02081. ಚರಾಚರ ಸಂಸಾರ..


02081. ಚರಾಚರ ಸಂಸಾರ.. 
________________________________


ಮರಗಳೇ ನೀವಚರ
ನಾ ನಡೆದಾಡುವ ಸಂಚರ
ನಾವಿಬ್ಬರೂ ಸೃಷ್ಟಿ ಜೀವಚರ
ಸಮತೋಲನ ಇಹದಾ ಸಾರ !

ನಿಂತಲ್ಲೇ ನೀವ್ಹೂವು ಕಾಯಿ ಹಣ್ಣು
ಸಂಚಲನೆಯಲೇ ನಾವ್ಗಂಡು ಹೆಣ್ಣು
ನಿಮ್ಮ ತಲೆ ಋತುವಿಗುದುರ್ಹುಟ್ಟೋ ಎಲೆ
ನಮ್ಮ ಕಾಯದ ಬೆಲೆ ಮುದುರೋ ಆಯಸ್ಸಲೆ !

ನಿಮಗುಂಟು ನಂಟು ಕಪ್ಪು ಬಿಳಿ ಬಣ್ಣದಂಟು
ನಾವುಡಬೇಕೆಲ್ಲ ಕೃತಕ ಹುಟ್ಟುಡುಗೆಯ ಹೊರತು
ಒರಟು ಮೃದುಲಾ ಕಠೋರ ನಯ ವಂಚಕ ಭಾವ
ಸಹಿಸೆಲ್ಲಾ ಅತ್ಯಾಚಾರ ಕೊಡುವಿರೆಂತು ನಿರ್ಭಾವ ?

ನೆರಳೀವ ಸಹನೆ ಬುದ್ಧನಿಗೂ ಜ್ಞಾನದ ಮನೆ
ತಪ ಕುಳಿತಾ ಮರಕೆ ಕೊಡಲಿ ಮಸೆವ ತಾನೇ
ಆದರೂ ಬೇಕಿಲ್ಲಿ ಸಾಲು ಮರ ಸುಂದರ ಸ್ವಾರ್ಥ
ಎಲ್ಲೋ ಅಡಗಿದ ಭೀತಿಗೆ ವಿಮೆಯಾಗಿ ಉಸಿರಾಟ

ತಪ್ಪುಒಪ್ಪುಗಳಿಗಿಹರು ಕವಿ ಪುಂಗವ ಪಂಡಿತರು
ಕಂತೆ ಬರೆದು ಕೆತ್ತನೆ ಕೆತ್ತಿ ಕುಂಚದೆ ಹಿಡಿದಿಟ್ಟವರು
ಯಾಕೋ ಬಿತ್ತುವರಿಲ್ಲ ಬಿತ್ತಿ ಬೆಳೆವ ಶ್ರಮದಾನ
ನೀಡದಿರೆ ಕಾಣಬೇಕಷ್ಟೆ ಚಿತ್ತಾರದೆ ಹಸಿರಿನ ಮೈದಾನ !


– ನಾಗೇಶ ಮೈಸೂರು
೩೦.೦೬.೨೦೧೭

(Picture source internet / social media / Creative Commons)

00519. ನಾ ನಿಮಿತ್ತ ನೀ ನಿಮಿತ್ತ …


00519. ನಾ ನಿಮಿತ್ತ ನೀ ನಿಮಿತ್ತ…
_____________________________

ಒಂದು ರೀತಿ ಉಪದೇಶದ ಧಾಟಿಯಲ್ಲಿ ನಾವಿಲ್ಲಿ ಬರಿ ನಿಮಿತ್ತ ಮಾತ್ರರು ಎನ್ನುತ್ತಲೆ, ಸಂಸಾರ ಶರಧಿಯನು ನಿಭಾಯಿಸಲೆದುರಾಗುವ ಅಡೆತಡೆ, ಸಂಕಷ್ಟಗಳನು ಹೆಸರಿಸುತ್ತಲೆ ಅದನ್ನೆದುರಿಸೊ ಸ್ಥೈರ್ಯ ತುಂಬಿಸಲು ಯತ್ನಿಸುತ್ತ ಸಾಗುವ ಲಹರಿ. ಏನು ಮಾಡಿದರೂ, ನಾವಿಲ್ಲಿ ನಿಮಿತ್ತ ಮಾತ್ರದವರಾಗಿರುವವರು; ಎಷ್ಟೇ ತಿಣುಕಾಡಿದರೂ, ಅರಚಾಡಿದರೂ, ಅದರಿಂದಾಚೆಗೇನೂ ಮಾಡಲಾಗದ ಅಸಹಾಯಕರು. ಹೀಗಿರುವಾಗ ಸುಮ್ಮನೆ ಹೊಡೆದಾಟ ಬಿಟ್ಟು ಸಾವರಿಸಿಕೊಂಡು ಹೋಗುತ್ತ, ಎಲ್ಲರ ಮನೆಯಂತೆ ನಮ್ಮ ಮನೆ ದೋಸೆಯೂ ತೂತೆ ಎಂಬುದನರಿತು, ಪರರ ನಡುವೆ ಅಪಹಾಸ್ಯಕ್ಕೆಡೆಗೊಡದಂತೆ ಸಂಭಾಳಿಸಿಕೊಂಡು ಹೋಗುವುದೊಳಿತು ಎನ್ನುವ ಭಾವಾರ್ಥದಲಿ ಕೊನೆಗೊಳ್ಳುತ್ತದೆ.

  
(picture source: http://tse1.mm.bing.net/th?id=OIP.M1ef6b04eae07673e50fd152ffa63acdfo0&pid=15.1)

ಈ ಕವನದ ಮತ್ತೊಂದು ಪುಟ್ಟ ವಿಶೇಷವಿದೆ – ಬರಹದ ಜೋಡಣೆಯಲಿರುವ ಆಕಾರ. ಏಳು ಸಾಲಿಂದ ಆರಂಭವಾಗಿ, ಎರಡೆರಡು ಸಾಲು ಹೆಚ್ಚುತ್ತಾ ಹದಿಮೂರು ಸಾಲಿನಲ್ಲಿ ಕೊನೆಗೊಳ್ಳುತ್ತದೆ. ಈ ಎರಡು ಸಾಲಿನ ಹೆಚ್ಚಳವೂ ನಿಯಮಬದ್ಧವಾಗಿ, ತಾರ್ಕಿಕವಾಗಿ ಸಾಗುವುದರಿಂದ ತೇರು / ದೇಗುಲದ ಗೋಪುರದಾಕಾರ ಪಡೆವ ಪ್ರತಿ ಪ್ಯಾರವು ಓದುತ್ತಾ ಹೋದಂತೆಗಾತ್ರದಲ್ಲಿ ದೊಡ್ಡದಾಗುತ್ತ ಹೋಗುತ್ತದೆ – ಚಿಕ್ಕದನ್ನು ದೊಡ್ಡದು ಮಾಡುವುದು ಅಥವಾ ದೊಡ್ಡದನ್ನು ಚಿಕ್ಕದು ಮಾಡುವುದು ನಮ್ಮನಮ್ಮ ಭಾವಾನುಸರಣೆಗನುಗುಣವಾಗಿ ಎಂಬುದನ್ನು ಸಾಂಕೇತಿಸುತ್ತ.

ಒಮ್ಮೆ
ನೋಡು ನೀನಿತ್ತ,
ನಾ ನಿಮಿತ್ತ ನೀ ನಿಮಿತ್ತ;
ನಮ್ಮ ಸುತ್ತಾ ಬೆಳೆದರೂ ಹುತ್ತ
ನಾವೆಷ್ಟು ಪದರಗುಟ್ಟಿದರೂ ಅತ್ತ ಇತ್ತ
ನಿನಗೊಂದೆ ಒಂದು ಸತ್ಯ ಗೊತ್ತ?
ನಾವು ನಿಮಿತ್ತ, ಅವಗೆಲ್ಲ ಗೊತ್ತ ||

ನಾವು
ಹುಡುಕಿ ಕಾರಣ,
ಗುದ್ದಾಡಿದರು ವಿನಾಕಾರಣ
ಕಟ್ಟಿ ಕುಂಟು ನೆಪಗಳ ತೋರಣ
ಬೈದು ಹಂಚಾಡಿ ಬೈಗುಳದ ಆಭರಣ;
ಕೊಟ್ಟು ಹಿನ್ನಲೆ ಸಂಗೀತ ಮನ ತಲ್ಲಣ
ತಿಳಿಸೆ ನಿಜದೊಳಗಣ ನಿಜಗುಣ,
ರವಿಗುಂಟೊ ಮಕರ ಸಂಕ್ರಮಣ
ಜಗಳ ಕದನ ಬದುಕಿನ್ಹವಾಗುಣ ||

ಸಹಜ
ಸಂಸಾರ ಶರಧಿ,
ನಡುಕವುಟ್ಟಿಸೊ ಎಳೆ ವರದಿ
ನಾಸರಿ ನೀಸರಿಗಳ ಜಡ ಸರದಿ;
ಬಿಡದೆಲೆ ಸುರಿವ ತಪ್ಪಲೆ ಮಳೆ ಭರದಿ
ಮಳೆ ಬಿದ್ದ ಮೇಲೆ ಬೇಸತ್ತ ಇಳೆ ತೆರದಿ
ತುಂತುಳುಕಿ ಹೊಳೆ ಹಸಿರ ಭುವಿ ಗಾದಿ.
ಅನುಭೋಗ ಇಳೆ ಮಳೆ ಜಗಳದಿ
ನೆಲತಣಿದು ಪೈರಾಗೊ ತಳಹದಿ
ಫಲಿತಾಂಶ ಜನ ಮೆಚ್ಚುವ ತೆರದಿ
ಹೊರಮುಚ್ಚಿ ಒಳಬಿಚ್ಚಿ ಒಳಗುದಿ ||

ಸಂಸಾರ
ಗುಟ್ಟು ವ್ಯಾಧಿ ರಟ್ಟು.
ನಿಮಿತ್ತಗಳ ಎಳೆ ನಿಂಬೆ ಪಟ್ಟು
ಇದಮಿತ್ಥಂ ಎಂದಾದರೆ ಎಡವಟ್ಟು
ಎಳಿಬೇಕು ನಾ ಎಡಕಟ್ಟು ನೀ ಬಲಗಟ್ಟು;
ನೊಗವೆತ್ತಿ ನಡಿಬೇಕು ಎತ್ತಿನ ಸಾರೋಟು
ಅಡವಿಟ್ಟು ದುಡಿಬೇಕು ಘನತೆಗೂ ಸೌಟು,
ತೆಂಗಾಯೊಡೆದ ಮಾರಿಗಾರತಿ ತಂಬಿಟ್ಟು.
ಸಡಿಲ ವಾತಾವರಣವಾಗಿಸಿಟ್ಟು
ಹೀಗೆ ಮಾಡಬೇಕು ಇಷ್ಟ ಪಟ್ಟು,
ನಡೆಸಿ ಪೂಜೆ ವ್ರತ ಕಟ್ಟು ನಿಟ್ಟು
ಏನೆ ಮಾಡಿದರೂ ಮನಸನಿಟ್ಟು
ನಿಮಿತ್ತತೆ ನಮ್ಮ ಕಾಯೊಗುಟ್ಟು ||

– ನಾಗೇಶ ಮೈಸೂರು