01636. ಕೃಷ್ಣಭೂಪ, ರಾಧಾಲಾಪ..
____________________________________
ಕೃಷ್ಣ ಕೃಷ್ಣ ಕೃಷ್ಣಾ ಕೃಷ್ಣಾ..
ಕಂಡಿದ್ದೆ ನಿನ್ನ ತೊಟ್ಟಿಲಿಂದ
ತೊಟ್ಟಿಕ್ಕಿದ ತುಟಿ ಮೊಸರು
ಬೆಣ್ಣೆಯೊಳಗಿತ್ತು ನನ್ನುಸಿರು… || ೦೧ ||
ಹಿರಿಯಾಕೆ ಬರಿ ಐದೇ ವರ್ಷ
ನೀನ್ಯಾಕೆ ನೆಪವಾಗಿಸಿದೆ ?
ಹೌದೆಂದ ಪ್ರೀತಿಯ ಕರಡು
ಹಣ್ಣಾಗದೆ ಬದುಕೆಲ್ಲ ಬರುಡು…! || ೦೨ ||
ದಮನಿಸಿದೆ ದಾನವ ಸೈನ್ಯ
ನೀರಾಟದೆ ಗೋಪಿಕೆ ತಲ್ಲಣ
ನೀರಡಿಸಿ ಬಿಟ್ಟೆ ಬತ್ತಿಸಿ ಪ್ರೀತಿ
ಹೊತ್ತಿಸಿ ಆರಾಧನೆಯ ಪ್ರಣತಿ.. || ೦೩ ||
ಕೊನೆಗೂ ಹೊರಟೆ ತೊರೆದು..
ಜರಿಯಲಾರ? ಬರಿದು ನಾನು
ಗೆಳತಿಯ ಪಟ್ಟ ಕಟ್ಟಿ ವಿದಾಯ
ಕಂಬನಿ ತೊಟ್ಟ ಹೀರಿ ಸೆರಗಂಚು || ೦೪ ||
ಬಿಡಳವಳಬ್ಬೆ ಬೆನ್ನಲಿ ಕಾಡುತ್ತ
ಕಟ್ಟಿ ನಿನ್ನ ನೆನಪಿಗೊಂದು ಗಂಟು
ಗಂಡನೊಬ್ಬ ಪಾತ್ರಗಳು ಹಲವು
ಮಕ್ಕಳು ಮರಿ ಸಂಸಾರದ ಹುತ್ತ || ೦೫ ||
ಮುಗಿಯಿತೆಲ್ಲ ಮುದಿಯಾಯ್ತಲ್ಲಿ
ಹದಿಹರೆಯದ ಬಿಸುಪಿನ್ನು ಮನದೆ
ದಡ ಸೇರಿಸಿದೆನೆಲ್ಲರ ತರುವಾಯ
ಹುಡುಕಿದೆ ಸುಕ್ಕಾದ ಮೊಗ ನಿನ್ನ || ೦೬ ||
ವೇಷದೆ ನಿನ್ನರಮನೆ ಸೇರಿದರೇನು
ಕಾಣಲೆಂತೊ ಮಹಿಷಿಯರ ನಡುವೆ ?
ನನ್ನವನಲ್ಲದ ನನ್ನವನವ-ನಲ್ಲ ಕಠಿಣ
ಬೇಸರಿಸದಿರೊ ನನ್ನ ಹಾದಿ ಹಿಡಿದೆನೆ.. || ೦೭ ||
ಬಂದೆಯಲ್ಲ ಬೆನ್ನಟ್ಟಿ, ಬಿಡಲಿಲ್ಲ ನೀನು
ಕಾಡಿದ್ದೇನು ಪ್ರೀತಿಯೊ ಕಾರುಣ್ಯವೊ?
ನನ್ನಾರಾಧನೆ ನಿಲ್ಲದೊ ಬಿಡು ಚಿಂತೆ
ಕೊಟ್ಟುಬಿಡೊಂದು ಕೊನೆರಾಗ ನನದೆ.. || ೦೮ ||
ಏನೀ ಹೃದಯ ವಿದ್ರಾವಕ ಮುರಳಿನಾದ
ಯುಗಯುಗದ ನೋವೆಲ್ಲ ಕೊಳಲಿಂದ
ಹೊರಟಾಯ್ತೊ ಯಾಕೊ ಮುರುಟೋಯ್ತು?
ಮುಗಿವ ಮೊದಲೆ ಕೊಳಲೆ ಮುರಿದೊಯ್ತೊ ! || ೦೯ ||
ಕಟ್ಟಿದರೊ ಕಟ್ಟಿಹರೊ ರಂಜನೀಯ ಕಥೆ
ನಮ್ಮ ಹೊರತೆಲ್ಲಗು ನಮ್ಮ ಸ್ವಗತದ ಮಾತು
ನೀನಾದೆಯೊ ನಾನಾದೆನೊ ನಮ್ಮೊಳಗೈಕ್ಯ
ಯಾರೆಲ್ಲ ಹಾಡಿಹ ಚರಿತೆ ನಮ್ಮನಧಿಗಮಿಸುತ್ತ || ೧೦ ||
ಇದು ಯುಗ ಇದು ಕೊರಗು ಯಾರಿಗೆ ಪ್ರೀತಿ?
ಹೋಗಲಿ ಬಿಡು ಪಂಚಭೂತಗಳಿಗಾಗಲಿ ತೃಪ್ತಿ
ನಿನದೊಂದಿರಲಿ ಮೌನ ನನದೊಂದು ಮೋಹ
ತುಟಿಯಂಚಲಿ ನಕ್ಕು ಜಗವ, ಹೀಗೆ ವಂಚಿಸೋಣ ! || ೧೧ ||
– ನಾಗೇಶ ಮೈಸೂರು
೦೩.೦೩.೨೦೧೮