00519. ನಾ ನಿಮಿತ್ತ ನೀ ನಿಮಿತ್ತ…
_____________________________
ಒಂದು ರೀತಿ ಉಪದೇಶದ ಧಾಟಿಯಲ್ಲಿ ನಾವಿಲ್ಲಿ ಬರಿ ನಿಮಿತ್ತ ಮಾತ್ರರು ಎನ್ನುತ್ತಲೆ, ಸಂಸಾರ ಶರಧಿಯನು ನಿಭಾಯಿಸಲೆದುರಾಗುವ ಅಡೆತಡೆ, ಸಂಕಷ್ಟಗಳನು ಹೆಸರಿಸುತ್ತಲೆ ಅದನ್ನೆದುರಿಸೊ ಸ್ಥೈರ್ಯ ತುಂಬಿಸಲು ಯತ್ನಿಸುತ್ತ ಸಾಗುವ ಲಹರಿ. ಏನು ಮಾಡಿದರೂ, ನಾವಿಲ್ಲಿ ನಿಮಿತ್ತ ಮಾತ್ರದವರಾಗಿರುವವರು; ಎಷ್ಟೇ ತಿಣುಕಾಡಿದರೂ, ಅರಚಾಡಿದರೂ, ಅದರಿಂದಾಚೆಗೇನೂ ಮಾಡಲಾಗದ ಅಸಹಾಯಕರು. ಹೀಗಿರುವಾಗ ಸುಮ್ಮನೆ ಹೊಡೆದಾಟ ಬಿಟ್ಟು ಸಾವರಿಸಿಕೊಂಡು ಹೋಗುತ್ತ, ಎಲ್ಲರ ಮನೆಯಂತೆ ನಮ್ಮ ಮನೆ ದೋಸೆಯೂ ತೂತೆ ಎಂಬುದನರಿತು, ಪರರ ನಡುವೆ ಅಪಹಾಸ್ಯಕ್ಕೆಡೆಗೊಡದಂತೆ ಸಂಭಾಳಿಸಿಕೊಂಡು ಹೋಗುವುದೊಳಿತು ಎನ್ನುವ ಭಾವಾರ್ಥದಲಿ ಕೊನೆಗೊಳ್ಳುತ್ತದೆ.
(picture source: http://tse1.mm.bing.net/th?id=OIP.M1ef6b04eae07673e50fd152ffa63acdfo0&pid=15.1)
ಈ ಕವನದ ಮತ್ತೊಂದು ಪುಟ್ಟ ವಿಶೇಷವಿದೆ – ಬರಹದ ಜೋಡಣೆಯಲಿರುವ ಆಕಾರ. ಏಳು ಸಾಲಿಂದ ಆರಂಭವಾಗಿ, ಎರಡೆರಡು ಸಾಲು ಹೆಚ್ಚುತ್ತಾ ಹದಿಮೂರು ಸಾಲಿನಲ್ಲಿ ಕೊನೆಗೊಳ್ಳುತ್ತದೆ. ಈ ಎರಡು ಸಾಲಿನ ಹೆಚ್ಚಳವೂ ನಿಯಮಬದ್ಧವಾಗಿ, ತಾರ್ಕಿಕವಾಗಿ ಸಾಗುವುದರಿಂದ ತೇರು / ದೇಗುಲದ ಗೋಪುರದಾಕಾರ ಪಡೆವ ಪ್ರತಿ ಪ್ಯಾರವು ಓದುತ್ತಾ ಹೋದಂತೆಗಾತ್ರದಲ್ಲಿ ದೊಡ್ಡದಾಗುತ್ತ ಹೋಗುತ್ತದೆ – ಚಿಕ್ಕದನ್ನು ದೊಡ್ಡದು ಮಾಡುವುದು ಅಥವಾ ದೊಡ್ಡದನ್ನು ಚಿಕ್ಕದು ಮಾಡುವುದು ನಮ್ಮನಮ್ಮ ಭಾವಾನುಸರಣೆಗನುಗುಣವಾಗಿ ಎಂಬುದನ್ನು ಸಾಂಕೇತಿಸುತ್ತ.
ಒಮ್ಮೆ
ನೋಡು ನೀನಿತ್ತ,
ನಾ ನಿಮಿತ್ತ ನೀ ನಿಮಿತ್ತ;
ನಮ್ಮ ಸುತ್ತಾ ಬೆಳೆದರೂ ಹುತ್ತ
ನಾವೆಷ್ಟು ಪದರಗುಟ್ಟಿದರೂ ಅತ್ತ ಇತ್ತ
ನಿನಗೊಂದೆ ಒಂದು ಸತ್ಯ ಗೊತ್ತ?
ನಾವು ನಿಮಿತ್ತ, ಅವಗೆಲ್ಲ ಗೊತ್ತ ||
ನಾವು
ಹುಡುಕಿ ಕಾರಣ,
ಗುದ್ದಾಡಿದರು ವಿನಾಕಾರಣ
ಕಟ್ಟಿ ಕುಂಟು ನೆಪಗಳ ತೋರಣ
ಬೈದು ಹಂಚಾಡಿ ಬೈಗುಳದ ಆಭರಣ;
ಕೊಟ್ಟು ಹಿನ್ನಲೆ ಸಂಗೀತ ಮನ ತಲ್ಲಣ
ತಿಳಿಸೆ ನಿಜದೊಳಗಣ ನಿಜಗುಣ,
ರವಿಗುಂಟೊ ಮಕರ ಸಂಕ್ರಮಣ
ಜಗಳ ಕದನ ಬದುಕಿನ್ಹವಾಗುಣ ||
ಸಹಜ
ಸಂಸಾರ ಶರಧಿ,
ನಡುಕವುಟ್ಟಿಸೊ ಎಳೆ ವರದಿ
ನಾಸರಿ ನೀಸರಿಗಳ ಜಡ ಸರದಿ;
ಬಿಡದೆಲೆ ಸುರಿವ ತಪ್ಪಲೆ ಮಳೆ ಭರದಿ
ಮಳೆ ಬಿದ್ದ ಮೇಲೆ ಬೇಸತ್ತ ಇಳೆ ತೆರದಿ
ತುಂತುಳುಕಿ ಹೊಳೆ ಹಸಿರ ಭುವಿ ಗಾದಿ.
ಅನುಭೋಗ ಇಳೆ ಮಳೆ ಜಗಳದಿ
ನೆಲತಣಿದು ಪೈರಾಗೊ ತಳಹದಿ
ಫಲಿತಾಂಶ ಜನ ಮೆಚ್ಚುವ ತೆರದಿ
ಹೊರಮುಚ್ಚಿ ಒಳಬಿಚ್ಚಿ ಒಳಗುದಿ ||
ಸಂಸಾರ
ಗುಟ್ಟು ವ್ಯಾಧಿ ರಟ್ಟು.
ನಿಮಿತ್ತಗಳ ಎಳೆ ನಿಂಬೆ ಪಟ್ಟು
ಇದಮಿತ್ಥಂ ಎಂದಾದರೆ ಎಡವಟ್ಟು
ಎಳಿಬೇಕು ನಾ ಎಡಕಟ್ಟು ನೀ ಬಲಗಟ್ಟು;
ನೊಗವೆತ್ತಿ ನಡಿಬೇಕು ಎತ್ತಿನ ಸಾರೋಟು
ಅಡವಿಟ್ಟು ದುಡಿಬೇಕು ಘನತೆಗೂ ಸೌಟು,
ತೆಂಗಾಯೊಡೆದ ಮಾರಿಗಾರತಿ ತಂಬಿಟ್ಟು.
ಸಡಿಲ ವಾತಾವರಣವಾಗಿಸಿಟ್ಟು
ಹೀಗೆ ಮಾಡಬೇಕು ಇಷ್ಟ ಪಟ್ಟು,
ನಡೆಸಿ ಪೂಜೆ ವ್ರತ ಕಟ್ಟು ನಿಟ್ಟು
ಏನೆ ಮಾಡಿದರೂ ಮನಸನಿಟ್ಟು
ನಿಮಿತ್ತತೆ ನಮ್ಮ ಕಾಯೊಗುಟ್ಟು ||
– ನಾಗೇಶ ಮೈಸೂರು