01124. ಕಾಯುತಿದೆ ಸ್ವಗತ


01124. ಕಾಯುತಿದೆ ಸ್ವಗತ
_____________________


ಚಿಲುಕದ ಸದ್ದಾಯಿತು
ಮತ್ತೆ ತಲೆಯೆತ್ತಿ ನೋಡಿದೆ
ಹಾಳು ಗಾಳಿ ಕದ ಸರಿಸಿತ್ತು
ಅವನ ಸದ್ದಿಲ್ಲ ಸುಳಿವಿಲ್ಲ..

ಹೆಜ್ಜೆ ಗುರುತಿಗೂ ಗದ್ದಲ
ಬಿಡದೆ ಆವರಿಸಿ ನೆಲವೆಲ್ಲ
ಇಡಲೆಲ್ಲಿ ಅಳಿಸದ ಹಾಗೆ ?
ಅತ್ತರು ಕಥೆ ಮುಗಿದಿಲ್ಲ..

ಹೇಳಿ ಹೋಗಲಿಲ್ಲ ಜನ
ಕೂರ್ಮದ ಜನ್ಮ ಅನಿಸಿತ್ತು
ಚಿಪ್ಪೊಳಗಿಕ್ಕದೆ ತಲೆ ಕಾಲು
ಬಾವಿ ಕಪ್ಪೆಯಾದರು ಸಾಕಿತ್ತು..

ಮಾಡಿದ್ದಾದರೂ ನಾನೇನು ?
ನಾನಾಗುವೆನೆಂದ ಸ್ವಗತ
ನೀನಾಗುವುದೆಂತು? ನಾನಲ್ಲ
ಅರಿಯದೆ ನಡೆದಿದ್ದಷ್ಟೇ ದಿಟ..

ಹಾಳಾದ ಮನಸ ಚಟ
ಬಂದರು ಬರಬಹುದಾರೊ
ತಂತಾನೆ ಅನಿಸಿ ತೆರೆದಿಟ್ಟ
ಬಾಗಿಲಲು ಹವೆ ನಿಟ್ಟುಸಿರು..

– ನಾಗೇಶ ಮೈಸೂರು
೦೫.೦೨.೨೦೧೭

(Picture source: internet / social media)

00939. ನಟರಾಣಿಯ ಸ್ವಗತ


00939. ನಟರಾಣಿಯ ಸ್ವಗತ
_______________


ನಟರಾಣಿ ನಾನು
ನಟರಾಜನಲ್ಲ
ಪ್ರಳಯವಲ್ಲ ಪ್ರಥಮ
ಪುನರುಜ್ಜೀವನ ಸಂಭ್ರಮ

ಮೆಟ್ಟಿ ನಿಲ್ಲುವೆ ಪುರುಷದ
ಅಹಂಕಾರದ ನಿಮಿತ್ತ
ಸೃಷ್ಟಿಗದೆ ಮೂರ್ತರೂಪು
ತಿರೋಧಾನ ಅನುಗ್ರಹಕೆ

ನಡೆದುಂಟು ಯುಗಾಂತರ
ತ್ರಿಕಾರ್ಯಗಳ ಬಡಿಗೆ
ಸ್ಥಿತಿ ಲಯ ಕಾಲ ನಡುವೆ
ಸೃಷ್ಟಿಯಾಗಿ-ಸುತ ಉದ್ಭವ..

ನಾ ಕಾಣದಾನಂತ ಮೊತ್ತ
ಪುರುಷದಾಡಂಬರವಷ್ಟೇ ವ್ಯಕ್ತ
ಅವ್ಯಕ್ತ ತಾನೆ ಶಕ್ತಿಯ ಬುಡ
ನಾನೇ ನೀನಾದ ಸ್ವಯಂವರ..

ಸಾಕು ಮಾಡಿಕೊ ದ್ವಂದ್ವ
ಅರ್ಧನಾರಿ ಪೂರ್ಣನಾರೀಶ್ವರ
ನಾಣ್ಯದೆರಡು ಮುಖ ಕಾಣೆ
ಮಿಕ್ಕೆಲ್ಲ ನಿಗೂಢ ಶಿಲ್ಪದಂತೆ ಕಲ್ಪಿತ..!

ನೀ ಕಂಡ ಬದಿ ನಿನ್ನದು
ಅವ ಕಂಡದ್ದು ಅವನದು
ಅರೆಬರೆ ಎರಡರ ನಡುವಿದ್ದೂ
ಅಸ್ಪಷ್ಟತೆ ಕಾಡುವ ಬದುಕೆ ಸಿದ್ಧ !!

– ನಾಗೇಶ ಮೈಸೂರು
15.10.2016

Avadhi photo click published

00623. ಹತ್ತು ಸಾವಿರ ಕ್ಲಿಕ್ಕು, ಪೋಸ್ಟು ಐನೂರಕ್ಕು ಮಿಕ್ಕು..


00623. ಹತ್ತು ಸಾವಿರ ಕ್ಲಿಕ್ಕು, ಪೋಸ್ಟು ಐನೂರಕ್ಕು ಮಿಕ್ಕು..
______________________________________________

ಇವತ್ತು ನನ್ನ ‘ಮನದಿಂಗಿತಗಳ ಸ್ವಗತ’ ಬ್ಲಾಗು ಪಿಸುಗುಟ್ಟಿತು – ಹತ್ತು ಸಾವಿರ ಕ್ಲಿಕ್ಕು ಎಂದು. ಸರಿಸುಮಾರು ನಾಲ್ಕು ಸಾವಿರ ಅತಿಥಿಗಳಿಗೆ ಹೊಂದಿಸಿದರೆ ಪ್ರತಿಯೊಬ್ಬರಿಗೆ ಸರಾಸರಿ ೨.೫ ಕ್ಲಿಕ್ಕುಗಳು. ಬರಿ ಅನಿಸಿದ್ದೆಲ್ಲ ಹಾಕುವ ಮನದ ಮೂಲೆಯ ತೊಟ್ಟಿಗೊಂದು ಮೂರ್ತರೂಪ ಎಂದುಕೊಂಡು ಬ್ಲಾಗ್ ಆರಂಭಿಸಿದ ನನ್ನ ಮಟ್ಟಿಗೆ ಇದೊಂದು ಮೊದಲ ಮೈಲಿಗಲ್ಲು. ನನ್ನಂತಹ ಸಾಧಾರಣ ಬ್ಲಾಗಿನ ಬರಹಗಾರನಿಗೆ ನೀವೆಲ್ಲ ಓದುಗರಿತ್ತ ಅಪಾರ ಗೌರವದ ಕುರುಹು. ಅದಕ್ಕೆ ಧನ್ಯವಾದ ಮತ್ತು ಕೃತಜ್ಞತೆಗಳು.   

ಆದರೆ ಈ ಹತ್ತು ಸಾವಿರ ನಿಜಕ್ಕೂ ತುಂಬ ಸಣ್ಣ ಸಾಧನೆ. ನಾನೇ ಕಂಡಹಾಗೆ ಕನ್ನಡದಲ್ಲೇ ಲಕ್ಷಾಂತರ ಕ್ಲಿಕ್ಕುಗಳನ್ನು ದಾಟಿದ ಎಷ್ಟೊ ಬ್ಲಾಗುಗಳನ್ನು ನೋಡುವ ಭಾಗ್ಯ ನನಗೆ ಸಿಕ್ಕಿದೆ. ಆ ಮಟ್ಟಕ್ಕೆ ಏರುವ ತಾಕತ್ತು ನನ್ನ ಬ್ಲಾಗಿಗಿಲ್ಲ ಅನಿಸುತ್ತಿದೆ (ನಿನ್ನಂತೆ ನಾನಾಗಲಾರೆ ಏನು ಮಾಡಲಿ ಹನುಮ – ರಾಜ್ ಹಾಡು ನೆನಪಾಗುತ್ತಿದೆ 😊). ಹಾಗೆ ಅಂದುಕೊಳ್ಳುತ್ತ ಕೂತ ಹೊತ್ತಲ್ಲಿ ಮನಸಿಗೆ ಬಂದ ಮಾತುಗಳಿಗೆ ಹಾಯ್ಕು ಧಾಟಿಯಲ್ಲಿ ಲಘು ಹಾಸ್ಯದ ಲೇಪನದಲ್ಲಿ ಸಾಲು ಕಟ್ಟತೊಡಗಿದೆ – ‘ಇರುವುದೆಲ್ಲವ ಬಿಟ್ಟು ಇಲ್ಲದುದರ ಕಡೆ ತುಡಿಯುವುದು ಬೇಡ’ ಎನ್ನುವ ಮಾತನ್ನು ನೆನಪಿಸಿಕೊಳ್ಳುತ್ತಲೇ, ಅದನ್ನು ಅಧಿಗಮಿಸುವ ಪದ- ಅಚಾತುರ್ಯ ನಡೆಸುತ್ತ.. ಆ ಲಹರಿ ಈ ಕೆಳಗೆ 😊

(೦೧)
ಮುಗ್ಗುರಿಸುತ್ತ
ಮನದಿಂಗಿತ ಸ್ವಗತ
ಹತ್ತು ಸಾವಿರ 😁

(೦೨)
ಐನೂರು ಪೋಸ್ಟು
ನೂರಿಪ್ಪತ್ತು ಪುಟಕು
ಶುಲ್ಕ ಸಮಯ 😊

(೦೩)
ಸಾವಿರ ಲಕ್ಷ
ಸಾಗರದಾಚೆ ಸಖ್ಯ
ಹೇಗಪ್ಪ ಸಾಧ್ಯ ? 😟

(೦೪)
ಮೊಟ್ಟ ಮೊದಲು
ಸಾವಿರ ದಾಟಿ ನೋಟ
ಬೋನಸ್ ಮಾಸ 👍

(೦೫)
ಸ್ವಗತ ಬ್ಲಾಗು
ಕಂಪನಿ ವಹಿವಾಟು
ಮಾಡಿ ದುಪ್ಪಟ್ಟು 😀

(೦೬)
ಬಂದರು ಖುಷಿ;
ಇರದೇ ಹೋದರಲ್ಲ
ಖೇದ ಸಂಗತಿ 😭

(೦೭)
ಮಾರ್ಕೆಟಿಂಗಿಗೆ
ತಾಕತ್ತಿಲ್ಲ ಬ್ಲಾಗಿಗೆ
ಬಾಯಲೆ ಮಾಡಿ 😂

(೦೮)
ಒಳ್ಳೊಳ್ಳೆ ಎಳ್ಳು
ಸಿಗುತ್ತೆ ಸೋಸೆ ಜೊಳ್ಳು
ಆಗೋಲ್ಲ ಮೋಸ 😎

(೦೯)
ಅಟ್ಟ ಏರಾಯ್ತು
ಏರಿಸಿ ಬೆಟ್ಟಕೆ ಮತ್ತೆ
ತಡವಿನ್ನೇಕೆ ? 🤓

(೧೦)
ಮರೆಯೊ ಮುನ್ನ
ಕೈ ಹಿಡಿದಿರಿ ನನ್ನ
ನಮ್ರ ನಮನ 🙏👍

-ನಾಗೇಶ ಮೈಸೂರು

 

  

00614. ಮನದಿಂಗಿತಕೆ ಮೂರಾದ ಹೊತ್ತಲಿ..!


00614.  ಮನದಿಂಗಿತಕೆ ಮೂರಾದ ಹೊತ್ತಲಿ..!
______________________________

   
ಇವತ್ತು ‘ಮನದಿಂಗಿತಗಳ ಸ್ವಗತ’ ಮೊಟ್ಟ ಮೊದಲ ಬಾರಿಗೆ ನನ್ನ ಜತೆ ಮಾತಾಡಿತ್ತು – ‘ಕಂಗ್ರಾಟ್ಸ್, ನಾನೀಗ ಮೂರು ತುಂಬಿದ ಮಗು’ ಅಂತ.

ಮೊದಲೆರಡು ವರ್ಷ ಯಾಕೋ ನೆನೆಸಿಕೊಂಡ ಹಾಗೆ ಕಾಣಲಿಲ್ಲ. ಹೀಗಾಗಿ ಈ ಬಾರಿ ಅಚ್ಚರಿಯ ಜತೆ ‘ಹೌದಲ್ಲ’ ಎನ್ನುವ ಭಾವ. ೨೦೧೩ನೆ ಮಾರ್ಚಿಯ ತಿಂಗಳ ೨೩ರಂದು ಮನದಿಂಗಿತಗಳ ಸ್ವಗತದ ಬಾಗಿಲು ತೆಗೆದ ಆ ದಿನ ಇನ್ನೂ ಚೆನ್ನಾಗಿ ನೆನಪಿದೆ (ಅವತ್ತು ಈ ದಿನವೇ ಭಗತ್ ಸಿಂಗ್ ರಾಜಗುರು ಸುಖದೇವರನ್ನು ನೇಣಿಗೇರಿಸಿದ ದಿನ ಅಂತ ಗೊತ್ತಿರಲಿಲ್ಲ.. ಈಗ ಎಂಥಾ ಕಾಕಾತಾಳೀಯತೆ ಅನಿಸುತ್ತಿದೆ).

ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ – ಒಂದೆರಡು ದಿನಗಳ ಹಿಂದಷ್ಟೆ ಹೊಸದೊಂದು ಐಪ್ಯಾಡು ತಂದು ಅದರಲ್ಲೊಂದು ಕನ್ನಡ ಟೈಪಿಸುವ ‘ಆಪ್’ ಇದ್ದದ್ದು ಕಂಡು ಖುಷಿಯಿಂದ ಅದನ್ನು ಡೌನ್ಲೋಡ್ ಮಾಡಿಟ್ಟುಕೊಂಡಿದ್ದೆ.. ಆಗ ಪತ್ರ ಗಿತ್ರ ಗೀಚುವ ಉದ್ದೇಶವಿತ್ತೆ ಹೊರತು ಕಥೆ ಕವನ ಅಂತೆಲ್ಲ ಏನೂ ಇರಲಿಲ್ಲ. ಆವತ್ತು ಮನೆಯಲ್ಲಿ ಒಬ್ಬನೇ ಬೇರೆ ಇದ್ದೆ.. ತುಂಬಾ ಬೇಸತ್ತು ಕೂತು ಹೋಗಿದ್ದ ಕ್ಷಣ. ಆಫೀಸಿನಲ್ಲೂ ಏನೇನೊ ಜಂಜಾಟ, ಮನೆಯಲ್ಲೂ ಮತ್ತಿನ್ನೇನೇನೊ ಹೊಯ್ದಾಟ.. ರಾತ್ರಿಯ ಊಟ ಮಾಡಲೂ ಬೇಸರವಾಗಿ ಸುಮ್ಮನೆ ಹಾಗೆ ಕೂತಿದ್ದೆ..

ಆಗ ಆಪ್ತ ಗೆಳೆಯನ ಮೆಯಿಲ್ ಬಂದಿತ್ತು.. ನನಗೂ ಗೊತ್ತಿದ್ದ ಅವನ ಕಸಿನ್ ಒಬ್ಬ – ತೀರಾ ಎಳೆಯ ಪ್ರಾಯದವನು, ತೀರಿಕೊಂಡ ಎಂಬ ಸುದ್ದಿ…

ಆ ಗಳಿಗೆಯ ಆ ಮನಸ್ಥಿತಿಯಲ್ಲಿ ಅದೇನಾಯ್ತೋ , ಏನೋ.. ಎಲ್ಲೆಲ್ಲೊ ಹೆಪ್ಪುಗಟ್ಟಿದ್ದ, ಜಡ್ಡುಗಟ್ಟಿದ್ದ ಯಾವಾವುದೋ ಭಾವನೆಗಳ ಒಡ್ಡನ್ನು ಯಾರೋ ಒದ್ದು ಕೆಡವಿದಂತೆ ಒಳಗೆಲ್ಲ ಏನೋ ಹೇಳಲಾಗದ ನೋವು, ಹತಾಶೆ, ದಿಗ್ಭ್ರಾಂತಿ, ನಿಂತಲ್ಲಿ ನಿಲ್ಲಲಾಗದ ಕೂರಲಾಗದ ಚಡಪಡಿಕೆ.. ಇನ್ನು ತಡೆಯಲೇ ಆಗದು ಅನಿಸಿದಾಗ ಕಣ್ಣಿಗೆ ಬಿತ್ತು ಐಪ್ಯಾಡು – ಜತೆಗೆ ಇಪ್ಪತ್ತು ವರ್ಷಗಳಿಂದ ಹಳಿ ತಪ್ಪಿದಂತೆ ಮರೆಯಾಗಿಹೋಗಿದ್ದ ಬರೆಯಬೇಕೆನ್ನುವ ತುಡಿತ..

ಆ ಗಳಿಗೆಯಲ್ಲಿ ದೆವ್ವ ಹೊಕ್ಕವನಂತೆ, ಐಪ್ಯಾಡಿನಲ್ಲಿ ಆ ಸಾವಿನ ಹಿನ್ನಲೆಯಲ್ಲಿ ತೋಚಿದ, ಚಾಚಿದ, ಹೊರಸೂಸಿದ ಭಾವಗಳನ್ನೆಲ್ಲ ಟೈಪಿಸತೊಡಗಿದೆ – ‘ಸಾವೆಂಬ ಸಕಲೇಶಪುರ’ ಅನ್ನುವ ಕವನದ ಹೆಸರಲ್ಲಿ.. ಅದೆಷ್ಟು ಹೊತ್ತು ಟೈಪಿಸಿದೇನೊ ಗೊತ್ತಿಲ್ಲ, ಏನು ಬರೆದೆ ಎನುವುದರ ಅರಿವೂ ಇರದ ‘ಟ್ರಾನ್ಸ್’ನಲ್ಲಿದ್ದಂತಹ ಸ್ಥಿತಿ.. ಸುಮಾರು ಉದ್ದದ ಸುಧೀರ್ಘ ಕವನ – ನೀರು ಹರಿದಷ್ಟೆ ಸರಾಗವಾಗಿ ಹರಿಯುತ್ತಿತ್ತು ಅವಿರತವಾಗಿ.. ಇನ್ನೇನು ಎರಡೇ ಸಾಲಲ್ಲಿ ಮುಗಿಯಲಿದೆ ಎನ್ನುವಾಗ ಅನಿರೀಕ್ಷಿತವಾಗಿ ಅದು ಸಂಭವಿಸಿತು..!

ಆಗಿನ್ನೂ ಈ ಆಪ್ಗಳಲ್ಲಿ ಬರೆದು ಅಷ್ಟು ಅಭ್ಯಾಸವಿರಲಿಲ್ಲ – ಹೆಚ್ಚುಕಮ್ಮಿ ಅದೇ ಮೊದಲ ಬಾರಿ.. ಹಾಗೆ ಟೈಪಿಸುವಾಗ ಬಹುಷಃ ಅಲ್ಲಿ ಗರಿಷ್ಠ ಪದಗಳ ಮಿತಿಯಿತ್ತೋ ಅಥವಾ ಅದಾವುದಾದರು ತಂತ್ರಾಂಶದ ದೋಷವಿತ್ತೊ ಅರಿಯೆ – ಇದ್ದಕ್ಕಿದ್ದಂತೆ ನಾನು ಬರೆದಿದ್ದೆಲ್ಲಾ ಒಂದೇ ಏಟಿಗೆ ಪರದೆಯಿಂದ ಯಾರೋ ಬಂದು ಅಳಿಸಿದಂತೆ ಮಂಗಮಾಯಾ! ಅಂಡೂ ಮಾಡಿದರು ಇಲ್ಲಾ ಏನು ಮಾಡಿದರೂ ಇಲ್ಲ.. ಹೆಚ್ಚುಕಡಿಮೆ ಎರಡು ಗಂಟೆಯ ಫಸಲೆಲ್ಲ ಹೇಳದೆ ಕೇಳದೆ ಕಣ್ಣೆದುರಲ್ಲೆ ಕರಗಿ ಇಂಗಿಹೋಗಿತ್ತು.. ಏನು ಮಾಡಿದರು ರಿಕವರ್ ಆಗಲೇ ಇಲ್ಲಾ… ಅದು ಎಷ್ಟು ದೊಡ್ಡದೆಂದರೆ ಏನು ಬರೆದಿದ್ದೆನೆಂದು ಕೂಡ ನೆನಪಿನಲ್ಲಿರಲಿಲ್ಲ.. ಏನು ಮಾಡುವುದೊ ತೋಚಲಿಲ್ಲ.. ಅಷ್ಟೊಂದು ನಿರಾಶೆ, ಹತಾಶೆ, ಬೇಸರ ಯಾವತ್ತು ಆಗಿರಲಿಲ್ಲ.. ಐಪ್ಯಾಡ್ ಎಸೆದು ಆ ರಾತ್ರಿಯೆಲ್ಲ ನಿದ್ದೆಯಿಲ್ಲದೆಯೇ ಕಳೆದಿದ್ದೆ.. ಆವತ್ತು ಕವನವೊಂದಕ್ಕಾಗಿ ಕಣ್ಣೀರು ಹಾಕಿದ್ದೋ, ಅದನ್ನು ಬರೆಸಿದ ಸಾವಿಗೆ ಅತ್ತಿದ್ದೋ ನನಗೆ ಇವತ್ತಿಗೂ ಗೊತ್ತಾಗಿಲ್ಲ..

ಅದಾದ ಎರಡು ದಿನದ ನಂತರ – ಮಾರ್ಚಿ ಇಪ್ಪತ್ಮೂರರಂದು ಮನಸು ಸ್ವಲ್ಪ ತಹಬಂದಿಗೆ ಬಂದಿತ್ತು. ಕಳೆದುಕೊಂಡ ನಷ್ಟ ತುಂಬಲಸಾಧ್ಯವೆಂದರಿವಾಗಿಯೊ ಏನೋ ವಿಧಿಯಿಲ್ಲದೇ ಹೊಂದಿಕೊಳ್ಳುತ್ತಿದ್ದ ಮನಕ್ಕೆ ಮತ್ತೆ ಕಣ್ಣಿಗೆ ಬಿತ್ತು ಐಪ್ಯಾಡು. ಹಾಗೆ ಕೈಗೆತ್ತಿಕೊಂಡು ಕೂತಾಗ ಅಂದು ಬರೆದ ಕೆಲವು ಸಾಲುಗಳು ತುಸು ಏರುಪೇರಾಗಿ ಮತ್ತೆ ಮನದಲ್ಲಿ ಮೂಡತೊಡಗಿದವು. ಸರಿ, ಸುಮ್ಮನೆ ಅನ್ಯಮನಸ್ಕತೆಯಲ್ಲಿ, ಉದ್ದೇಶರಹಿತ ಮನಸ್ಥಿತಿಯಲ್ಲೇ ಗ್ರಹಿಕೆಗೆ ನಿಲುಕಿದಷ್ಟನ್ನು ನೆನಪಿನಿಂದ, ಭಾವದಿಂದ ಹೆಕ್ಕಿ ಹೆಕ್ಕಿ ಬರೆಯತೊಡಗಿದೆ.. ನೋಡನೋಡುತ್ತಿದ್ದಂತೆ ಆ ಪದ್ಯದ ಭಾವದಲ್ಲೇ ಮೂಡಿದ ಹೊಸ ಕವನ ರಚಿತವಾಗಿ ಹೋಗಿತ್ತು. ಈ ಬಾರಿ ಎರಡೆರಡು ಸಾಲಿಗೊಮ್ಮೆ ಕಾಪಿ ಮಾಡಿಕೊಳ್ಳುತ್ತ ಎಚ್ಚರವಹಿಸಿದ್ದರೂ ಕ್ರಾಶ್ ಏನೂ ಆಗಲಿಲ್ಲ – ಯಾಕೆಂದರೆ ಈ ಬಾರಿ ಬರೆದ ಕವನ ಮೊದಲಿನ ಅರ್ಧದಷ್ಟೂ ಆಗಿರಲಿಲ್ಲ.. ಆಗಲೇ ವರ್ಡ್ಪ್ರೆಸ್ಸ್ ಬ್ಲಾಗಿನ ಮಾಹಿತಿ ಸಿಕ್ಕಿತ್ತಾಗಿ ‘ಮನದಿಂಗಿತಗಳ ಸ್ವಗತ’ವನ್ನು ಸೃಜಿಸಿ ಈ ಕವನವನ್ನು ಅಲ್ಲಿ ಡ್ರಾಫ್ಟ್ ರೂಪದಲ್ಲಿ ಸೇವ್ ಮಾಡಿಟ್ಟುಕೊಂಡೆ. ಮುಂದೊಮ್ಮೆ ಅದನ್ನೇ ತಿದ್ದಿ ಪ್ರಕಟಿಸಿದ್ದೆ ಕೂಡ.

ಹೀಗಾಗಿ ಜನಿಸಿದ ಕೂಸಲ್ಲೀಗ ಆರುನೂರಕ್ಕು ಹೆಚ್ಚು ಬರಹಗಳ ಜಾತ್ರೆ. ಕೂತಾಗ, ನಿಂತಾಗ, ಬಸ್ಸಿನಲ್ಲಿ, ಬಸ್ಟಾಪಿನಲ್ಲಿ, ಮಳೆ ನಿಲ್ಲಲೆಂದು ನೆರಳಡಿ ನಿಂತ ಹೊತ್ತಲ್ಲಿ ಹೀಗೆ ಸಿಕ್ಕ ಅವಕಾಶದಲೆಲ್ಲ ಕನವರಿಸಿ ಜನಿಸಿದ ಸಾಲುಗಳು ಏನೆಲ್ಲಾ ಆಕಾರ ತಾಳಿ ಇಲ್ಲಿ ಅನಾವರಣಗೊಂಡಿವೆ. ಎಳ್ಳು ಜೊಳ್ಳು ಎಲ್ಲವನ್ನು ಆಪ್ಯಾಯತೆಯಿಂದ ಆಲಂಗಿಸಿ ನಿರಂತರವಾಗಿ ಪ್ರೋತ್ಸಾಹಿಸಿದ ಓದುಗರು, ಬ್ಲಾಗರು, ಬ್ಲಾಗಿಣಿಯರ ದೊಡ್ಡ ದಂಡೆ ಇದೆ.. ಅವರೆಲ್ಲರಿಗೂ ಹೇಗೆ ತಾನೇ ಕೃತಜ್ಞತೆ ಹೇಳಲಿ – ಇಲ್ಲೊಂದು ಹೃದಯಪೂರ್ವಕ ನಮನ ಹೇಳುವುದರ ಹೊರತಾಗಿ ? ಬಾಯಿ ಕಟ್ಟಿದಂತಾಗಿ ಹೋಗಿದೆ ನನ್ನ ಪದಾಡಂಬರ ಜಾತ್ರೆಯನ್ನು ಅವರೆಲ್ಲ, ನೀವೆಲ್ಲಾ ಪ್ರೋತ್ಸಾಹಿಸಿದ ಪರಿಗೆ..

ಹೀಗೆ ಇರಲಿ ನಿಮ್ಮ ಆದರ, ಪ್ರೀತಿ. 

ಅಂದು ಕಾಡಿದ ಆ ಕವನ ಇಲ್ಲಿ ಮತ್ತೆ ಸೇರಿಸುತ್ತಿದ್ದೇನೆ – ನೆನಪಿನ ಕುರುಹಾಗಿ..

ಸಾವೆಂಬ ಸಕಲೇಶಪುರದಲ್ಲಿ….!
_________________________

ಹೊತ್ತು ಕಳೆದದ್ದೇ ತಿಳಿಯಲಿಲ್ಲ
ಪ್ರಾಯದಿಂದಭಿಪ್ರಾಯದತನಕ
ಇನ್ನೂ ಬಾಲ ತಾರುಣ್ಯವೆ
ಎಂದು ಮನ ಹಪಹಪಿಸುತಿದ್ದರೂ
ಬೆಳ್ಳಿ ರೇಖೆಯಂತೆ
ಅಲ್ಲೊಂದು ಇಲ್ಲೊಂದು
ಕಾಣಿಸೆಬಿಟ್ಟಿತಲ್ಲ
ನೊರೆಗೂದಲೂ !
ನಲವತ್ತಕ್ಕೆ ಮತ್ತೈದುದುರಿ
ಹಣೆ ಸುಕ್ಕುಗಳು ಒಳಗೊಳಗೇ ಮುದುರಿ
ಕೆನ್ನೆ ಒಳಗೆಳೆದು
ಕನ್ನಡಿಯೇ ಅದುರಿ
ಕನ್ನಡಕದೊಳಗೆ ಅವಿತುಕೊಂಡಾಗ
ಶೀತಲ ನೆನಪು ಪಿಸುಗುಟ್ಟಿತು
ಕಳೆದಾಯ್ತು ಹರೆಯ, ಮುಟ್ಟಿದೆಯ ಗುರಿಯ?

ಥಟ್ಟನೆ ಹಿಂತಿರುಗಿ ನೋಡಿದರೆ ಕೆಳಗೆ
ಹೆಜ್ಜೆ ಮೊದಲ ಮೆಟ್ಟಿಲ ಒಳಗೊಳಗೇ
ಮುಂದೆ ಮತ್ತಿನ್ನೂರು ಹೊಚ್ಚ ಹೊಸ ಮಳಿಗೆ!
ಟುಸ್ಸ್ ಎಂದು ಬತ್ತಿ ಉತ್ಸಾಹವೆಲ್ಲ
ಕುಗ್ಗಿ ಕೊನರಾಡಿದರೂ
ಬಂಡನಂತೆ ಉತ್ತರ ಪೌರುಷದಲ್ಲಿ
ನುಗ್ಗಿ ಹೆಣಗಾಡುವ
ಅನಿವಾರ್ಯಕ್ಕೆ ಅಚ್ಚರಿಗೊಂಡು
ಅಕಟಕಟ!
ನಾನು ಅನಂತನೆಂಬ
ಮೂರ್ಖ ಭ್ರಮೆಯಲ್ಲಿ
ಮುಳುಗೇಳುತಿದ್ದಂತೆ
ಸಕಲೇಶಪುರದಿಂದ ಬಂತವನ ಸಾವಿನ ಸುದ್ದಿ …
ಛೆ! ಏನಾಗಿತ್ತವನ ವಯಸ್ಸು
ಮಿಕ್ಕಿರಲಿಕ್ಕಿಲ್ಲ ಸಹ ಐವತ್ತು?

ಅರೆ ಗಂಟೆ, ಅರ್ಧ ದಿನ ಕಾಡಿತ್ತು ನ’ಮನ
ಏನಾಯಿತಾಮೇಲೆ?
ದಿನದಿನದಂತೆ ಗಮನ
ಜಗಕೆ ಹೊಸದೇನಲ್ಲ ಸಾವಿನ ಸುದ್ದಿ
ಸೋಜಿಗವು
ನಮಗನ್ವಯಿಸದೆಂಬ ಮೊಂಡ ಬುದ್ದಿ!
ನಮ್ಮೊಳಡಗಿದೆ ನಿರಂತರ ಭಯ,ಭೀತಿ
ಆದರೂ ಸದ್ಯಕ್ಕಲ್ಲ
ಮುಂದೆಂದೋ ಎಂಬ ಹುಸಿ ಭ್ರಾಂತಿ!
ಕಳೆದಂತೆ ಅರೆ ಆಯಸ್ಸು
ಉಳಿದಿದೆಯ ನಿಜಕ್ಕೂ ಅರ್ಧ?
ಅರ್ಧದಲ್ಲರ್ಧದಲ್ಲರ್ಧದಲ್ಲರ್ಧ?
ಬಲ್ಲವರಾರು? ಸಲ್ಲುವವರಾರು?
ಸಾವೆಂಬ ಸಕಲೇಶಪುರ ಸಮರ
ಗೆಲ್ಲುವವರಾರು?
ಅರಿತು ಮೆಲ್ಲುವವರಾರು?

– ನಾಗೇಶ ಮೈಸೂರು

(picture source: http://tanamatales.com/wp-content/uploads/2014/01/Third-anniversary.jpg)

blog Link:
00060. ಸಾವೆಂಬ ಸಕಲೇಶಪುರದಲ್ಲಿ….! – ಮನದಿಂಗಿತಗಳ ಸ್ವಗತ

00060. ಸಾವೆಂಬ ಸಕಲೇಶಪುರದಲ್ಲಿ….!

– ನಾಗೇಶ ಮೈಸೂರು

 

00505. ವಿಷಾದಗಳು


00505. ವಿಷಾದಗಳು
_________________

ವಿಷಾದಗಳ ಹಲವು ವಿಶ್ವ ರೂಪಗಳಲ್ಲಿ, ಕೆಲವು ವಿಷಾದವ್ಹುಟ್ಟಿಸಿದ ಪ್ರತಿಕ್ರಿಯೆಗಳು ಮತ್ತೊಂದು ತರದ ವಿಷಾದವಾಗಿಯೆ ಹೊರಹೊಮ್ಮುವ ವ್ಯಂಗ್ಯ, ಈ ಸಾಲುಗಳಲ್ಲಿ ಅಡಕ. ಹೊರಬರುವ ಯತ್ನವೆ ಹೋರಾಟದ ದನಿಯಾದರು ಅದನ್ನಡಗಿಸುವ ವಾಸ್ತವಗಳ ಗುದ್ದಿನ ಶಕ್ತಿ, ಈ ಕವಿತೆಯ ಮತ್ತೊಂದು ಭಾವ. ವಿಷಾದಗಳನೆ ಬಿತ್ತಿ ವಿಷಾದಗಳನೆ ಬೆಳೆವ ವಿಷಾದವೆ ಇದರ ಸಂಗ್ರಹ ಸಾರ.

  
(Picture source wikipedia : https://en.m.wikipedia.org/wiki/File:Maud-Muller-Brown.jpeg)

ನಿನ್ನ ನೆನಪಲ್ಲಿ ಅರಳುತ್ತವೆ
ನೂರೆಂಟು ಕವನ, ಚಿತ್ರ …
ಅಂಚೆಯಲ್ಲಿ
ಸಂಪಾದಕರ ವಿಷಾದ ಪತ್ರ ||

ಮುಗ್ದ ನಗುವಲ್ಲಿ ಆಸೆಯ
ಚಿಮ್ಮಿಸಿದ್ದು ಇತಿಹಾಸ..
ನಿನ್ನ ಪ್ರತಿಕ್ರಿಯೆ –
ಅರ್ಥವಾಗದ ಮಂದಹಾಸ ||

ಅಪ್ಪಿ ಬಿಸಿಯಾಗಲೆ ಬಯಸಿ
ಪಡೆದದ್ದು ನಿನ್ನ ಸಂಗ..
ಆಗಿದ್ದು ಬೆಂಕಿ ಮುಟ್ಟಿದ
ಸುಟ್ಟ ರೆಕ್ಕೆಯ ಪತಂಗ ||

ಕನಸ ಕಣ್ಣಲ್ಲಿ ನೋವ
ಮರೆಸಿದ್ದು ನಿನ್ನ ಪ್ರೀತಿ ;
ಯಾರ ಬಯಕೆಗೋ ಬಿರಿದ
ಹೂವಾಗಿ ಬರಿಯ ಭ್ರಾಂತಿ…||

ಸಂಕ್ರಾಂತಿ ನೋವ ಮನದಿ
ಹಂಚಿದ್ದು ಹಚ್ಚ ಹಸಿರು..
ಆ ನೋವ ಬಿತ್ತಿ ದಿಗ್ಭ್ರಮೆಯ
ಬೆಳೆದಿದೆ ಕ್ಷೀಣ ಉಸಿರು…||

– ನಾಗೇಶ ಮೈಸೂರು

00449. ಇಣುಕಿ ನೋಡಲೊಮ್ಮೆ ಹಿಂದೆ..


00449. ಇಣುಕಿ ನೋಡಲೊಮ್ಮೆ ಹಿಂದೆ..
_______________________________

ನಾ ಬ್ಲಾಗ್ ಆರಂಭಿಸಿದ್ದು ಡಿಸೆಂಬರ್ 2012 ರಲ್ಲಿ. ಆದರೆ ನಿಜಕ್ಕು ಬರೆಯಲು ಆರಂಭಿಸಿದ್ದು ಮಾರ್ಚ್ 2013 ರಿಂದ. ಹೊಸ ವರ್ಷದ ಹೊತ್ತಿನಲ್ಲಿ ಬಂದ ಹಾದಿಯ ಅವಲೋಕನ ಮಾಡುತ್ತ ಬಂದಾಗ ಇಷ್ಟು ದೂರ ನಡೆದು ಬಂದಿದ್ದೆ ಅಚ್ಚರಿಯೆನಿಸಿತು. ಅಚ್ಚರಿ ನಡಿಗೆಯದಲ್ಲ ಆದರೆ ಅದು ಮಧ್ಯದಲ್ಲೆ ನಿಲ್ಲದೆ ಮುಂದುವರೆಯುತ್ತಾ ಬಂದಿದ್ದು. ಆರಂಭಿಸಿದಾಗ ಇದ್ದ ಆಶಯವೆ ಹೆಚ್ಚು ಕಡಿಮೆ ಈಗಲೂ ಇರುವುದಾದರು ಅದನ್ನು ಮೊದಲ ಬ್ಲಾಗಿನ ರೂಪದಲ್ಲಿ ಉಚ್ಚರಿಸಿದ ಬಗೆಯನ್ನು ಓದಲು ಕುತೂಹಲವೆನಿಸಿ ಮತ್ತೆ ತೆರೆದು ನೋಡಿದೆ ಆ ಪುಟವನ್ನು.

ಆ ಮೆಲುಕನ್ನು ಜತೆಗೆ ಹಂಚಿಕೊಳ್ಳುವ ಸಲುವಾಗಿ ಅದನ್ನೆ ಇಲ್ಲಿ ಮತ್ತೆ ನೀಡುತ್ತಿದ್ದೇನೆ – ಬಹುತೇಕ ಗೆಳೆಯರು ಅದನ್ನು ನೋಡಿರಬಹುದಾದ ಸಾಧ್ಯತೆ ಕಡಿಮೆಯಿರುವ ಕಾರಣ 🙂

– ನಾಗೇಶ ಮೈಸೂರು
_______________________________________________________________________

00001 – ಮೊದಲ ಬ್ಲಾಗ್ – ಮನದಿಂಗಿತಗಳ ಸ್ವಗತ!

ಬ್ಲಾಗಿನ ಮೊದಲಂಕಣ – ಮನದಿಂಗಿತಗಳ ಸ್ವಗತ!

ಮನದಲಿರುವ ತುಡಿತ, ಮಿಡಿತ, ಕಡಿತಗಳೆಲ್ಲ ಹೊರಬರಲು ಬರಹವ್ಹೇಗೆ ದಾರಿಯಾಗುವುದೊ, ಹಾಗೆ ಅದನ್ನು ಹೊರ ಜಗತ್ತಿಗೆ ಮುಟ್ಟಿಸಲು ಅಷ್ಟೆ ಪರಿಣಾಮಕಾರಿ ಸಾಧನಗಳು ಅತ್ಯಗತ್ಯ. ಹಿಂದೆ ಮತ್ತು ಈಗಲೂ ಪತ್ರಿಕೆಗಳು, ಪುಸ್ತಕಗಳು ಆ ಕಾರ್ಯವನ್ನು ಚೊಕ್ಕಟವಾಗಿ ನಿರ್ವಹಿಸುತ್ತಾ ಬಂದಿವೆ. ಅದರ ಹೊಸ ಅಯಾಮವಾಗಿ ತೆರೆದುಕೊಂಡ ತಾಂತ್ರಿಕತೆಯ ಅವಿಷ್ಕಾರಗಳು, ಮಾಹಿತಿ ಮತ್ತು ಸಂವಹನ ಜಗದಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಿ, ಜನಮನಗಣಗಳು ಸಂವಾದಿಸುವ ವಿಧಾನದಲ್ಲೆ ಮೂಲಭೂತ ಬದಲಾವಣೆ ತರುವತ್ತ ದಾಪುಗಾಲಿಕ್ಕುತ್ತಿವೆ. ಯಾರು ಇದರಿಂದ ಹೊರತಾಗುತ್ತಾರೊ ಅವರೆ ಈ ಬದಲಾವಣೆಯ ಕ್ರಾಂತಿಯಲ್ಲಿ ಪಾಲುದಾರರಾಗುವ ಸುವರ್ಣಾವಕಾಶದಿಂದ ವಂಚಿತರಾಗಬೇಕಾಗುತ್ತದೆ. ಬದಲಾಗಿ ಇದನ್ನಪ್ಪಿದವರಿಗೆ ಹೊಸ ಮಾಧ್ಯಮ, ದಾರಿಗಳು ಗೋಚರವಾಗಿ ಹೊಸತಿನ ಹೊಸ ಜಗತ್ತೆ ತೆರೆದುಕೊಳ್ಳಬಹುದು.

ಅಂಥ ಸಮೂಹ ಸಂವಹನದ ಮಾಧ್ಯಮವಾಗಿ ತೆರೆದುಕೊಂಡ ನೂರಾರು ಬಾಗಿಲುಗಳಲ್ಲಿ ಒಂದು – ಈ ಬ್ಲಾಗ್ ಅಂಕಣಗಳು. ಸೈದ್ದಾಂತಿಕವಾಗಿ ಇದರ ಆಳಗಲ ಅಪರಿಮಿತ – ಪ್ರತಿಯೊಬ್ಬನೂ ಪ್ರತಿಯೊಬ್ಬನನ್ನು ಮುಟ್ಟಬಲ್ಲ ಸಾಮರ್ಥ್ಯವನ್ನೊದಗಿಸಿಕೊಡಬಲ್ಲ ದೈತ್ಯ. ದೇಶ, ಕಾಲ, ಅವಕಾಶಗಳ ಪರಿಮಿತಿ ಎಲ್ಲೆ ಮೀರಿಸಿ ಎಲ್ಲೆಡೆಗು ತಲುಪಿಸಬಲ್ಲ ಜಾದುಗಾರ. ಅಂತೆಯೆ, ಪ್ರತಿಯೊಬ್ಬನಿಗೂ ತಲುಪಿದ್ದನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ, ನಿರಾಕರಿಸುವ, ರವಾನಿಸುವ ಸ್ವೇಚ್ಚೆ – ಸ್ವಾತ್ಯಂತ್ರವನ್ನೂ ನೀಡುವ ಹರಿಕಾರ. ಏನಿಲ್ಲದಿದ್ದರು ಕೊನೆಗೆ, ಮನದಿಂಗಿತಗಳನ್ಹೊರಹಾಕಬಯಸುವ ಚಡಪಡಿಕೆಗೆ ದಾರಿ ಮಾಡಿ ಮನ ನಿರಾಳ ಮಾಡುವ ಮನೋವೈದ್ಯ. ಯಾರು ನೋಡಲಿ – ಬಿಡಲಿ, ಓದಲಿ – ಬಿಡಲಿ, ತನ್ನ ಎದೆಭಾರವಿಳಿಸುವ ಮಾಧ್ಯಮವಾಗಿದ್ದರೆ ಸಾಕೆನ್ನುವವನಿಗೂ ಇದು ಸೈ.

ಅಂಥ ಒಂದು ಬ್ಲಾಗಿನಂಕಣದ ನನ್ನ ಮೊದಲ ಬರಹವಿದು. ಏನಿದರ ಹಿಂದಿನುದ್ದೇಶ? ನಿಜಕ್ಕೂ ಯಾವುದೆ ಗುರಿ ಉದ್ದೇಶವಿರದೆ ಬರಿ ಮನದನಿಸಿಕೆಗಳಿಗೆ ಬರಹದ ರೂಪಕೊಡುವ ಕಿರು ಆಶಯದೊಂದಿಗೆ ಬರೆಯುತ್ತಿದ್ದೇನೆ. ಲಹರಿಯ ವಿಹರಿ ಹರಿದು ಸ್ವಾದಾಸ್ವಾದನೆಗರ್ಹ ಬರಹಗಳಾಗಿ ಹೊರಬಿದ್ದರೆ, ಓದಿದವರು ಖುಷಿಯಿಂದ ಮೆಚ್ಚಿದರೆ ಅಥವ ಟೀಕಿಸಿ ಲೋಪದೋಷಗಳ ಅರಿವಾಗಿಸಿದರೆ ಸಂತಸ. ಆ ಪ್ರಕ್ರಿಯೆಯಲ್ಲೆ ಬಹುಶಃ ನಾನೂ ಬೆಳೆದು ನನ್ನ ಸ್ತರವನ್ನೆತ್ತರದ ನೆಲೆಗೊಯ್ಯಲು ಸಾಧ್ಯವಾದೀತು.

ನೋಡುವ,ಇದು ಎಲ್ಲಿಯತನಕ ಸಾಗೀತೆಂದು!

ಮನದಿಂಗಿತ ಸ್ವಗತ
______________

ನಾನ್ಹುಡುಕೆ ನನ್ನಾಶಯ, ಬರೆಯಲೇನಿದೆ ವಿಷಯ
ತಲೆ ಕೆರೆದೂ ಖಾಲಿ, ಬರಿ ಬರೆವ ಖಯಾಲಿ!

ಡೈರಿ ಬರೆದಂತೆ ಬ್ಲಾಗು, ಬಯಲಿಗಿಟ್ಟ ಭಾವನೆಗು
ಬರುವರೆ ಗಿರಾಕಿ ಹುಡುಕಿ, ಸಂಶಯಗಳದೇ ಗಿರಕಿ!

ಮನ ಬಂದಂತೆ ಗೀಚಿ, ಮಾನದ್ದೆಲ್ಲ ಮರೆಮಾಚಿ
ಮನದೊಳಗೇ ಮೊಗಚಿ, ಕೊನೆಗೂ ಬೆಳಕ ದೋಚಿ!

ಬಿಟ್ಟೀತೆ ಛಿ!ಛಿ! ಭಾವ, ನಿರಾಳತೆಯಾಗಿ ಸಹಜ
ಉರುಳೀತೆ ನಿಲ್ಲದಲೆಗೆ, ನಾನೀಗೇರಿದಾ ಜಹಜ!

ಬ್ಲಾಗಂತೇ ಸೋಗಂತೆ, ಮನದಿಂಗಿತ ಸ್ವಗತ
ಕಾಳ್ಹಾಕಿಡಲ್ಹವಣಿಕೆಗೆ, ಮೆಚ್ಚು ಬೆಚ್ಚುತೆ ಗಣಿತ!

(ನಾಗೇಶ ಮೈಸೂರು)

00000. ಮನದಿಂಗಿತಗಳ ಸ್ವಗತ – ಪರಿವಿಡಿ ಮತ್ತು ಇತರೆ ವಿವರ


______________________________________________________________________________

00000. ಮನದಿಂಗಿತಗಳ ಸ್ವಗತ – ಪರಿವಿಡಿ ಮತ್ತು ಇತರೆ ವಿವರ
______________________________________________________________________________

00140. ಶುಮಾಕರನೆಂಬ ವೇಗದ ವಿಪರ್ಯಾಸ (ಕಿರು ಬರಹ + ಕವನ)

00138. ಎರಡು ದೋಣಿಯ ಮೇಲೆ ಕಾಲಿಟ್ಟ ಬದುಕು…(ಅನುಭವ + ಕಿರು ಪ್ರಬಂಧ)

00139. ಕಾಲದ ಗಡಿಯಾರ . (ಕಿರು ಬರಹ + ಕವನ)

00137. ಮಳೆಯಾಗವ್ಳೆ ಚೌಡಿ.. (ಕಿರು ಬರಹ + ಕವನ)

00136. ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ..(ಹೊಸದ ತಂದು ಹಳತ ಮರೆತುಬಿಡಿ..)

00135. ಸುದ್ದಿ ಮುಟ್ಟಿ ಮನ ಸೂತಕ…(ಕಳಚಿದ ಕೊಂಡಿ) (ಕಿರು ಬರಹ + ಕವನ)

00134. ದೇವರು ನಮಗೆ ಹಾಕಿದ ಟೋಪಿ (ಮಕ್ಕಳ ಪದ್ಯ) (ಕಿರು ಬರಹ + ಕವನ)

00133. ಚಿತ್ರಗುಪ್ತನಿಗೊಂದು ಸಲಹೆ (ಸರಿ ತಪ್ಪುಗಳ ಲೆಕ್ಕ) (ಕಿರು ಬರಹ + ಕವನ)

00132. ಅಂಗಜನ ಅಂಗದ ಸದ್ದು … (ಕಿರು ಬರಹ + ಕವನ)

00131. ಮಳೆಯಾಗುತ ಸಾಂಗತ್ಯ…. (ಕಿರು ಬರಹ + ಕವನ).

00130. ರಾಜರತ್ನಂ ನೆನಪಿಗೆ (ಕಿರು ಬರಹ + ಕವನ)

00129. ಪುಸ್ತಕ ವಿಮರ್ಶೆ: ಕಣ್ಣೀರಜ್ಜ ಮತ್ತು ಇತರ ಕಥೆಗಳು (ಪುಸ್ತಕ ವಿಮರ್ಶೆ)

00128. “ಬೀರ” ದೇವರು ಒಳಗಿಳಿದರೆ ಶುರು! (ಕಿರು ಬರಹ + ಕವನ)

00127. ಮುರಿದು ಬಿದ್ದ ಪಿಎಸ್ಪಿ (ಬರಹ + ಕವನ)

00126. ನೂರು ಶತಕಗಳ ಸರದಾರ (ಕಿರು ಬರಹ + ಕವನ)

00125. ಶ್ರೀ ಸತ್ಯನಾರಾಯಣ ವ್ರತದಿ ಪೂಜಾಂಗವಾಗಿಹ ಕಥನ (ಸರಳ ಕಾವ್ಯರೂಪದಲ್ಲಿ)

00124. ಈ ಕೆಮ್ಮೊಣಕೆಮ್ಮು… (ಕಿರು ಬರಹ + ಕವನ)

00123. ತುಳಸಿಗಿಂದು ಸಂಭ್ರಮ (ಕಿರು ಬರಹ + ಕವನ)

00122. ಈ ಸಂಪದ (ಕಿರು ಬರಹ + ಕವನ)

00121. ಮಂಗಳಗ್ರಹಕ್ಕೊಂದು ಗ್ರಹಕೊಂದು ಕಲ್ಲು (ಕಿರು ಬರಹ + ಕವನ)

00120. ಹುಡುಗಾಟ ಆಡಿದ್ರೆ, ಪಟಾಕಿ ಸುಮ್ನೆ ಬಿಡುತ್ತ? (ಕಿರು ಬರಹ + ಕವನ) (04.11.2013)

00119. ದೀಪೋತ್ಸಾಹಂ ಭುವಂಗತೆ.. (ಬರಹ + 2 ಕವನ) (02.11.2013)

00118. ರಾಜ್ಯೋತ್ಸವದ ಮನವಿ : ಪದಗಳಿಗಾಗುತ ದನಿ (ಕವನ + ಕಿರು ಬರಹ) (01.11.2013)

00117. ಗುಜರಾತಿನ ಮೋಡಿ, ಪಟೇಲರ ಹಾಡಿ (ಕವನ + ಕಿರು ಬರಹ)

00116. ‘ಐ’ಗಳ ಪುರಾಣ – 03 …’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00115. ಮಂಡೋದರಿ, ನಿನಗ್ಯಾಕಿ ಪರಿ ಕಿರಿಕಿರಿ..? (ಕವನ + ಬರಹ) (WIP)

00114. 00114. ಸಮಾನಾಂತರ ಚಿಂತನಾ ಚಿತ್ತ (ಕವನ + ಕಿರು ಬರಹ)

00113. ಹಾಸ್ಯದಲೆ ಕೊಲ್ಲೆ ಪೂರ್ತಿ, ಸಿದ್ದಹಸ್ತ ನರಸಿಂಹಮೂರ್ತಿ (ಕವನ + ಕಿರು ಬರಹ)

00112. ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ….(ಕವನ + ಕಿರು ಬರಹ)

00111. ಖೈರುದ್ದೀನನಿಗೆ ಹಬ್ಬದ ಶುಭಾಶಯ ಹೇಳಿ…(ಕವನ + ಕಿರು ಬರಹ)

00110. ಸಿಂಗಪುರ್ ಈಸ್ ಏ ಫೈನ್ ಸಿಟಿ…(ಕವನ + ಕಿರು ಬರಹ)

00109. ಆಯುಧ ಪೂಜೆ, ವಿಜಯದಶಮಿ (2) (ಕವನ + ಕಿರು ಬರಹ)

00108. ಮಹಾಲಯ ಅಮಾವಾಸೆ (ಮಹಾನವಮಿ) (01) (ಕವನ + ಕಿರು ಬರಹ)

00107. ಪಾತ್ರಗಳೆ ರಾಯರಿಗೆ ಸಲ್ಲಿಸಿವೆ ವಂದನ ! (ಕವನ + ಕಿರು ಬರಹ)

00106. …..ನಿನ್ನ ನೆನಸುತ್ತೇನೆ ! (ಕವನ + ಕಿರು ಬರಹ)

00105. ಯಾರದು ಮುಂದಿನ ಪಾಳಿ? (ಕವನ + ಕಿರು ಬರಹ)

00104. ಕೂರ್ಮಾವತಾರ : ಸಾಮಾನ್ಯ ಪ್ರೇಕ್ಷಕನೊಬ್ಬನ ಅನುಭವ, ವಿಮರ್ಶೆಯ ಒಳನೋಟ (ಅನುಭವ + ವಿಮರ್ಶೆ + ಬರಹ)

00103. ಯಾರ ಗೆಲುವು – ‘ಛಿಧ್ರವೋ, ಸಮಗ್ರವೋ? (ಕವನ + ಕಿರು ಬರಹ)

00102. ಪಂಚ್ಲೈನ್ ‘ಪಂಚೆ’ ಸಿದ್ರಾಮಣ್ಣ.. (ಕವನ + ಕಿರು ಬರಹ)

00101. ಯಾರು..? (ಚಿಣ್ಣರ ಹಾಡು) (ಕವನ + ಕಿರು ಬರಹ)

00100. ನಮ್ಮ ಬಾಲ್ಯದ ‘ಶರ್ಲಾಕ್ ಹೋಂ’ “ಎನ್. ನರಸಿಂಹಯ್ಯ” ನೆನಪಲಿ ..(ಕವನ + ಕಿರು ಬರಹ)

00099. ಕೆಂಪೇಗೌಡರೆ ಬನ್ನಿ ಹೀಗೆ ……(ಕವನ + ಕಿರು ಬರಹ)

00098. “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 02” (ಭಾಗ – 02) (ಹಾಸ್ಯಬರಹ + ಹರಟೆ + ವ್ಯಂಗ್ಯ)

00097. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 04” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00096. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 03” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00095. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 02” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00094. ‘ಐ’ಗಳ ಪುರಾಣ – 02 …’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00093. ಅಲ್ಲಿರೋದು ನಮ್ಮನೆ, ಇಲ್ಲಿರೋದು ಸುಮ್ಮನೆ…(ಕವನ + ಕಿರು ಬರಹ)

00092. ಗಜಾನನ ಗಜ-ಮೂಷಿಕಾಸುರ ಕಥೆ (ಕವನ + ಕಿರು ಬರಹ)

00091. ಹುಟ್ಟುಹಬ್ಬದ ನಮಸ್ತೆ..(ಪೂಚಂತೆ ಯಾರಂತೆ?) (ಕವನ + ಕಿರು ಬರಹ)

00090. ಅವರಿತ್ತ ಜೀವನ ಭಿಕ್ಷೆ (ಕವನ + ಕಿರು ಬರಹ)

00089. ಶ್ರಾವಣ (ಕವನ + ಕಿರು ಬರಹ)

00088. ಮಿನುಗುತಾರೆ, ಗುನುಗುತ್ತಾರೆ… (ಕವನ + ಕಿರು ಬರಹ)

00087. ಡಾಲರ ರೂಪಾಯಿ ಲೆಕ್ಕಾಚಾರ (ಕವನ + ಕಿರು ಬರಹ)

00086. ಗೋಕುಲದಲಿ ಅಷ್ಟಮಿ , ಗೋಕುಲಾಷ್ಟಮಿ.. (ಕವನ + ಕಿರು ಬರಹ)

00085. ಜಲಚಕ್ರ (ಕವನ + ಕಿರು ಬರಹ)

00084. ವರಮಹಾಲಕ್ಷ್ಮಿ ವ್ರತ (ಕವನ + ಕಿರು ಬರಹ)

00083. ಅಷ್ಟಲಕ್ಷ್ಮಿಯರ ವರ (ಕವನ + ಕಿರು ಬರಹ)

00082. ಭಾರತಿಮನ, ಭಾರತಿತನ! (ಕವನ)

00081. ಮತ್ತೊಂದು ಸ್ವಾತಂತ್ರದ ದಿನ…. (ಕವನ + ಕಿರು ಬರಹ)

00080. ನಿಯತಿಯ ಶಿರ (ಕವನ)

00079. ಬದಲಾಗಬೇಕಾಗಿದ್ದು ನಾವು-ನೀವಾ ಅಥವಾ ಈ ವ್ಯವಸ್ಥೆಯಾ? (ಚಿಂತನೆ + ಲೇಖನ + ವಾಸ್ತವ )

00078. ಕಟ್ಟುವ ಬನ್ನಿ ಕನ್ನಡ ಉಳಿಸಿ ಬೆಳೆಸುವ ಪೀಳಿಗೆ (ಚಿಂತನೆ + ಅಂಕಣ: ಚಿಂತಕರ ಚಾವಡಿ (ಕನ್ನಡ ಸಂಘ)+ ಲೇಖನ + ಸಿಂಚನ)

00077. ಮೋಡ ಚುಂಬನ..ಗಾಢಾಲಿಂಗನ.. (ಕವನ + ಕಿರು ಬರಹ)

00076. ಎರಡು ಆಷಾಡ ಗೀತೆಗಳು (ಕವನ + ಕಿರು ಬರಹ)

00075. ಪುಟ್ಟನ ಅಳಲು .. (ಕವನ + ಕಿರು ಬರಹ)

00074. ಕಲಿಯಲು ಎಲ್ಲಿದೆ ಬಿಡುವು? (ಕವನ + ಕಿರು ಬರಹ)

00073. ದೆವ್ವ ಭೂತದ ಭೀತಿ! (ಕವನ)

00072. ಆಧ್ಯಾತ್ಮಿಕ ಕರ ಬಾಡಿಗೆ ತರ..! (ಕವನ + ಕಿರು ಬರಹ)

00071. ಅಸಂಗತ..! (ಕವನ + ಕಿರು ಬರಹ)

00070. ಹೆಣ್ಮನದ ಹವಾಗುಣ….! (ಕವನ + ಕಿರು ಬರಹ)

00069. ಬಿಟ್ಟುಬಿಡಿ ಸಿಗರೇಟು…! (ಬಿಟ್ಟು ಬೀಡಿ ಸಿಗರೇಟು..) (ಕವನ + ವಾಸ್ತವ)

00068. ಚಿಲ್ಲರೆ ಅಂಗಡಿ ಕಾಕ , ರೀಟೇಲಲಿ ಅಕ್ಕಿ..! ( ಕವನ + ವಾಸ್ತವ)

00067. ಧೂಮಸ್ನಾನ….! (ಕವನ + ವಾಸ್ತವ)

00066. ಧೂಮ-ಸಾಹಿತ್ಯ…! (ಕವನ + ವಾಸ್ತವ)

00065. ಸರಿ ತಪ್ಪುಗಳ ಲೆಕ್ಕ (ಚಿತ್ರಗುಪ್ತ ವಾಗ್ವಾದ – ಪೂರ್ವಾರ್ಧ: ಲಘು ಹಾಸ್ಯದ ಧಾಟಿ) (ಕವನ + ಕಿರು ಬರಹ)

00064. ಗಂಗಾವತಾರಣ (ಗಂಗಾ + ಅವತಾರ + ರಣ) (ಕವನ + ಬರಹ + ವಾಸ್ತವ + ಪೌರಾಣಿಕ)

00063. ಗಂಗಾವತರಣ…! (ಕವನ + ಕಿರು ಬರಹ)

00062. ಪಾಂಚಾಲಿಯ ಹಾಡು (ಕವನ + ಕಿರು ಬರಹ)

00061. ಈ ಅಪ್ಪಗಳು (ಕವನ + ಕಿರು ಬರಹ)

00060. ಸಾವೆಂಬ ಸಕಲೇಶಪುರದಲ್ಲಿ….!

00059. ನಿರಂತರ ಕುಣಿತ! (ಕವನ)

00058. ಗುಂಪಿನೊಳಗವಿತಿದೆಯೆ ವರ್ಣ? (ಕವನ + ಕಿರು ಬರಹ)

00057. ಈ ದಿನ ತನು ಮನ ಭಾವ….! (ಕವನ)

00056. ಹಿತ್ತಲ ಗಿಡದ ಮದ್ದು (ಕವನ + ಕಿರು ಬರಹ)

00055. ಏಕಾಂತದ ಏಕಾಂತ…! (ಕವನ + ಕಿರು ಬರಹ)

00054. ಈ ಅಮ್ಮಗಳು (ಕವನ + ಕಿರು ಬರಹ)

00053. ಚುನಾವಣಾ ಫಲಿತಾಂಶ ! (ಕವನ)

00052. ಸೃಷ್ಟಿ ರಹಸ್ಯ..! (ಈ ಅಂಡ ಪಿಂಡ ಬ್ರಹ್ಮಾಂಡದ ಸಶೇಷ ಭಾಗ) (ಕವನ + ಕಿರು ಬರಹ)

00051. ಈ ಅಂಡ ಪಿಂಡ ಬ್ರಹ್ಮಾಂಡ …(ಕವನ + ಕಿರು ಬರಹ)

00050. ಈ ಏಪ್ರಿಲ್ಲಿಗೇಕೊ ಮುನಿಸು…(ಕವನ + ಕಿರು ಬರಹ)

00049. ಯುಗಾದಿಯಾಗಲಿ ಜಾಗತಿಕ…! (ಕವನ)

00048. ಒತ್ತಡಗಳ ಬೆತ್ತ ! (ಕವನ)

00047. ಸುಖಕಿರುವ ಅವಸರ….! (ಕವನ)

00046. ತ್ಸುನಾಮಿ ಹೊತ್ತಲಿ…(ಕವನ)

00045. ಗುಬ್ಬಣ್ಣನ ಸ್ವಗತಗಳು (ಚುಟುಕಗಳು)

00044. ಮುಗಿದರೆ ಇಹ ವ್ಯಾಪಾರ…..(ಕವನ)

00043. ಮಾತಿಗೊಬ್ಬರ ….(ಕವನ)

00042. ವಚನದಲ್ಲಿ ನಾಮಾಮೃತ ತುಂಬಿದ ವಚನಾಂಜಲಿ ಕಾರ್ಯಕ್ರಮ (ವರದಿ) (ಕನ್ನಡ ಸಂಘ + ವರದಿ + ಲೇಖನ)

00041. ‘ಕನ್ನಡ ಪ್ರಭ’ದ ಕಬ್ಬಿಗ ತೋಟದಲ್ಲರಳಿದ ಡಬ್ಲ್ಯು. ಬಿ. ಏಟ್ಸನ ಕವನ : ನನ್ನ ಮೊದಲ ಅನುವಾದದ ಯತ್ನ..(ಕವನ + ಬರಹ)

00040. ಆಗ್ನೇಯೇಷ್ಯಾದ ಹಣ್ಣಿನ ರಾಣಿ – ‘ಮಾಂಗಸ್ಟೀನ್’! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00039. “ಮುದ್ದಣ್ಣ ಮನೋರಮೆ ಕಲಿತ ಚೀನಿ ಭಾಷೆ – 01!” (ಹಾಸ್ಯಬರಹ + ಹರಟೆ + ವ್ಯಂಗ್ಯ)

00038 – ಹೊಸ (ಹಳೆ) ರುಚಿ: “ಹಸಿ-ಹುಳಿ” (ಹೊಸ ರುಚಿ + ಲಘು ಹಾಸ್ಯ)

00037 – ರುಚಿಗೆ ರಾಜಾ, ವಾಸನೆಯೆ ಗಾರ್ಬೇಜಾ! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00036 – ಈ ಕೆಂಪಮ್ಮನ ಹೆಸರೆ ಡ್ರಾಗನ್ ಫ್ರೂಟು, ನೋಡಲೆ ಸೊಗಸು ಅವಳಾಕಿದ ಸೂಟು! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00035 – ಜುಟ್ಟಿನ ಬಟ್ಟೆ ಹೊದ್ದ ‘ಕೇಶೀರಾಜ’, ಮುತ್ತಿನ ಬಣ್ಣದ ‘ರಂಬೂತಾನ್’ ಹಣ್ಣೆ ಖನಿಜ! (ಹಣ್ಣುಗಳ ಪರಿಚಯ + ಲಘು ಹಾಸ್ಯ)

00034 – ವಿಷಾಪಹಾರಿ ‘ಡ್ರಾಗನ್ನಿನ ಕಣ್ಣು’, ಈ ರುಜಾಪಹಾರಿ ‘ಲೊಂಗನ್’ ಹಣ್ಣು! (ಹಣ್ಣುಗಳ ಪರಿಚಯ + ಲಘು ಹಾಸ್ಯ)

033A – ಸಿಂಗಾಪುರದ “ಹಾವ್ ಪಾರ ವಿಲ್ಲಾ” ದೃಶ್ಯ ಕಲಾ ತೋಟ! (photos) (ಪ್ರವಾಸಿ ತಾಣ ಪರಿಚಯ + ಪ್ರವಾಸ ಅನುಭವ)

033 – ಸಿಂಗಪುರದಲ್ಲಿನ ಚೀಣಿ ದೃಶ್ಯ ಕಾವ್ಯ “ಹಾವ್ ಪಾರ್ ವಿಲ್ಲಾ” ( ಪ್ರವಾಸಿ ತಾಣ ಪರಿಚಯ + ಪ್ರವಾಸ ಅನುಭವ + ಲಘು ಹಾಸ್ಯ)

00032 – ಸಂಪತ್ತಿನ ಬೀಜ, ಸಸಿ ಮತ್ತು ವೃಕ್ಷಗಳ ನೀತಿ ಭೋಧಕ ಕಥೆ (ಆಧುನಿಕ ಪುರಾಣ ಕಥಾ ಕಾಲಕ್ಷೇಪ)! (ಆಧುನಿಕ ನೀತಿ ಭೋಧೆ + ವಿಡಂಬನೆ + ವ್ಯಂಗ್ಯ)

00031 – ಅಪೂರ್ವ ಕವನದ ಕುರಿತು ಹಿರಿಯ ಕವಿಯೊಬ್ಬರ ಮಾತು (ಲೇಖನ + ಬರಹ + ಪ್ರಬಂಧ + ಕವನ + ವ್ಯಕ್ತಿತ್ವ )

00030 – ಪುಸ್ತಕ ವಿಮರ್ಶೆ: ಮಾವೋನ ಕೊನೆಯ ನರ್ತಕ (ಪುಸ್ತಕ ವಿಮರ್ಶೆ)

00029. ಇರುವೆ ಮತ್ತು ಒಂದು ತುಂಡು ರೊಟ್ಟಿಯ ಕಥೆ! (ಆಧುನಿಕ ನೀತಿ ಭೋಧೆ + ವಿಡಂಬನೆ + ವ್ಯಂಗ್ಯ)

00028. ಸಿಂಗನ್ನಡಿಗರಿಂದ ಸಿಂಗನ್ನಡಿಗರಿಗಾಗಿ! – ಸಿಂಗಾರ ಉತ್ಸವ 2013 (ಕನ್ನಡ ಸಂಘ + ವರದಿ + ಲೇಖನ )

00027. ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 02) (ಹಾಸ್ಯಬರಹ + ಹರಟೆ)

00026. ಗುಬ್ಬಣ್ಣನ ಯೂನಿವೆರ್ಸಲ್ ಸ್ಟುಡಿಯೊ ದಂಡಯಾತ್ರೆ ! (ಭಾಗ – 01) (ಹಾಸ್ಯಬರಹ + ಹರಟೆ)

00025. ಸರಿಯಪ್ಪಾ ಸಾಕು ಬಿಡು ಕಲಿಸಿದ್ದು ಸುಗ್ಗಿ, ಉರು ಹೊಡೆದೇ ಕಲಿವೆ ನಾ ಕನ್ನಡದ ಮಗ್ಗಿ! ( ಲಘು ಹಾಸ್ಯ + ಕಥನ + ಅನುಭವ)

00024. ಜತೆ ನೀ ಕಾಡಿಗೆ , ಹೋಗಲಿಲ್ಲವೇಕೆ ಊರ್ಮಿಳೆ? (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00023. ಶೂರ್ಪನಖಿ, ಆಹಾ! ಎಂಥಾ ಸುಖಿ! (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00022. ದುರಂತ ನಾಯಕಿ ಸೀತೆಯ ಬದುಕು………! (ಬರಹ + ಕಾವ್ಯಬರಹ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00021. ಶ್ರೀ ರಾಮನಿಗೇನಿತ್ತನಿವಾರ್ಯ….? (ಬರಹ + ಕವನ + ಪೌರಾಣಿಕ + ವ್ಯಕ್ತಿತ್ವ + ಪಾತ್ರ)

00020. ಈ ದಿನ ಜನುಮದಿನಾ…..! (ಬರಹ + ಕವನ + ನೆನಪು + ಭಾವನೆ)

00019. ‘ಐ’ಗಳ ಪುರಾಣ – 01….’ಐ’-ಪೋನು, ಪಾಡು, ಪ್ಯಾಡುಗಳ ಪಾಡಿನ ಹರಟೆ, (ಪ್ರಬಂಧ + ಲೇಖನ + ಕಥನ + ಹರಟೆ + ಅನುಭವ)

00018. ಸಿಂಗಪೂರ ಸುತ್ತಾಟ, ಊಟ – ಸಿಕ್ಕಿತ ಕನಿಷ್ಟ ರೋಟಿ, ಪರಾಟ..? (ಪ್ರವಾಸದ ಅನುಭವ + ಕವನ + ಲಘು ಹಾಸ್ಯ )

00017. ಹುಡುಕೂ, ವರ್ಷದ್ಹುಡುಕು ..! (ಹಬ್ಬ + ಹರಿದಿನ + ಸಂಪ್ರದಾಯ + ಬರಹ + ಲೇಖನ)

00016. ಅಂತರಂಗದಂತಃಪುರದ ಕದಪದ ಮನದನ್ನೆಯರು…! (ಬರಹ + ಕವನ + ಅನುಭವ + ಆಡಳಿತಾತ್ಮಕ + ಲಘು ಹಾಸ್ಯ)

00015 – ತರ ತರ ಋತು ಸಂವತ್ಸರ……ಹಳತೊಸತು ಮೇಳೈಸಿತೊ ಬೆರೆತು! (ಹಬ್ಬ + ಹರಿದಿನ + ಸಂಪ್ರದಾಯ + ಬರಹ + ಕವನ)

00014 – ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ….! (ನೀಳ್ಗಾವ್ಯ + ಕಾವ್ಯ + ಪೌರಾಣಿಕ)

00013 – ಹಾರುತ ದೂರಾದೂರ…..! (ಅನುಭವ + ಪ್ರಬಂಧ + ಹಾಸ್ಯಲೇಖನ + ಲಘು ಹಾಸ್ಯ)

00012. ಹೆಚ್ಚು ಬೆಲೆಯೆಂದರೆ ಶ್ರೇಷ್ಟ ಗುಣಮಟ್ಟವಿರಬೇಕೆಂದೇನಿಲ್ಲ, ಗೊತ್ತಾ! (ಆಡಳಿತಾತ್ಮಕ + ಮ್ಯಾನೇಜ್ಮೆಂಟು + ವ್ಯವಸ್ಥೆ + ವಾಸ್ತವ)

00011. ಲಘು ಪ್ರಬಂಧ: ನನ್ನ ಪ್ರಧಾನ ಸಂಪಾದಕ ಹುದ್ದೆ…! (ಅನುಭವ + ಪ್ರಬಂಧ + ಹಾಸ್ಯಲೇಖನ + ಲಘು ಹಾಸ್ಯ)

00010. ವಿಮರ್ಶೆ : ಕವನ ಸಂಕಲನ: “ಅಂತರ ಹಾಗು ಇತರ ಕವನಗಳು” ಕವಿ: ವಸಂತ ಕುಲಕರ್ಣಿ

00009. ತೊಡಕುಗಳನು ಬಿಡಿಸಲು “ತೊಡಕಿನ ಸಿದ್ದಾಂತ – 01” – (ತೊಡಕು ಸಿದ್ದಾಂತ) (ತಾಂತ್ರಿಕ + ಮ್ಯಾನೇಜ್ಮೆಂಟು + ವ್ಯವಸ್ಥೆ )

00008. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(03) (ಬರಹ + ವಿಡಂಬನೆ + ಲೇಖನ)

00007. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(02) (ಬರಹ + ವಿಡಂಬನೆ + ಲೇಖನ)

00006. ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(01) (ಬರಹ + ವಿಡಂಬನೆ + ಲೇಖನ)

00005. ಮೆಲ್ಲುಸಿರೆ ಸವಿಗಾನ….! (ಬರಹ + ಭಾವನೆ + ವಿಮರ್ಶೆ)

00004. ಗಮನೇಶ್ವರಿಯ ಗಮಕ, ವಯಸ್ಸಿನಾ ಮಯಕ…! (ಬರಹ + ಅನುಭವ)

00003. ನೀನೋದಿದ ವಿದ್ಯೆಗೆಲ್ಲಿಡುವೆ ನೈವೇದ್ಯ? (ಲೇಖನ)

00002. ಏನಾಗಿದೀದಿನಗಳಿಗೆ? (ಲೇಖನ)

00001. ಮೊದಲ ಬ್ಲಾಗ್ – ಮನದಿಂಗಿತಗಳ ಸ್ವಗತ! (ಬರಹ + ಕವನ)