಾಗಂತಿರಾಂತ ನಾನು ನಂಬ್ತೀನಿ ಅಂತ್ಲೆ ಇಟ್ಕೊಳ್ಳಿ ಸಾರ್.. ಆದ್ರೆ ಅದು ನಿಜಾ ಅನ್ನೋಕೆ ಸಾಕ್ಷಿ ಬೇಕಲ್ಲಾ ? ಇಂಥಾ ಕಡೆ ಪ್ರೋಗ್ರಾಮಲ್ಲಿ ಸೇರಿ ಮಾತಾಡ್ದಾಗ ತಾನೆ ಉಳಿಸಿ, ಬೆಳೆಸೊ ಅವಕಾಶ ಆಗೋದು? ದೊಡ್ಡವರ ಕಥೆಯೆ ಹೀಗಾದ್ರೆ, ಇನ್ನು ಮಕ್ಕಳ ಕಥೆಯಂತೂ ಹೇಳೊ ಹಾಗೆ ಇಲ್ಲಾ…. ಈಗಲೆ ಹೀಗಾದ್ರೆ ಇನ್ನು ಮುಂದಕ್ಕೆ ದೇವರೆ ಗತಿ!” ಎಂದ.

” ಗುಬ್ಬಣ್ಣಾ.. ನೀನು ಅಷ್ಟೊಂದು ಡಿಸಪಾಯಿಂಟ್ ಆಗ್ಬೇಡಾ.. ಇನ್ ಫ್ಯಾಕ್ಟ್ ಫೂಚರ್ ಜೆನರೇಶನ್ ಈಸ್ ಬೆಟರ್ ದೆನ್ ದಿ ಕರೆಂಟ್ ಗೊತ್ತಾ?”

” ಅದು ಹೇಗೆ ಹೇಳ್ತಿರಾ ಸಾರ್, ಅಷ್ಟು ಗ್ಯಾರಂಟಿಯಾಗಿ ?”

” ಈಗ ನನ್ ಮಗನ್ ಉದಾಹರಣೆ ತಗೊಂಡ್ ನೋಡೋಣ.. ನಾನು ಯಾವತ್ತು ಅವನಿಗೆ ಕನ್ನಡ ಕಲ್ತುಕೊ ಅಂತ ಬಲವಂತ ಮಾಡ್ದೋನೆ ಅಲ್ಲಾ..ಅವನೇನ್ ಮಾಡ್ತಾ ಇದಾನೆ ಗೊತ್ತಾ?”

” ಏನ್ ಮಾಡ್ತಾ ಇದಾನೆ?”

“ಇದ್ದಕ್ಕಿದ್ದಂಗೆ ಅವ್ನೆ ಕನ್ನಡ ಕಲಿಯೋಕ್ ಶುರು ಮಾಡ್ಕೊಂಡ್ಬಿಟ್ಟಿದಾನೆ..!”

” ಆಹ್..?”

” ಹೂ ಗುಬ್ಬಣ್ಣ.. ಸಾಲದ್ದಕ್ಕೆ ಈಗ ಸಿಕ್ಸಿಕ್ಕಿದ್ದಕ್ಕೆಲ್ಲ ಕನ್ನಡದಲ್ಲಿ ಅರ್ಥ ಹುಡುಕಿ ಹೇಳೊ ಅಭ್ಯಾಸ ಬೇರೆ ಶುರುವಾಗ್ಬಿಟ್ಟಿದೆ…”

” ಅಂದ್ರೆ?”

” ಅವನಿಗೆ ಬಟರ್ ಚಿಕನ್ ಅಂದ್ರೆ ಪಂಚ ಪ್ರಾಣ ಅಂತಾ ಗೊತ್ತಲ್ಲ್ವಾ?”

“ಹೂಂ..ಗೊತ್ತೂ”

” ಈಗ ಅವನಿಗೆ ಬೇಕಾದಾಗೆಲ್ಲ ಬಟರು ಚಿಕನ್ನು ಅಂತಿದ್ದೊನು, ಈಗ ಇದ್ದಕ್ಕಿದ್ದ ಹಾಗೆ ‘ಬೆಣ್ಣೆ ಕೋಳಿ” ಅಂತ ಶುರು ಮಾಡ್ಕೊಂಡಿದಾನೆ..!”

” ಬಟರ್ ಚಿಕನ್ನಿಗೆ, ಬೆಣ್ಣೆ ಕೋಳಿನಾ ?!”

” ಅಷ್ಟು ಮಾತ್ರವಲ್ಲ ..ಆಡೊ ಪ್ರತಿಯೊಂದು ಪದಕ್ಕು ಕನ್ನಡ ಪದ ಯಾವುದು ಅಂತ ತಲೆ ತಿನ್ನೋಕ್ ಶುರು ಮಾಡ್ಬಿಟ್ಟಿದ್ದಾನೆ.. ಫ್ರೈಯ್ಡ್ ರೈಸಿಗೆ ಹುರಿದನ್ನ ಅಂತೆ, ಬ್ರೇಕ್ಫಾಸ್ಟಿಗೆ ಮುರಿದ ಉಪವಾಸ – ಅಂತೆಲ್ಲ ಶುರು ಮಾಡ್ಕೊಂಡಿದಾನೆ..”

“ಶಿವ..ಶಿವಾ..”

” ಅವನ್ ಆಡಿದ್ ಸರಿಯೊ ತಪ್ಪೊ, ಆದ್ರೆ ನಮಗಿಂತ ಜಾಸ್ತಿ ಕನ್ನಡ ಪ್ರಜ್ಞೆ ಅವನಿಗಿದೆಂತಾ ಖುಷಿ ಪಡ್ಬೇಕು.. ನೆಕ್ಸ್ಟ್ ಜೆನರೇಷನ್ ನಾವು ಅನ್ಕೊಂಡಷ್ಟು ಗಬ್ಬೆದ್ದೋಗಿಲ್ಲ ಬಿಡೊ ಗುಬ್ಬಣ್ಣ..” ಎನ್ನುತ್ತಲೆ ಮಾತಿನ ಟ್ರಾಕ್ ಮುಗಿಸಿ, “ಅದಿರ್ಲಿ ಗುಬ್ಬಣ್ಣಾ.. ನೀನೇನು ಇಲ್ಲಿ.. ಇದ್ಯಾವ ಜಾಗಾಂತನೂ ಗೊತ್ತಿಲ್ಲ… ನೀನ್ಯಾವಾಗ ಬಂದೆ..?” ಎಂದೆ.

” ಅಯ್ಯೋ ಬಿಡಿ ಸಾರ್.. ನಾನು ಡ್ಯೂಟಿ ಮೇಲೆ ಬಂದಿದೀನಿ.. ಬಂದಿದ್ದುಕ್ ಸರಿಯಾಗಿ ಸ್ವಾಮಿ ಕಾರ್ಯಾನು ಆಯ್ತು, ಸ್ವಕಾರ್ಯಾನು ಆಯ್ತು..ಇಲ್ಲೆ ಫಸ್ಟ್ ಕ್ಲಾಸಾಗಿ ರಾಜ್ಯೋತ್ಸವ ಸೆಲೆಬ್ರೇಷನ್ನು ಆಯ್ತು.. ಬರೋದ್ ಬಂದ್ರಿ..ಒಂದರ್ಧ ಗಂಟೆ ಮೊದಲೆ ಬರೋದಲ್ವಾ?.. ಎಲ್ಲಾ ರಾಜ್ಯೋತ್ಸವದ ಬಾವುಟ ಹಾರಿಸಿ, ನಿತ್ಯೋತ್ಸವ, ಜಯ ಕರ್ನಾಟಕ ಮಾತೆಗಳನ್ನೆಲ್ಲಾ ಹಾಡಿ ಸ್ವೀಟ್ ಹಂಚಿಬಿಟ್ ಹೋದ್ಮೇಲೆ ಬಂದಿದೀರಲ್ಲಾ ? ಮೊದಲೆ ಬಂದಿದ್ರೆ ಎಲ್ಲಾ ಸುಪರ್ ಸ್ಟಾರ್ ಗೆಸ್ಟುಗಳನ್ನೆಲ್ಲಾ ನೋಡ್ಬೋದಾಗಿತ್ತು..”

“ಹೌದಾ.. ಯಾರಾರು ಬಂದಿದ್ರೊ ಗುಬ್ಬಣ್ಣಾ? ಮೊದ್ಲೆ ಹೇಳ್ಬಾರದಾಗಿತ್ತ.. ನಾನು ಬರ್ತಿದ್ದ ಟೈಮ್ ಅಡ್ಜಸ್ಟ್ ಮಾಡ್ಕೊಂಡ್ ಬರ್ತಿದ್ದೆ… ಹೇಳ್ದೆ ಕೇಳ್ದೆ ಬನ್ಬಿಟ್ಟು ಈಗ ನನಗೆ ಕಿಚಾಯಿಸ್ತಿಯಲ್ಲಾ?”

” ನಾನೇನ್ ಮಾಡ್ಲಿ ಸಾರ್..? ಇದು ಅಫಿಶಿಯಲ್ ಪ್ರಾಜೆಕ್ಟ್ ಕೆಲಸ.. ವರ್ಷ ವರ್ಷ ರಾಜ್ಯೋತ್ಸವದ ಆಚರಣೆ ಆಗೋದು ಆಟೋಮ್ಯಾಟಿಕ್ಕಾಗಿ ನಡೆಯೊ ತರಹ ಒಂದು ಸಾಫ್ಟ್ ವೇರ್ ಇಂಪ್ಲಿಮೆಂಟ್ ಮಾಡೋಕೆ ಆರ್ಡರು ಬಂದಿತ್ತು ಈ ಕಂಪನೀದು.. ಅದಕ್ಕೆ ಅಂತ ಬಂದ್ರೆ ಇಲ್ಲಿ ಸೆಲಬ್ರೇಟ್ ಮಾಡೋದು ಗೊತ್ತಾಯ್ತು.. ಎಲ್ಲಾರನ್ನ ಮೀಟ್ ಮಾಡೊ ಛಾನ್ಸ್ ಸಿಕ್ಕಿತು..”

” ಅದೇನು ಗುಬ್ಬಣ್ಣಾ, ಆಚರಣೇನಾ ಅಟೋಮೇಟ್ ಮಾಡೋಕ್ ಹೊರಟಿರೋದು ನಮ್ ರಾಜ್ಯ ಸರ್ಕಾರಾನಾ? ಅಂದ್ಮೇಲೆ ದೊಡ್ಡ ಪ್ರಾಜೆಕ್ಟೆ ಅಲ್ವಾ? ಎಲ್ಲಾ ದೊಡ್ಡ ದೊಡ್ಡ ಹೆಸರುಗಳೇ ಬಂದಿರಬೇಕಲ್ಲಾ?”

ಅದನ್ನು ಕೇಳಿ ಪಕಪಕ ನಕ್ಕ ಗುಬ್ಬಣ್ಣ, ” ಅಯ್ಯೊ ಬಿಡೀ ಸಾರ್..ನಮ್ಮ ಸರ್ಕಾರದವರೆಲ್ಲ ಕನ್ನಡಕ್ಕೋಸ್ಕರ ಇಷ್ಟೆಲ್ಲಾ ಮಾಡ್ತಾರ..? ಅದೂ ಇಲ್ಲಿಗೆ ಬಂದ್ ಸೇರ್ಕೊಂಡಿರೊ ಮಹಾನುಭಾವರ ದಯೆಯಿಂದ ಏನೊ ಅಷ್ಟೊ ಇಷ್ಟೊ ನಡೀತಾ ಇದೆ ಇಲ್ಲೂನುವೆ ಅಷ್ಟೆ..”

” ಏನು ಬರಿ ಒಗಟಲ್ಲೆ ಮಾತಾಡ್ತಿಯಲ್ಲೊ ಗುಬ್ಬಣ್ಣಾ..? ಹೋಗ್ಲೀ ಅದ್ಯಾವ ಕಂಪನಿ, ಅದ್ಯಾವ ಮಹಾನುಭಾವರು ಬಂದಿದ್ದವರು ಅಂತ ಹೇಳೊ..?”

” ಬೇರೆ ಯಾರಿಗೆ ಇಂತಹ ಶಕ್ತಿ, ಆಸಕ್ತಿ, ಶ್ರದ್ದೆ ಇರುತ್ತೆ ಸಾರ್? ಬಂದಿದ್ದವರೆಲ್ಲಾ ಮಹಾನ್ ಘಟಾನುಘಟಿಗಳೆ..ಕಂಪನಿ ಹೆಸರು ಅಮರಾವತಿ ಅಂಡ್ ಕೋ.., ಕೇರಾಫ್ ಸ್ವರ್ಗ ಲೋಕಾ ಸಾರ್.. ವರನಟ ಡಾಕ್ಟರ ರಾಜಕುಮಾರ್, ವಿಷ್ಣುವರ್ಧನ್, ನರಸಿಂಹರಾಜು, ಅಶ್ವಥ್, ಬಾಲಕೃಷ್ಣ, ನಾಗೇಂದ್ರರಾಯರು, ಬಿ.ಆರ್. ಪಂತುಲು, ಚಿ.ಉದಯಶಂಕರ್ ಹೀಗೆ ಸಾಲು ಸಾಲಾಗಿ ಇಡೀ ಕನ್ನಡ ಚಿತ್ರರಂಗವೆ ಬಂದು ಸೇರಿತ್ತು ಸಾರ್.. ಅವರೆಲ್ಲಾ ಲಾಬಿ ಮಾಡಿ ಕರ್ನಾಟಕದಲ್ಲಂತೂ ಕನ್ನಡಿಗರು ಸರಿಯಾಗಿ ರಾಜ್ಯೋತ್ಸವಾ ಮಾಡ್ತಾ ಇಲ್ಲಾ, ಇಲ್ಲಾದರು ಅದರ ಆಚರಣೆ ಆಗ್ಲೆ ಬೇಕೂಂತ ದೇವರಾಜ ಇಂದ್ರನ ಹತ್ತಿರ ಹಠ ಹಿಡಿದು ಈ ಬಾವುಟ ಹಾರಿಸಿದಾರೆ ನೋಡಿ ಸಾರ್.. ಇದಲ್ಲವೆ ನಿಜವಾದ ಕನ್ನಡಾಭಿಮಾನ..?”

ನನಗೆ ಎಲ್ಲಿಲ್ಲದ ಹಾಗೆ ರೇಗಿಹೋಯ್ತು.. ‘ಬೆಳಬೆಳಗ್ಗೆಯೆ ಎದ್ದು ನನಗೆ ಓಳು ಬಿಡುತ್ತಿದ್ದಾನಲ್ಲಾ?’ ಎಂದು. ಅದೂ ಎಲ್ಲಾ ಬಿಟ್ಟು ನನ್ನ ಕಿವಿಗೆ ಹೂ ಇಡಲು ಬರುತ್ತಿದ್ದಾನಲ್ಲಾ ಅಂತ ಭಾರಿ ಕೋಪವೂ ಬಂತು.. ನನ್ನನ್ನೇನು ಗುಗ್ಗು, ಬುದ್ಧು ಅಂದುಕೊಂಡು ಏಮಾರಿಸುತ್ತಿದ್ದಾನ? ಅನಿಸಿ ಅದೇ ಕೋಪದಲ್ಲಿ “ಗುಬ್ಬಣ್ಣಾ..” ಎಂದು ಜೋರಾಗಿ ಅರಚಿ ಅವನತ್ತ ಬಲವಾಗಿ ಕೈ ಬೀಸಿದೆ. ಅಪಘಾತದ ಮುನ್ನೆಚ್ಚರಿಕೆ ಸಿಕ್ಕಿ ತಟ್ಟಕ್ಕನೆ ಪಕ್ಕಕ್ಕೆ ಸರಿದು ಬಚಾವಾಗಲಿಕ್ಕೆ ಯತ್ನಿಸಿದ ಗುಬ್ಬಣ್ಣ.. ಅದೇನು ಯಶಸ್ವಿಯಾಯಿತೊ ಇಲ್ಲವೊ ‘ಫಳೀರ್’ ಎಂದ ಸದ್ದು ಮಾತ್ರ ಕೇಳಿಸಿತು..ಜತೆಗೆ ಹೊಡೆದ ರಭಸಕ್ಕೊ ಏನೊ ಹೈ ವೋಲ್ಟೇಜ್ ಶಾಖ ಹುಟ್ಟಿಕೊಂಡಂತೆ ಏನೊ ಬಿಸಿ ಬಿಸಿ ಚೆಲ್ಲಿಕೊಂಡ ಭಾವ..

………………….

” ಥೂ ಏನ್ರೀ ಇದು… ಈಗ ತಾನೆ ಇಟ್ಟು ಹೋಗಿದ್ದ ಬಿಸಿ ಕಾಫೀನ ಒದ್ದು ಬೀಳಿಸಿದ್ದು ಅಲ್ದೆ ಇಡೀ ರಗ್ಗಿನ ಮೇಲೆಲ್ಲಾ ಚೆಲ್ಲಿಕೊಂಡಿದ್ದಿರಲ್ಲಾ..? ನಿಮಗೆ ಅದ್ಯಾವ ನಿದ್ದೆಗಣ್ಣೊ, ಅದ್ಯಾವ ಕನಸೊ? ಹಾಳು ರಾಜ್ಯೋತ್ಸವದ ದಿನವಾದರು ನೆಟ್ಟಗೆ ಎಳಬಾರದಾ” ಎನ್ನುತ್ತ ಕೂಗುತ್ತಿದ್ದ ನನ್ನ ನೈಂಟಿ ಕೇಜಿ ತಾಜಮಹಲಿನ ದನಿ ಕಿವಿಗೆ ಬೀಳುತ್ತಿದ್ದಂತೆ ಬೆಚ್ಚಿ ಬಿದ್ದು ಮೇಲೆದ್ದು ಕುಳಿತೆ..

ಬಿಸಿ ಕಾಫಿ ಚೆಲ್ಲಿಕೊಂಡು ಇನ್ನು ಚುರುಗುಡುತ್ತಿದ್ದ ಕಾಲನ್ನು ಸವರಿಕೊಳ್ಳುತ್ತಾ, ” ಜೈ ಕರ್ನಾಟಕ ಮಾತೆ, ಜೈ ಭುವನೇಶ್ವರಿ, ಜೈ ಕನ್ನಡಾಂಬೆ” ಎನ್ನುತ್ತ ಮೇಲೆದ್ದು ನಡೆದೆ, ಕನಸಿನಲ್ಲು ಬಂದು ಕಾಡುವ ಗುಬ್ಬಣ್ಣ ಕೈಗೆ ಸಿಕ್ಕಿದರೆ ಹಾಗೆ ಸೀಳಿ ಹಾಕುವ ಕೋಪದಲ್ಲಿ…!

(ಎಲ್ಲರಿಗು ಕನ್ನಡ ರಾಜ್ಯೋತ್ಸವದ ಶುಭಾಶಯಗಳು…!)
ಗುಬ್ಬಣ್ಣ, ಹಾಸ್ಯ, ಗಡಿಯಾಚೆ, ರಾಜ್ಯೋತ್ಸವ, ಹರಟೆ, ಲಘು, ನಾಗೇಶ, ಸಿಂಚನ, ಮೈಸೂರು, ನಾಗೇಶಮೈಸೂರು, nageshamysore,nagesha,mysore

00389. ಕಲಿತಾಡು ಕನ್ನಡವ..


00389. ಕಲಿತಾಡು ಕನ್ನಡವ..
_______________________
(published in Suragi 29.10.2015)

ಕನ್ನಡ ಕಲಿ
‘ಕನ್ನಡ’ಕದಲಿ
‘ಕದ’ಲಿದರೆ ಕದ
ನಿಧಿ ಪೆಟ್ಟಿಗೆ ಸದಾ ||

ತೆರೆದಾ ಮನ
ತೆರೆ ಸರಿಸಿ ಘನ
ಬಿಚ್ಚಿದ ಕೊಡೆ ಮಾಯೆ
ಕನ್ನಡದಲದರದೆ ಛಾಯೆ ||

ನಾಲಿಗೆ ಸದಾ
ಎಲುಬಿಲ್ಲದ ಸಿದ್ಧ
ಶುದ್ಧ ಮಾಡುವ ತರ
ನುಡಿ ಕನ್ನಡ ಸ್ವರ ಸರ ||

ಸರಸರ ಸಾರ
ನುಡಿದೆ ಸಾದರ
ಮಾತಾಗುತ ಸದರ
ಮನಸಾಗುವ ಹಗುರ ||

ಕನ್ನಡಿ ಗಂಟು
ಆಗದಂತೆ ನಂಟು
ಸರಿ ಕಲಿತವರದೆಷ್ಟು
ಕವಿ ಕಾವ್ಯ ಬರೆದವರಷ್ಟು ||

ಕನ್ನ ಹಾಕಲಿ
ಕನ್ನಡವ ಬಾಚಲಿ
ಕದ್ದಿದ್ದೆಲ್ಲಾ ಶಾಶ್ವತ
ಸಿರಿವಂತ ಕನ್ನಡ ಸುತ ||

ಕನ್ನಡ ನಗಲಿ
ನಗೆಗಡಲೆ ಸಿಗಲಿ
ಕಡಲೆ ಕಬ್ಬಿಣ ಕರಗಿ
ಮಲ್ಲೆ ಸಂಪಿಗೆ ಸುರಗಿ ||

———————–
ನಾಗೇಶ ಮೈಸೂರು

ಕಲಿತಾಡು,ನಾಗೇಶಮೈಸೂರು,ಕನ್ನಡ,ನವೆಂಬರ್,nagesha,ನಾಗೇಶ,ನಾಡು,ನುಡಿ,ಮೈಸೂರು,nageshamysore,ರಾಜ್ಯೋತ್ಸವ,ಮಾತೆ,ಮೈಸೂರು,

00384. ಮಾತೆಯರಾಗಲಿ ಕನ್ನಡ ಮಾತೆ..


00384. ಮಾತೆಯರಾಗಲಿ ಕನ್ನಡ ಮಾತೆ..
________________________________

ಕನ್ನಡ ರಾಜ್ಯೋತ್ಸವ ಹತ್ತಿರವಾಗುತ್ತಿದೆ – ಎಂದಿನಂತೆ ನವೆಂಬರಿನ ಸೆರಗು ಹೊದ್ದು. ಆಡಂಬರ ಆಚರಣೆಗಳ ಸಡಗರ ಸಂಭ್ರಮ ಎಂದಿನಂತೆ ಹಾಯ್ದು ಹೋಗಲಿರುವಾಗಲೆ ಯಾವ ಅಬ್ಬರ ಆಡಂಬರಗಳಿಲ್ಲದೆ ಮಾಡಬಹುದಾದ ಮತ್ತೊಂದು ವಿಷಯ ಮನಸಿಗೆ ಬರುತ್ತಿದೆ. ಅದರಲ್ಲೂ ವಿದೇಶದಲ್ಲಿ ಕನ್ನಡ ಗಂಧವಿಲ್ಲದೆ ಬೆಳೆಯುವ ಮಕ್ಕಳ ವಿಷಯದಲ್ಲಿ ಇದು ತುಂಬಾ ಮುಖ್ಯವಾದದ್ದು. ಅದು ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳಿಗೆ ಮಾಡಬಹುದಾದ ಸುಲಭದ ಕೆಲಸ – ಕನಿಷ್ಠ ಮಾತಾನಾಡಬಲ್ಲ ಆಡು ಕನ್ನಡವನ್ನು ಮಕ್ಕಳಿಗೆ ಹೇಳಿಕೊಡುವುದು, ನಿರಂತರ ಮಾತನಾಡಿಸಿ ಅದು ಅಭ್ಯಾಸವಾಗುವಂತೆ ಮಾಡುವುದು. ತೀರಾ ಕೊಂಡಿ ಕಳಚಿ ಹೋಗದಂತೆ ಮಾಡುವಲ್ಲಿ ಇದು ಅಷ್ಟಿಷ್ಟಾದರೂ ಸಹಾಯಕಾರಿ. ಈ ಯೋಚನೆ ಬಂದಿದ್ದು ಏಕೆಂದರೆ ಮಗರಾಯ ಐಪ್ಯಾಡಿನ ಭಾಷಾಂತರ ನಿಘಂಟಿನ ಆವೃತ್ತಿಯೊಂದನ್ನು ಹಿಡಿದುಕೊಂಡು ಇಂಗ್ಲೀಷಿನಿಂದ ಕನ್ನಡಕ್ಕೆ ಪರಿವರ್ತಿಸಿ ಆ ಕನ್ನಡ ಅಕ್ಷರ ಕೂಡಿಸಿ ಓದಲು ಯತ್ನಿಸುತ್ತಿದ್ದ – ಸ್ವಪ್ರೇರಣೆಯಿಂದ. ಇನ್ನು ಕಾಗುಣಿತಾಕ್ಷರ ಬರದಿದ್ದರೂ ಅವನ ಯತ್ನಕ್ಕೆ ಖುಷಿಯಾಗಿ ನಾವು ಸಹಾಯ ಮಾಡಲೆತ್ನಿಸುತ್ತಿದ್ದಾಗ ಅನಿಸಿತು – ಈ ತರದ ಸಲಕರಣೆಗಳಿಂದ ಸರಿಯಾದ ಮಾರ್ಗದರ್ಶನ ನೀಡಿದರೆ ಅವರೆ ಕಲಿಯುವ ಸಾಧ್ಯತೆಯಿದೆಯೆಂದು. ಅದರ ಬುನಾದಿಯಾಗಿ, ತಳಹದಿಯಾಗಿ ಸ್ವಲ್ಪ ಆ ಭಾಷಾ ಪ್ರೇಮ ಹುಟ್ಟುವ ವಾತಾವರಣ ಸೃಜಿಸಿದರೆ ಸಾಕು. ಅದರ ಮೊದಲ ಹೆಜ್ಜೆಯಾಗಿ ಮನೆಯಲ್ಲಿ ಅಪ್ಪ, ಅಮ್ಮ ತರದ ಸಣ್ಣ ಪದಗಳಿಂದಲೆ ಆರಂಭಿಸಬಹುದು. ಈಗಾಗಲೆ ಎಷ್ಟೊ ಜನ ಇದಕ್ಕು ಹೆಚ್ಚು ಮಾಡುತ್ತಿರಬಹುದು.. ಇನ್ನು ಆರಂಭಿಸದಿದ್ದವರು ಈ ಕನ್ನಡ ರಾಜ್ಯೋತ್ಸವದಿಂದಾದರು ಆರಂಭಿಸಿದರೆ ಕನ್ನಡಕ್ಕೊಂದು ಅಮೂಲ್ಯ ಕೊಡುಗೆ ನೀಡಿದಂತಾಗುತ್ತದೆ, ಮುಂದಿನ ಪೀಳಿಗೆಗೆ ದಾಟಿಸುವ ಯತ್ನದಲ್ಲಿ. ಇದರಲ್ಲಿ ತಂದೆಗಳ ಪಾತ್ರವೂ ಹಿರಿದೆ ಆದರು ಮಾತೆಯರು ಮೊದಲ ಅಡಿಗಲ್ಲು ಹಾಕಿದರೆ ಭಾವನಾತ್ಮಕ ಬಂಧ ಬಲವಾಗಲಿಕ್ಕೆ ರಹದಾರಿ ಕೊಟ್ಟಂತಾಗುತ್ತದೆ. ಕನ್ನಡ ಮಾತಾಡಲೊಲ್ಲದ ಕನ್ನಡ ಮಾತೆಯರೂ ಇರುವುದು ನಿಜವಾದ ಕಾರಣ ಅವರಿಗೊಂದು ವಿಶೇಷ ಮನವಿಯಾಗಿ ಈ ಪುಟ್ಟ ಕವನ – ಕನ್ನಡ ಮಾತೆಯರಾಗಿ ಕನ್ನಡ ಮಾತೆಯನ್ನು ಪೋಷಿಸಲೆಂದು ಆಶಿಸುತ್ತ, ವಿನಂತಿಸಿಕೊಳ್ಳುತ್ತ.

ಕನ್ನಡ ಮಾತೆಯರೇಕೊ..
______________________

ಕನ್ನಡ ಮಾತೆಯರೇಕೊ
ಕನ್ನಡ ಮಾತೆ ಆಡರಲ್ಲ ?
ಮಕ್ಕಳೊಡನೆ ಮಾತಾಟ
ಕನ್ನಡವೆಲ್ಲಿ ಕಾಣೆಯಾಯ್ತ ? ||

ಮಮ್ಮೀ ಡ್ಯಾಡೀ ಮಧುರ
ಕರೆಯಲದೆಷ್ಟೂ ಸದರ
ಅಪ್ಪ ಅವ್ವಾ ಅಮ್ಮಾ ಅಣ್ಣ
ಅನ್ನಬೇಕಿತ್ತಲ್ಲಾ ಉದರ ? ||

ಉಳಿವಿಗಾಗಿ ಹೋರಾಟ
ನಿಜ ಬದುಕೆ ಜೂಜಾಟ
ಜೂಜಿನ ಜೂಟಾಟ ಕುತ್ತೆ
ಕಳುವಾಗದಿಹಳೆ ಮಾತೆ ? ||

ಉಂಡು ತಿಂದು ಲಾಲಿ
ಹಾಡುವಾಗ ಜೋಕಾಲಿ
ಕಂದ ಮಲಗೆಂದು ಹಾಡಿ
ಮಿಡಿದರದೆ ಕನ್ನಡ ದುಡಿ ||

ಟುಸು ಪುಸು ಜಗದಾಚೆ
ಜತೆ ಕೂತ ಆತ್ಮೀಯತೆ
ಬಚ್ಚಿಡದೆ ಬಿಚ್ಚಲಿ ಮಾತೆ
ಕನ್ನಡ ತಾಯಿಗೆ ಘನತೆ ||

– ನಾಗೇಶ ಮೈಸೂರು

ಕನ್ನಡ, ಮಾತೆ, ರಾಜ್ಯೋತ್ಸವ, ನಾಡು, ನುಡಿ, ನವೆಂಬರ್, ನಾಗೇಶ, ಮೈಸೂರು, ನಾಗೇಶಮೈಸೂರು, nagesha, Mysore, nageshamysore

00281. ನಾಡದೇವಿಗೊಂದು ನಮನ


00281. ನಾಡದೇವಿಗೊಂದು ನಮನ
________________________

ಮತ್ತೆ ನಾಡಹಬ್ಬ ‘ಕನ್ನಡ ರಾಜ್ಯೋತ್ಸವ’ ಕಾಲಿಕ್ಕುತಿದೆ. ಇಡೀ ವರ್ಷ ಧೂಳು ಹಿಡಿಯುತ್ತಿದ್ದ ಕನ್ನಡ ಬಾವುಟಗಳೆಲ್ಲ ಕೊಡವಿಕೊಂಡೆದ್ದು ನಿಂತು, ಸಿಂಗರಿಸಿಕೊಂಡು ಮೆರೆದಾಡುವ ಕಾಲ. ರಸ್ತೆ, ಗಲ್ಲಿ, ಸರ್ಕಲ್ಲುಗಳ ಕಂಬಗಳಿಗೂ ಸಿಂಗರಿಸಿಕೊಂಡು ನಲಿಸಾಡುವ ಸುಸಮಯ. ರಾಜ್ಯ ಸರಕಾರವೂ ಸೇರಿದಂತೆ, ಆಡಳಿತದ ಚುಕ್ಕಾಣಿ ಹಿಡಿದ ಸೂತ್ರಧಾರರು ಭಾಷಣಗಳ ಜತೆಗೆ ನಾಡು-ನುಡಿಯ ಏಳಿಗೆ, ಪ್ರಗತಿಗೆ ನಿಜಾಯತಿಯಿಂದ, ಪ್ರಾಮಾಣಿಕತೆಯಿಂದ ಏನನ್ನಾದರೂ ಮಾಡಬಹುದಾದ ಅವಕಾಶ.

00281. ನಾಡದೇವಿಗೊಂದು ನಮನ

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು
Thanks & Best Regards / Nagesha Mysore
WeBlog site: nageshamysore.wordpress.com

00000. ಮನದಿಂಗಿತಗಳ ಸ್ವಗತ – ಪರಿವಿಡಿ ಮತ್ತು ಇತರೆ ವಿವರ


______________________________________________________________________________

00000. ಮನದಿಂಗಿತಗಳ ಸ್ವಗತ – ಪರಿವಿಡಿ ಮತ್ತು ಇತರೆ ವಿವರ
______________________________________________________________________________

00140. ಶುಮಾಕರನೆಂಬ ವೇಗದ ವಿಪರ್ಯಾಸ (ಕಿರು ಬರಹ + ಕವನ)

00138. ಎರಡು ದೋಣಿಯ ಮೇಲೆ ಕಾಲಿಟ್ಟ ಬದುಕು…(ಅನುಭವ + ಕಿರು ಪ್ರಬಂಧ)

00139. ಕಾಲದ ಗಡಿಯಾರ . (ಕಿರು ಬರಹ + ಕವನ)

00137. ಮಳೆಯಾಗವ್ಳೆ ಚೌಡಿ.. (ಕಿರು ಬರಹ + ಕವನ)

00136. ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ..(ಹೊಸದ ತಂದು ಹಳತ ಮರೆತುಬಿಡಿ..)

00135. ಸುದ್ದಿ ಮುಟ್ಟಿ ಮನ ಸೂತಕ…(ಕಳಚಿದ ಕೊಂಡಿ) (ಕಿರು ಬರಹ + ಕವನ)

00134. ದೇವರು ನಮಗೆ ಹಾಕಿದ ಟೋಪಿ (ಮಕ್ಕಳ ಪದ್ಯ) (ಕಿರು ಬರಹ + ಕವನ)

00133. ಚಿತ್ರಗುಪ್ತನಿಗೊಂದು ಸಲಹೆ (ಸರಿ ತಪ್ಪುಗಳ ಲೆಕ್ಕ) (ಕಿರು ಬರಹ + ಕವನ)

00132. ಅಂಗಜನ ಅಂಗದ ಸದ್ದು … (ಕಿರು ಬರಹ + ಕವನ)

00131. ಮಳೆಯಾಗುತ ಸಾಂಗತ್ಯ…. (ಕಿರು ಬರಹ + ಕವನ).

00130. ರಾಜರತ್ನಂ ನೆನಪಿಗೆ (ಕಿರು ಬರಹ + ಕವನ)

00129. ಪುಸ್ತಕ ವಿಮರ್ಶೆ: ಕಣ್ಣೀರಜ್ಜ ಮತ್ತು ಇತರ ಕಥೆಗಳು (ಪುಸ್ತಕ ವಿಮರ್ಶೆ)

00128. “ಬೀರ” ದೇವರು ಒಳಗಿಳಿದರೆ ಶುರು! (ಕಿರು ಬರಹ + ಕವನ)

00127. ಮುರಿದು ಬಿದ್ದ ಪಿಎಸ್ಪಿ (ಬರಹ + ಕವನ)

00126. ನೂರು ಶತಕಗಳ ಸರದಾರ (ಕಿರು ಬರಹ + ಕವನ)

00125. ಶ್ರೀ ಸತ್ಯನಾರಾಯಣ ವ್ರತದಿ ಪೂಜಾಂಗವಾಗಿಹ ಕಥನ (ಸರಳ ಕಾವ್ಯರೂಪದಲ್ಲಿ)

00124. ಈ ಕೆಮ್ಮೊಣಕೆಮ್ಮು… (ಕಿರು ಬರಹ + ಕವನ)

00123. ತುಳಸಿಗಿಂದು ಸಂಭ್ರಮ (ಕಿರು ಬರಹ + ಕವನ)

00122. ಈ ಸಂಪದ (ಕಿರು ಬರಹ + ಕವನ)

00121. ಮಂಗಳಗ್ರಹಕ್ಕೊಂದು ಗ್ರಹಕೊಂದು ಕಲ್ಲು (ಕಿರು ಬರಹ + ಕವನ)

00120. ಹುಡುಗಾಟ ಆಡಿದ್ರೆ, ಪಟಾಕಿ ಸುಮ್ನೆ ಬಿಡುತ್ತ? (ಕಿರು ಬರಹ + ಕವನ) (04.11.2013)

00119. ದೀಪೋತ್ಸಾಹಂ ಭುವಂಗತೆ.. (ಬರಹ + 2 ಕವನ) (02.11.2013)

00118. ರಾಜ್ಯೋತ್ಸವದ ಮನವಿ : ಪದಗಳಿಗಾಗುತ ದನಿ (ಕವನ + ಕಿರು ಬರಹ) (01.11.2013)

00117. ಗುಜರಾತಿನ ಮೋಡಿ, ಪಟೇಲರ ಹಾಡಿ (ಕವನ + ಕಿರು ಬರಹ)

00116. ‘ಐ’ಗಳ ಪುರಾಣ – 03 …’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00115. ಮಂಡೋದರಿ, ನಿನಗ್ಯಾಕಿ ಪರಿ ಕಿರಿಕಿರಿ..? (ಕವನ + ಬರಹ) (WIP)

00114. 00114. ಸಮಾನಾಂತರ ಚಿಂತನಾ ಚಿತ್ತ (ಕವನ + ಕಿರು ಬರಹ)

00113. ಹಾಸ್ಯದಲೆ ಕೊಲ್ಲೆ ಪೂರ್ತಿ, ಸಿದ್ದಹಸ್ತ ನರಸಿಂಹಮೂರ್ತಿ (ಕವನ + ಕಿರು ಬರಹ)

00112. ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ….(ಕವನ + ಕಿರು ಬರಹ)

00111. ಖೈರುದ್ದೀನನಿಗೆ ಹಬ್ಬದ ಶುಭಾಶಯ ಹೇಳಿ…(ಕವನ + ಕಿರು ಬರಹ)

00110. ಸಿಂಗಪುರ್ ಈಸ್ ಏ ಫೈನ್ ಸಿಟಿ…(ಕವನ + ಕಿರು ಬರಹ)

00109. ಆಯುಧ ಪೂಜೆ, ವಿಜಯದಶಮಿ (2) (ಕವನ + ಕಿರು ಬರಹ)

00108. ಮಹಾಲಯ ಅಮಾವಾಸೆ (ಮಹಾನವಮಿ) (01) (ಕವನ + ಕಿರು ಬರಹ)

00107. ಪಾತ್ರಗಳೆ ರಾಯರಿಗೆ ಸಲ್ಲಿಸಿವೆ ವಂದನ ! (ಕವನ + ಕಿರು ಬರಹ)

00106. …..ನಿನ್ನ ನೆನಸುತ್ತೇನೆ ! (ಕವನ + ಕಿರು ಬರಹ)

00105. ಯಾರದು ಮುಂದಿನ ಪಾಳಿ? (ಕವನ + ಕಿರು ಬರಹ)

00104. ಕೂರ್ಮಾವತಾರ : ಸಾಮಾನ್ಯ ಪ್ರೇಕ್ಷಕನೊಬ್ಬನ ಅನುಭವ, ವಿಮರ್ಶೆಯ ಒಳನೋಟ (ಅನುಭವ + ವಿಮರ್ಶೆ + ಬರಹ)

00103. ಯಾರ ಗೆಲುವು – ‘ಛಿಧ್ರವೋ, ಸಮಗ್ರವೋ? (ಕವನ + ಕಿರು ಬರಹ)

00102. ಪಂಚ್ಲೈನ್ ‘ಪಂಚೆ’ ಸಿದ್ರಾಮಣ್ಣ.. (ಕವನ + ಕಿರು ಬರಹ)

00101. ಯಾರು..? (ಚಿಣ್ಣರ ಹಾಡು) (ಕವನ + ಕಿರು ಬರಹ)

00100. ನಮ್ಮ ಬಾಲ್ಯದ ‘ಶರ್ಲಾಕ್ ಹೋಂ’ “ಎನ್. ನರಸಿಂಹಯ್ಯ” ನೆನಪಲಿ ..(ಕವನ + ಕಿರು ಬರಹ)

00099. ಕೆಂಪೇಗೌಡರೆ ಬನ್ನಿ ಹೀಗೆ ……(ಕವನ + ಕಿರು ಬರಹ)

00098. “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 02” (ಭಾಗ – 02) (ಹಾಸ್ಯಬರಹ + ಹರಟೆ + ವ್ಯಂಗ್ಯ)

00097. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 04” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00096. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 03” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00095. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 02” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00094. ‘ಐ’ಗಳ ಪುರಾಣ – 02 …’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00093. ಅಲ್ಲಿರೋದು ನಮ್ಮನೆ, ಇಲ್ಲಿರೋದು ಸುಮ್ಮನೆ…(ಕವನ + ಕಿರು ಬರಹ)

00092. ಗಜಾನನ ಗಜ-ಮೂಷಿಕಾಸುರ ಕಥೆ (ಕವನ + ಕಿರು ಬರಹ)

00091. ಹುಟ್ಟುಹಬ್ಬದ ನಮಸ್ತೆ..(ಪೂಚಂತೆ ಯಾರಂತೆ?) (ಕವನ + ಕಿರು ಬರಹ)

00090. ಅವರಿತ್ತ ಜೀವನ ಭಿಕ್ಷೆ (ಕವನ + ಕಿರು ಬರಹ)

00089. ಶ್ರಾವಣ (ಕವನ + ಕಿರು ಬರಹ)

00088. ಮಿನುಗುತಾರೆ, ಗುನುಗುತ್ತಾರೆ… (ಕವನ + ಕಿರು ಬರಹ)

00087. ಡಾಲರ ರೂಪಾಯಿ ಲೆಕ್ಕಾಚಾರ (ಕವನ + ಕಿರು ಬರಹ)

00086. ಗೋಕುಲದಲಿ ಅಷ್ಟಮಿ , ಗೋಕುಲಾಷ್ಟಮಿ.. (ಕವನ + ಕಿರು ಬರಹ)

00085. ಜಲಚಕ್ರ (ಕವನ + ಕಿರು ಬರಹ)

00084. ವರಮಹಾಲಕ್ಷ್ಮಿ ವ್ರತ (ಕವನ + ಕಿರು ಬರಹ)

00083. ಅಷ್ಟಲಕ್ಷ್ಮಿಯರ ವರ (ಕವನ + ಕಿರು ಬರಹ)

00082. ಭಾರತಿಮನ, ಭಾರತಿತನ! (ಕವನ)

00081. ಮತ್ತೊಂದು ಸ್ವಾತಂತ್ರದ ದಿನ…. (ಕವನ + ಕಿರು ಬರಹ)

00080. ನಿಯತಿಯ ಶಿರ (ಕವನ)

00079. ಬದಲಾಗಬೇಕಾಗಿದ್ದು ನಾವು-ನೀವಾ ಅಥವಾ ಈ ವ್ಯವಸ್ಥೆಯಾ? (ಚಿಂತನೆ + ಲೇಖನ + ವಾಸ್ತವ )

00078. ಕಟ್ಟುವ ಬನ್ನಿ ಕನ್ನಡ ಉಳಿಸಿ ಬೆಳೆಸುವ ಪೀಳಿಗೆ (ಚಿಂತನೆ + ಅಂಕಣ: ಚಿಂತಕರ ಚಾವಡಿ (ಕನ್ನಡ ಸಂಘ)+ ಲೇಖನ + ಸಿಂಚನ)

00077. ಮೋಡ ಚುಂಬನ..ಗಾಢಾಲಿಂಗನ.. (ಕವನ + ಕಿರು ಬರಹ)

00076. ಎರಡು ಆಷಾಡ ಗೀತೆಗಳು (ಕವನ + ಕಿರು ಬರಹ)

00075. ಪುಟ್ಟನ ಅಳಲು .. (ಕವನ + ಕಿರು ಬರಹ)

00074. ಕಲಿಯಲು ಎಲ್ಲಿದೆ ಬಿಡುವು? (ಕವನ + ಕಿರು ಬರಹ)

00073. ದೆವ್ವ ಭೂತದ ಭೀತಿ! (ಕವನ)

00072. ಆಧ್ಯಾತ್ಮಿಕ ಕರ ಬಾಡಿಗೆ ತರ..! (ಕವನ + ಕಿರು ಬರಹ)

00071. ಅಸಂಗತ..! (ಕವನ + ಕಿರು ಬರಹ)

00070. ಹೆಣ್ಮನದ ಹವಾಗುಣ….! (ಕವನ + ಕಿರು ಬರಹ)

00069. ಬಿಟ್ಟುಬಿಡಿ ಸಿಗರೇಟು…! (ಬಿಟ್ಟು ಬೀಡಿ ಸಿಗರೇಟು..) (ಕವನ + ವಾಸ್ತವ)

00068. ಚಿಲ್ಲರೆ ಅಂಗಡಿ ಕಾಕ , ರೀಟೇಲಲಿ ಅಕ್ಕಿ..! ( ಕವನ + ವಾಸ್ತವ)

00067. ಧೂಮಸ್ನಾನ….! (ಕವನ + ವಾಸ್ತವ)

00066. ಧೂಮ-ಸಾಹಿತ್ಯ…! (ಕವನ + ವಾಸ್ತವ)

00065. ಸರಿ ತಪ್ಪುಗಳ ಲೆಕ್ಕ (ಚಿತ್ರಗುಪ್ತ ವಾಗ್ವಾದ – ಪೂರ್ವಾರ್ಧ: ಲಘು ಹಾಸ್ಯದ ಧಾಟಿ) (ಕವನ + ಕಿರು ಬರಹ)

00064. ಗಂಗಾವತಾರಣ (ಗಂಗಾ + ಅವತಾರ + ರಣ) (ಕವನ + ಬರಹ + ವಾಸ್ತವ + ಪೌರಾಣಿಕ)

00063. ಗಂಗಾವತರಣ…! (ಕವನ + ಕಿರು ಬರಹ)

00062. ಪಾಂಚಾಲಿಯ ಹಾಡು (ಕವನ + ಕಿರು ಬರಹ)

00061. ಈ ಅಪ್ಪಗಳು (ಕವನ + ಕಿರು ಬರಹ)

00060. ಸಾವೆಂಬ ಸಕಲೇಶಪುರದಲ್ಲಿ….!

00059. ನಿರಂತರ ಕುಣಿತ! (ಕವನ)

00058. ಗುಂಪಿನೊಳಗವಿತಿದೆಯೆ ವರ್ಣ? (ಕವನ + ಕಿರು ಬರಹ)

00057. ಈ ದಿನ ತನು ಮನ ಭಾವ….! (ಕವನ)

00056. ಹಿತ್ತಲ ಗಿಡದ ಮದ್ದು (ಕವನ + ಕಿರು ಬರಹ)

00055. ಏಕಾಂತದ ಏಕಾಂತ…! (ಕವನ + ಕಿರು ಬರಹ)

00054. ಈ ಅಮ್ಮಗಳು (ಕವನ + ಕಿರು ಬರಹ)

00053. ಚುನಾವಣಾ ಫಲಿತಾಂಶ ! (ಕವನ)

00052. ಸೃಷ್ಟಿ ರಹಸ್ಯ..! (ಈ ಅಂಡ ಪಿಂಡ ಬ್ರಹ್ಮಾಂಡದ ಸಶೇಷ ಭಾಗ) (ಕವನ + ಕಿರು ಬರಹ)

00051. ಈ ಅಂಡ ಪಿಂಡ ಬ್ರಹ್ಮಾಂಡ …(ಕವನ + ಕಿರು ಬರಹ)

00050. ಈ ಏಪ್ರಿಲ್ಲಿಗೇಕೊ ಮುನಿಸು…(ಕವನ + ಕಿರು ಬರಹ)

00049. ಯುಗಾದಿಯಾಗಲಿ ಜಾಗತಿಕ…! (ಕವನ)

00048. ಒತ್ತಡಗಳ ಬೆತ್ತ ! (ಕವನ)

00047. ಸುಖಕಿರುವ ಅವಸರ….! (ಕವನ)

00046. ತ್ಸುನಾಮಿ ಹೊತ್ತಲಿ…(ಕವನ)

00045. ಗುಬ್ಬಣ್ಣನ ಸ್ವಗತಗಳು (ಚುಟುಕಗಳು)

00044. ಮುಗಿದರೆ ಇಹ ವ್ಯಾಪಾರ…..(ಕವನ)

00043. ಮಾತಿಗೊಬ್ಬರ ….(ಕವನ)

00042. ವಚನದಲ್ಲಿ ನಾಮಾಮೃತ ತುಂಬಿದ ವಚನಾಂಜಲಿ ಕಾರ್ಯಕ್ರಮ (ವರದಿ) (ಕನ್ನಡ ಸಂಘ + ವರದಿ + ಲೇಖನ)

00041. ‘ಕನ್ನಡ ಪ್ರಭ’ದ ಕಬ್ಬಿಗ ತೋಟದಲ್ಲರಳಿದ ಡಬ್ಲ್ಯು. ಬಿ. ಏಟ್ಸನ ಕವನ : ನನ್ನ ಮೊದಲ ಅನುವಾದದ ಯತ್ನ..(ಕವನ + ಬರಹ)

00040. ಆಗ್ನೇಯೇಷ್ಯಾದ ಹಣ್ಣಿನ ರಾಣಿ – ‘ಮಾಂಗಸ್ಟೀನ್’! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00039. “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 01!” (ಹಾಸ್ಯಬರಹ + ಹರಟೆ + ವ್ಯಂಗ್ಯ)

00038 – ಹೊಸ (ಹಳೆ) ರುಚಿ: “ಹಸಿ-ಹುಳಿ” (ಹೊಸ ರುಚಿ + ಲಘು ಹಾಸ್ಯ)

00037 – ರುಚಿಗೆ ರಾಜಾ, ವಾಸನೆಯೆ ಗಾರ್ಬೇಜಾ! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00036 – ಈ ಕೆಂಪಮ್ಮನ ಹೆಸರೆ ಡ್ರಾಗನ್ ಫ್ರೂಟು, ನೋಡಲೆ ಸೊಗಸು ಅವಳಾಕಿದ ಸೂಟು! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00035 – ಜುಟ್ಟಿನ ಬಟ್ಟೆ ಹೊದ್ದ ‘ಕೇಶೀರಾಜ’, ಮುತ್ತಿನ ಬಣ್ಣದ ‘ರಂಬೂತಾನ್’ ಹಣ್ಣೆ ಖನಿಜ! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00034 – ವಿಷಾಪಹಾರಿ ‘ಡ್ರಾಗನ್ನಿನ ಕಣ್ಣು’, ಈ ರುಜಾಪಹಾರಿ ‘ಲೊಂಗನ್’ ಹಣ್ಣು! (ಹಣ್ಣುಗಳ ಪರಿಚಯ + ಲಘು ಹಾಸ್ಯ)

033A – ಸಿಂಗಾಪುರದ “ಹಾವ್ ಪಾರ ವಿಲ್ಲಾ” ದೃಶ್ಯ ಕಲಾ ತೋಟ! (photos) (ಪ್ರವಾಸಿ ತಾಣ ಪರಿಚಯ + ಪ್ರವಾಸ ಅನುಭವ)

033 – ಸಿಂಗಪುರದಲ್ಲಿನ ಚೀಣಿ ದೃಶ್ಯ ಕಾವ್ಯ “ಹಾವ್ ಪಾರ್ ವಿಲ್ಲಾ” ( ಪ್ರವಾಸಿ ತಾಣ ಪರಿಚಯ + ಪ್ರವಾಸ ಅನುಭವ + ಲಘು ಹಾಸ್ಯ)

00032 – ಸಂಪತ್ತಿನ ಬೀಜ, ಸಸಿ ಮತ್ತು ವೃಕ್ಷಗಳ ನೀತಿ ಭೋಧಕ ಕಥೆ (ಆಧುನಿಕ ಪುರಾಣ ಕಥಾ ಕಾಲಕ್ಷೇಪ)! (ಆಧುನಿಕ ನೀತಿ ಭೋಧೆ + ವಿಡಂಬನೆ + ವ್ಯಂಗ್ಯ)

00031 – ಅಪೂರ್ವ ಕವನದ ಕುರಿತು ಹಿರಿಯ ಕವಿಯೊಬ್ಬರ ಮಾತು (ಲೇಖನ + ಬರಹ + ಪ್ರಬಂಧ + ಕವನ + ವ್ಯಕ್ತಿತ್ವ )

00030 – ಪುಸ್ತಕ ವಿಮರ್ಶೆ: ಮಾವೋನ ಕೊನೆಯ ನರ್ತಕ (ಪುಸ್ತಕ ವಿಮರ್ಶೆ)

00029. ಇರುವೆ ಮತ್ತು ಒಂದು ತುಂಡು ರೊಟ್ಟಿಯ ಕಥೆ! (ಆಧುನಿಕ ನೀತಿ ಭೋಧೆ + ವಿಡಂಬನೆ + ವ್ಯಂಗ್ಯ)

00028. ಸಿಂಗನ್ನಡಿಗರಿಂದ ಸಿಂಗನ್ನಡಿಗರಿಗಾಗಿ! – ಸಿಂಗಾರ ಉತ್ಸವ 2013 (ಕನ್ನಡ ಸಂಘ + ವರದಿ + ಲೇಖನ )

00027. ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 02) (ಹಾಸ್ಯಬರಹ + ಹರಟೆ)

00026. ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 01) (ಹಾಸ್ಯಬರಹ + ಹರಟೆ)

00025. ಸರಿಯಪ್ಪಾ ಸಾಕು ಬಿಡು ಕಲಿಸಿದ್ದು ಸುಗ್ಗಿ, ಉರು ಹೊಡೆದೇ ಕಲಿವೆ ನಾ ಕನ್ನಡದ ಮಗ್ಗಿ! ( ಲಘು ಹಾಸ್ಯ + ಕಥನ + ಅನುಭವ)

00024. ಜತೆ ನೀ ಕಾಡಿಗೆ , ಹೋಗಲಿಲ್ಲವೇಕೆ ಊರ್ಮಿಳೆ? (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00023. ಶೂರ್ಪನಖಿ, ಆಹಾ! ಎಂಥಾ ಸುಖಿ! (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00022. ದುರಂತ ನಾಯಕಿ ಸೀತೆಯ ಬದುಕು………! (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00021. ಶ್ರೀ ರಾಮನಿಗೇನಿತ್ತನಿವಾರ್ಯ….? (ಬರಹ + ಕವನ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00020. ಈ ದಿನ ಜನುಮದಿನಾ…..! (ಬರಹ + ಕವನ + ನೆನಪು + ಭಾವನೆ)

00019. ‘ಐ’ಗಳ ಪುರಾಣ – 01….’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00018. ಸಿಂಗಪೂರ ಸುತ್ತಾಟ, ಊಟ – ಸಿಕ್ಕಿತ ಕನಿಷ್ಟ ರೋಟಿ, ಪರಾಟ..? (ಪ್ರವಾಸದ ಅನುಭವ + ಕವನ + ಲಘು ಹಾಸ್ಯ )

00017. ಹುಡುಕೂ, ವರ್ಷದ್ಹುಡುಕು ..! (ಹಬ್ಬ + ಹರಿದಿನ + ಸಂಪ್ರದಾಯ + ಬರಹ + ಲೇಖನ)

00016. ಅಂತರಂಗದಂತಃಪುರದ ಕದಪದ ಮನದನ್ನೆಯರು…! (ಬರಹ + ಕವನ + ಅನುಭವ + ಆಡಳಿತಾತ್ಮಕ + ಲಘು ಹಾಸ್ಯ)

00015 – ತರ ತರ ಋತು ಸಂವತ್ಸರ……ಹಳತೊಸತು ಮೇಳೈಸಿತೊ ಬೆರೆತು! (ಹಬ್ಬ + ಹರಿದಿನ + ಸಂಪ್ರದಾಯ + ಬರಹ + ಕವನ)

00014 – ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ….! (ನೀಳ್ಗಾವ್ಯ + ಕಾವ್ಯ + ಪೌರಾಣಿಕ)

00013 – ಹಾರುತ ದೂರಾದೂರ…..! (ಅನುಭವ + ಪ್ರಬಂಧ + ಹಾಸ್ಯಲೇಖನ + ಲಘು ಹಾಸ್ಯ)

00012. ಹೆಚ್ಚು ಬೆಲೆಯೆಂದರೆ ಶ್ರೇಷ್ಟ ಗುಣಮಟ್ಟವಿರಬೇಕೆಂದೇನಿಲ್ಲ, ಗೊತ್ತಾ! (ಆಡಳಿತಾತ್ಮಕ + ಮ್ಯಾನೇಜ್ಮೆಂಟು + ವ್ಯವಸ್ಥೆ + ವಾಸ್ತವ)

00011. ಲಘು ಪ್ರಬಂಧ: ನನ್ನ ಪ್ರಧಾನ ಸಂಪಾದಕ ಹುದ್ದೆ…! (ಅನುಭವ + ಪ್ರಬಂಧ + ಹಾಸ್ಯಲೇಖನ + ಲಘು ಹಾಸ್ಯ)

00010. ವಿಮರ್ಶೆ : ಕವನ ಸಂಕಲನ: “ಅಂತರ ಹಾಗು ಇತರ ಕವನಗಳು” ಕವಿ: ವಸಂತ ಕುಲಕರ್ಣಿ

00009. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 01” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00008. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(03) (ಬರಹ + ವಿಡಂಬನೆ + ಲೇಖನ)

00007. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(02) (ಬರಹ + ವಿಡಂಬನೆ + ಲೇಖನ)

00006. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(01) (ಬರಹ + ವಿಡಂಬನೆ + ಲೇಖನ)

00005. ಮೆಲ್ಲುಸಿರೆ ಸವಿಗಾನ….! (ಬರಹ + ಭಾವನೆ + ವಿಮರ್ಶೆ)

00004. ಗಮನೇಶ್ವರಿಯ ಗಮಕ, ವಯಸ್ಸಿನಾ ಮಯಕ…! (ಬರಹ + ಅನುಭವ)

00003. ನೀನೋದಿದ ವಿದ್ಯೆಗೆಲ್ಲಿಡುವೆ ನೈವೇದ್ಯ? (ಲೇಖನ)

00002. ಏನಾಗಿದೀದಿನಗಳಿಗೆ? (ಲೇಖನ)

00001. ಮೊದಲ ಬ್ಲಾಗ್ – ಮನದಿಂಗಿತಗಳ ಸ್ವಗತ! (ಬರಹ + ಕವನ)